Reservation in Promotion : ಬಡ್ತಿ ಮೀಸಲು ರಾಜ್ಯಗಳ ನಿರ್ಧಾರ ಎಂದ ಸುಪ್ರೀಂ ಕೋರ್ಟ್
- ಯಾವುದೇ ಮಾನದಂಡ ವಿಧಿಸಲು ನಿರಾಕರಣೆ
- ಪ್ರಾತಿನಿಧ್ಯ ವಿವರ ಸಂಗ್ರಹ ರಾಜ್ಯಗಳ ಕರ್ತವ್ಯ
- ಮಹತ್ವದ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್
ನವದೆಹಲಿ (ಜ.28): ಸರ್ಕಾರಿ ಹುದ್ದೆಗಳ ಬಡ್ತಿಯಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ನೀಡಬೇಕೆಂಬ ವಿಚಾರಕ್ಕೆ ಸಂಬಂಧಿಸಿ ಯಾವುದೇ ಮಾನದಂಡ (Court cannot lay down yardstick) ವಿಧಿಸಲು ಸುಪ್ರೀಂಕೋರ್ಟ್ (Supreme Court) ನಿರಾಕರಿಸಿದೆ. ಆದರೆ, ‘ಪರಿಶಿಷ್ಟಜಾತಿ/ಪಂಗಡಗಳ ಪ್ರಾತಿನಿಧ್ಯದ ಅಸಮರ್ಪಕತೆಯ ಬಗ್ಗೆ ದತ್ತಾಂಶ ಸಂಗ್ರಹಿಸುವುದು ರಾಜ್ಯಗಳ ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ’ ಎಂಬ ಮಹತ್ವದ ತೀರ್ಪು ನೀಡಿದೆ.
ಈ ಬಗ್ಗೆ ಶುಕ್ರವಾರ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ನಾಗೇಶ್ವರ ರಾವ್ (L Nageswara Rao) ನೇತೃತ್ವದ ತ್ರಿಸದಸ್ಯ ಪೀಠ, ‘ಬಡ್ತಿ ನೀಡುವ ಸಂದರ್ಭದಲ್ಲಿ ಸರ್ಕಾರಿ ಹುದ್ದೆಗಳಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡಗಳ ಪ್ರಾತಿನಿಧ್ಯದ ಅಸಮರ್ಪಕತೆ ಗುರುತಿಸುವುದು ರಾಜ್ಯ ಸರ್ಕಾರಗಳ ಹೊಣೆಗಾರಿಕೆ. ಈಗಾಗಲೇ ನಾವು ಈ ಹಿಂದಿನ ಜರ್ನೈಲ್ ಸಿಂಗ್ ಮತ್ತು ನಾಗರಾಜ್ ಪ್ರಕರಣಗಳಲ್ಲಿ, ಬಡ್ತಿ ಮೀಸಲಿಗೆ ಸಂಬಂಧಿಸಿದಂತೆ ಮಾನದಂಡ ವಿಧಿಸುವುದಿಲ್ಲ ಎಂದು ಹೇಳಿದ್ದೇವೆ’ ಎಂದಿತು.
‘ಇಡೀ ಸೇವೆಗೆ ಸಂಬಂಧಿಸಿದಂತೆ ಬಡ್ತಿ ಮೀಸಲು ನಿಗದಿ ಆಗಬಾರದು. ಯಾವ ಹುದ್ದೆಗೆ ಬಡ್ತಿ ಬೇಡಿಕೆ ಬರುತ್ತದೋ ಆ ಹುದ್ದೆ ಅಥವಾ ದರ್ಜೆಯಲ್ಲಿ ಎಷ್ಟುಪ್ರಾತಿನಿಧ್ಯ ಎಸ್ಸಿ-ಎಸ್ಟಿ ವರ್ಗಕ್ಕೆ ಸಿಕ್ಕಿದೆ ಎಂಬುದರ ಮಾಹಿತಿಯನ್ನು ಹಾಗೂ ಪ್ರಾತಿನಿಧ್ಯದ ಅಸಮರ್ಪಕತೆಯ ಮಾಹಿತಿಯನ್ನು ಸರ್ಕಾರ ಪಡೆಯಬೇಕು’ ಎಂದು ಪೀಠ ಅಭಿಪ್ರಾಯಪಟ್ಟಿತು. ‘ಇನ್ನು ಎಷ್ಟುಪ್ರಾತಿನಿಧ್ಯ ಎಸ್ಸಿ-ಎಸ್ಟಿ ವರ್ಗಕ್ಕಿದೆ ಎಂಬ ಅಂಶವನ್ನು ನಾವು ನೋಡಲು ಹೋಗಿಲ್ಲ. ಪ್ರಸಕ್ತ ಸ್ಥಿತಿಯ ಅಂಕಿ-ಅಂಶಗಳನ್ನು ತೆಗೆದುಕೊಂಡು ಆಯಾ ರಾಜ್ಯಗಳು ಬಡ್ತಿ ಮೀಸಲು ನೀಡುವ ಪರಿಶೀಲನೆ ನಡೆಸಬೇಕು’ ಎಂದು ಸ್ಪಷ್ಟಪಡಿಸಿತು. ಈ ಬಗ್ಗೆ ಕಳೆದ ವರ್ಷ ವಾದ-ಪ್ರತಿವಾದ ಆಲಿಸಿದ್ದ ಸುಪ್ರೀಂ ಕೋರ್ಟ್ 2021ರ ಅ.26ರಂದು ತೀರ್ಪು ಕಾಯ್ದಿರಿಸಿತ್ತು.
ಎಸ್ಸಿ-ಎಸ್ಟಿ (SC/ST)ಅಭ್ಯರ್ಥಿಗಳ ಬಡ್ತಿ ಮೀಸಲಾತಿ ಷರತ್ತುಗಳನ್ನು ದುರ್ಬಲಗೊಳಿಸಬೇಡಿ. ಮೀಸಲಾತಿ ನೀಡುವ ಮುನ್ನ ರಾಜ್ಯವು ಪರಿಮಾಣಾತ್ಮಕ ಡೇಟಾ ಸಂಗ್ರಹಿಸಬೇಕು. ಪ್ರಾತಿನಿಧ್ಯದ ಅಸಮರ್ಪಕತೆಯ ಮೌಲ್ಯಮಾಪನದ ಜೊತೆಗೆ ಪರಿಮಾಣಾತ್ಮಕ ದತ್ತಾಂಶ ಸಂಗ್ರಹವೂ ಅತ್ಯಗತ್ಯ. ಮೀಸಲಾತಿ ನೀಡುವ ಮುನ್ನ ಉನ್ನತ ಹುದ್ದೆಗಳ ಪ್ರಾತಿನಿಧ್ಯದ ಮಾಹಿತಿ ಸಂಗ್ರಹ ಅಗತ್ಯ. ಪ್ರಾತಿನಿಧ್ಯವನ್ನು ನಿಗದಿತ ಅವಧಿಯಲ್ಲಿ ಮೌಲ್ಯಮಾಪನ ಮಾಡಬೇಕು. ಅವಧಿ ಎಷ್ಟು ಎಂಬುದನ್ನು ಕೇಂದ್ರ ಸರ್ಕಾರವೇ ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
NEET PG, UG Counselling: ಡಾಕ್ಟರ್ ಗಳಿಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್!
ಕೇಂದ್ರದ ವಾದ: ‘ಸರ್ಕಾರಿ ಉದ್ಯೋಗಗಳಲ್ಲಿ(government jobs) ಎಸ್ಸಿ ಮತ್ತು ಎಸ್ಟಿಗಳಿಗೆ ಬಡ್ತಿ ಮೀಸಲಾತಿ ಜಾರಿಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯಗಳಿಗೆ ಒಂದು ಸಮಾನ, ನಿರ್ದಿಷ್ಟಮತ್ತು ನಿರ್ಣಾಯಕ ಮಾನದಂಡ ರೂಪಿಸಬೇಕು’ ಎಂದು ಈ ಹಿಂದೆ ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಕೋರಿಕೊಂಡಿತ್ತು.
ಅಲ್ಲದೆ, ‘ತುಳಿತಕ್ಕೊಳಪಟ್ಟಸಮುದಾಯಗಳಾದ ಎಸ್ಸಿ ಮತ್ತು ಎಸ್ಟಿಗಳು ಇನ್ನೂ ಮುಖ್ಯ ವಾಹಿನಿಗೆ ಬರುವಲ್ಲಿ ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ದೇಶದ ಹಿತಾಸಕ್ತಿ ಮತ್ತು ಸಮಾನತೆಯ ಅವಕಾಶಕ್ಕಾಗಿ ಮೀಸಲಾತಿ ನೀಡುವ ಮೂಲಕ ಈ ಸಮುದಾಯಗಳನ್ನು ಮುನ್ನೆಲೆಗೆ ತರಬೇಕು. ಒಂದು ವೇಳೆ ಸುಪ್ರೀಂ ಕೋರ್ಟ್ ಸಮಾನ ಮಾನದಂಡ ರೂಪಿಸದಿದ್ದರೆ ಇಂಥ ಹಲವು ಅರ್ಜಿಗಳು ಸಲ್ಲಿಕೆಯಾಗಲಿವೆ. ಅಲ್ಲದೆ ಈ ಸಮಸ್ಯೆಗಳಿಗೆ ಪರಿಹಾರವೇ ಇರುವುದಿಲ್ಲ’ ಎಂದು ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಕೇಳಿಕೊಂಡಿದ್ದರು.
NEET-PG : ಜನವರಿ 12 ರಿಂದ ಕೌನ್ಸೆಲಿಂಗ್ ಪ್ರಾರಂಭ, ಆರೋಗ್ಯ ಸಚಿವರ ಘೋಷಣೆ!
ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಇತರೆ ಮೇಲ್ವರ್ಗದವರಿಗೆ ಸಿಗುವ ಉನ್ನತ ಹುದ್ದೆಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಲಭ್ಯವಾಗುತ್ತಿಲ್ಲ. ಬಡ್ತಿಯಲ್ಲಿ ಮೀಸಲು ಅನಿವಾರ್ಯ, ಸೂಕ್ತ ಮಾರ್ಗಸೂಚಿ ರಚಿಸುವುದು ಅಗತ್ಯವೆಂದು ಕೇಂದ್ರ ಸರ್ಕಾರದಿಂದ ಸುಪ್ರೀಂಕೋರ್ಟ್ ಈ ಹಿಂದೆ ತಿಳಿಸಲಾಗಿತ್ತು. ಎಸ್ಸಿ, ಎಸ್ಟಿ ಬಡ್ತಿ ಮೀಸಲಾತಿ ಕುರಿತು ರಾಜ್ಯಗಳು ನಿರ್ಧರಿಸಬೇಕೆಂದು ಹೇಳಿದ್ದ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.