ಚುನಾವಣೆಯಲ್ಲಿ ಎಲ್ಲ ಮತಗಟ್ಟೆಗಳಲ್ಲಿನ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ (ವಿವಿ ಪ್ಯಾಟ್‌) ಪೇಪರ್ ಸ್ಲಿಪ್‌ ಎಣಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್, ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ. 

ನವದೆಹಲಿ (ಏ.03): ಚುನಾವಣೆಯಲ್ಲಿ ಎಲ್ಲ ಮತಗಟ್ಟೆಗಳಲ್ಲಿನ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ (ವಿವಿ ಪ್ಯಾಟ್‌) ಪೇಪರ್ ಸ್ಲಿಪ್‌ ಎಣಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್, ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ. ಪ್ರಸ್ತುತ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ, ಯಾವುದಾದರೂ 5 ಮತಗಟ್ಟೆಗಳ ವಿದ್ಯುನ್ಮಾನ ಮತಯಂತ್ರಗಳಿಗೆ ಹಾಕಲಾದ ವಿವಿ ಪ್ಯಾಟ್‌ ಮತಗಳನ್ನು ಮಾತ್ರ ಎಣಿಸಿ ತಾಳೆ ಹಾಕಲಾಗುತ್ತದೆ. 

ಆದರೆ ಇವಿಎಂನಲ್ಲಿ ಹಾಕಿದ ಮತ ನಿಜವಾಗಿಯೂ ಆಯ್ಕೆ ಮಾಡಿದ ಅಭ್ಯರ್ಥಿಗೇ ಹೋಗಿದೆಯೇ ಎಂಬುದು ಖಚಿತವಾಗಲು ಎಲ್ಲ ಮತಗಟ್ಟೆಗಳ ವಿವಿಪ್ಯಾಟ್‌ಗಳನ್ನು ಎಣಿಸಬೇಕು. ಹಾಕಿದ ಪ್ರತಿ ಮತವೂ ತಾಳೆ ಆಗಬೇಕು ಎಂದು ಮತ್ತು ವಕೀಲ ಮತ್ತು ಕಾರ್ಯಕರ್ತ ಅರುಣ್ ಕುಮಾರ್ ಅಗರವಾಲ್‌ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆಯನ್ನು ಕೋರ್ಟ್‌ ನಡೆಸುತ್ತಿದೆ. ಆದರೆ ಇದು ತುಂಬಾ ದುಬಾರಿ ವಿಧಾನ ಹಾಗೂ ಮತ ಎಣಿಕೆ ವಿಳಂಬ ಆಗುತ್ತದೆ ಎಂದು ಈ ಹಿಂದೆ ಚುನಾವಣಾ ಆಯೋಗ ಹೇಳಿತ್ತು.

ಕಾಂಗ್ರೆಸ್‌ ಸ್ವಾಗತ: ಸುಪ್ರೀಂ ಕೋರ್ಟ್‌ ಸೂಚನೆಯನ್ನು ಕಾಂಗ್ರೆಸ್‌ ಸ್ವಾಗತಿಸಿದ್ದು ಇದು ಎಲ್ಲೆಡೆ ವಿವಿಪ್ಯಾಟ್‌ ಜಾರಿಯತ್ತ ಮೊದಲ ಹೆಜ್ಜೆ ಎಂದಿದೆ.

ಆರ್ಥಿಕ ಅಶಿಸ್ತೇ ಈ ಪರಿಸ್ಥಿತಿಗೆ ಕಾರಣ: ಕೇರಳಕ್ಕೆ ಸುಪ್ರೀಂಕೋರ್ಟ್‌ ತಪರಾಕಿ

ಮಸೀದಿ ಸಮೀಕ್ಷೆ ತಡೆಗೆ ಸುಪ್ರೀಂ ನಕಾರ: ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ತಮ್ಮದು ಎಂದು ಹೇಳಿಕೊಳ್ಳುವ ಮಧ್ಯಕಾಲೀನ ಯುಗದ ರಚನೆಯಾದ ಭೋಜಶಾಲಾ ಮಸೀದಿ/ಮಂದಿರ ಸಂಕೀರ್ಣದ ‘ವೈಜ್ಞಾನಿಕ ಸಮೀಕ್ಷೆ’ಯನ್ನು ತಡೆಯಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಆದರೆ ಎಎಸ್‌ಐ ಸಮೀಕ್ಷಾ ಫಲಿತಾಂಶ ಆಧರಿಸಿ ತನ್ನ ಅನುಮತಿಯಿಲ್ಲದೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ತಾಕೀತು ಮಾಡಿದೆ. 

ವೈಜ್ಞಾನಿಕ ಸಮೀಕ್ಷೆಗೆ ಮಾ.11ರಂದು ಮಧ್ಯಪ್ರದೇಶ ಹೈಕೋರ್ಟ್‌ ನೀಡಿದ್ದ ಅನುಮತಿ ಪ್ರಶ್ನಿಸಿ ಮೌಲಾನಾ ಕಮಾಲುದ್ದೀನ್ ವೆಲ್ಫೇರ್ ಸೊಸೈಟಿ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠವು ಕೇಂದ್ರ, ಮಧ್ಯಪ್ರದೇಶ ಸರ್ಕಾರ, ಎಎಸ್ಐ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿತು ಹಾಗೂ ಉತ್ತರ ನೀಡಲು 4 ವಾರ ಅವಕಾಶ ನೀಡಿತು.

ನೂರಾರು ವಿಸ್ತಾರ ವಿಮಾನಗಳ ಸಂಚಾರ ಏಕಾಏಕಿ ರದ್ದು, ಪ್ರಯಾಣಿಕರು ಕಂಗಾಲು

ಇದೇ ವೇಳೆ, ಸಮೀಕ್ಷೆ ಫಲಿತಾಂಶ ಆಧರಿಸಿ ತನ್ನ ಅನುಮತಿ ಇಲ್ಲದೆ ಯಾವುದೇ ಕ್ರಮ ಕೈಗೊಳ್ಳಬಾರದು. ಮಸೀದಿ/ಮಂದಿರ ಸಂಕೀರ್ಣಕ್ಕೆ ಧಕ್ಕೆ ಆಗಬಲ್ಲ ಯಾವುದೇ ಉತ್ಖನನ ಮಾಡಬಾರದು ಎಂದು ಅದು ಸೂಚಿಸಿತು. ಹಿಂದೂಗಳು 11ನೇ ಶತಮಾನದ ಈ ಸಂಕೀರ್ಣವನ್ನು ವಾಗ್ದೇವಿ (ಸರಸ್ವತಿ) ಮಂದಿರ ಎಂದು ನಂಬುತ್ತಾರೆ. ಆದರೆ ಮುಸ್ಲಿಂ ಸಮುದಾಯವು ಇದನ್ನು ಕಮಲ್ ಮೌಲಾ ಮಸೀದಿ ಎನ್ನುತ್ತಾರೆ. ಈ ನಡುವೆ ಕೋರ್ಟ್‌ ಅನುಮತಿ ಮೇರೆಗೆ 2003ರಿಂದ ಮಂಗಳವಾರ ಹಿಂದೂಗಳು ಇಲ್ಲಿ ಸರಸ್ವತಿ ಪೂಜೆ ಮಾಡುತ್ತಾರೆ. ಶುಕ್ರವಾರ ಮುಸ್ಲಿಮರು ನಮಾಜ್‌ ಮಾಡುತ್ತಾರೆ.