* ಸಾವಿನ ಕಾರಣ ನೀಡಿಲ್ಲ ಎಂಬ ನೆಪ ಹೇಳಕೂಡದು* ರಾಜ್ಯಗಳಿಗೆ ನ್ಯಾಯಪೀಠ ಸೂಚನೆ* ಕೋವಿಡ್ ಪರಿಹಾರ ನಿರಾಕರಣೆ ಮಾಡಕೂಡದು: ಸುಪ್ರೀಂ
ನವದೆಹಲಿ(ಅ.05): ‘ಮರಣ ಪ್ರಮಾಣ ಪತ್ರದಲ್ಲಿ(Death Certificate) ಸಾವಿಗೆ ಕಾರಣ ನೀಡಿಲ್ಲ’ ಎಂಬ ಕಾರಣ ನೀಡಿ ಕೋವಿಡ್ನಿಂದ ಮೃತಪಟ್ಟವರಿಗೆ 50 ಸಾವಿರ ರು. ಪರಿಹಾರ ನೀಡುವುದನ್ನು ಯಾವ ರಾಜ್ಯವೂ ತಡೆಹಿಡಿಯಬಾರದು ಎಂದು ಸುಪ್ರೀಂಕೋರ್ಟ್(Supreme Court) ಸೋಮವಾರ ಎಲ್ಲಾ ರಾಜ್ಯಗಳಿಗೆ ನಿರ್ದೇಶಿಸಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಶಿಫಾರಸಿನಂತೆ ಕೋವಿಡ್ನಿಂದ(Covid 19) ಮೃತಪಟ್ಟವರಿಗೆ 50 ಸಾವಿರ ಪರಿಹಾರ ನೀಡಬೇಕು. ಕೋವಿಡ್ನಿಂದ ಸಾವು ಸಂಭವಿಸಿದೆ ಎಂದು ಪ್ರಮಾಣಪತ್ರ ಸಲ್ಲಿಸಿದ 30 ದಿನದೊಳಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಈ ಪರಿಹಾರ ಕೊಡಬೇಕು ಎಂದು ನ್ಯಾ| ಎಂ.ಆರ್.ಶಾ, ಎ.ಎಸ್.ಬೋಪಣ್ಣ ಅವರಿದ್ದ ಪೀಠ ಸೂಚಿಸಿತು. ಅಲ್ಲದೇ, ಈ ಯೋಜನೆಯ ಬಗ್ಗೆ ಪತ್ರಿಕೆ, ಟೀವಿಗಳಲ್ಲಿ ಪ್ರಚಾರ ನೀಡಬೇಕು ಎಂದು ಹೇಳಿತು.
ಅರ್ಟಿಪಿಸಿಆರ್(RT-PCR) ಪರೀಕ್ಷೆಯಂತಹ ಅಗತ್ಯ ದಾಖಲೆಗಳ ಮೂಲಕ ಸಂಬಂಧಪಟ್ಟಪ್ರಾಧಿಕಾರವು ಮರಣ ಪ್ರಮಾಣಪತ್ರವನ್ನು ಬದಲಿಸಬಹುದು ಎಂದ ಪೀಠ, ಸಾವಿನ ಕಾರಣ ಸರಿಯಾಗಿ ನಮೂದಾಗದಿದ್ದ ಪಕ್ಷದಲ್ಲಿ ಸಂಬಂಧಿತ ಕುಟುಂಬಗಳು ಕುಂದುಕೊರೆತ ಪರಿಹಾರ ಸಮಿತಿಯನ್ನು ಸಂಪರ್ಕಿಸಬಹುದು. ಸಮಿತಿಯು ಆಸ್ಪತ್ರೆಗಳಿಂದ ನೇರವಾಗಿ ದಾಖಲೆಗಳನ್ನು ಪಡೆದು ಮೃತ ವ್ಯಕ್ತಿಯ ಸಾವಿನ ಕಾರಣ ತಿಳಿಯಬಹುದು ಎಂದಿತು.
