* ಸಾವಿನ ಕಾರಣ ನೀಡಿಲ್ಲ ಎಂಬ ನೆಪ ಹೇಳ​ಕೂ​ಡ​ದು* ರಾಜ್ಯ​ಗ​ಳಿಗೆ ನ್ಯಾಯ​ಪೀಠ ಸೂಚ​ನೆ* ಕೋವಿಡ್‌ ಪರಿ​ಹಾರ ನಿರಾ​ಕ​ರಣೆ ಮಾಡ​ಕೂ​ಡ​ದು: ಸುಪ್ರೀಂ

ನವದೆಹಲಿ(ಅ.05): ‘ಮರಣ ಪ್ರಮಾಣ ಪತ್ರದಲ್ಲಿ(Death Certificate) ಸಾವಿಗೆ ಕಾರಣ ನೀಡಿಲ್ಲ’ ಎಂಬ ಕಾರಣ ನೀಡಿ ಕೋವಿಡ್‌ನಿಂದ ಮೃತಪಟ್ಟವರಿಗೆ 50 ಸಾವಿರ ರು. ಪರಿಹಾರ ನೀಡುವುದನ್ನು ಯಾವ ರಾಜ್ಯವೂ ತಡೆಹಿಡಿಯಬಾರದು ಎಂದು ಸುಪ್ರೀಂಕೋರ್ಟ್‌(Supreme Court) ಸೋಮವಾರ ಎಲ್ಲಾ ರಾಜ್ಯಗಳಿಗೆ ನಿರ್ದೇಶಿಸಿದೆ.

Add Asianetnews Kannada as a Preferred SourcegooglePreferred

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಶಿಫಾರಸಿನಂತೆ ಕೋವಿಡ್‌ನಿಂದ(Covid 19) ಮೃತಪಟ್ಟವರಿಗೆ 50 ಸಾವಿರ ಪರಿಹಾರ ನೀಡಬೇಕು. ಕೋವಿಡ್‌ನಿಂದ ಸಾವು ಸಂಭವಿಸಿದೆ ಎಂದು ಪ್ರಮಾಣಪತ್ರ ಸಲ್ಲಿಸಿದ 30 ದಿನದೊಳಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಈ ಪರಿಹಾರ ಕೊಡಬೇಕು ಎಂದು ನ್ಯಾ| ಎಂ.ಆರ್‌.ಶಾ, ಎ.ಎಸ್‌.ಬೋಪಣ್ಣ ಅವರಿದ್ದ ಪೀಠ ಸೂಚಿಸಿತು. ಅಲ್ಲದೇ, ಈ ಯೋಜನೆಯ ಬಗ್ಗೆ ಪತ್ರಿಕೆ, ಟೀವಿಗಳಲ್ಲಿ ಪ್ರಚಾರ ನೀಡಬೇಕು ಎಂದು ಹೇಳಿತು.

ಅರ್‌ಟಿಪಿಸಿಆರ್‌(RT-PCR) ಪರೀಕ್ಷೆಯಂತಹ ಅಗತ್ಯ ದಾಖಲೆಗಳ ಮೂಲಕ ಸಂಬಂಧಪಟ್ಟಪ್ರಾಧಿಕಾರವು ಮರಣ ಪ್ರಮಾಣಪತ್ರವನ್ನು ಬದಲಿಸಬಹುದು ಎಂದ ಪೀಠ, ಸಾವಿನ ಕಾರಣ ಸರಿ​ಯಾಗಿ ನಮೂ​ದಾ​ಗ​ದಿದ್ದ ಪಕ್ಷ​ದ​ಲ್ಲಿ ​ಸಂಬಂಧಿತ ಕುಟುಂಬ​ಗಳು ಕುಂದುಕೊರೆತ ಪರಿಹಾರ ಸಮಿತಿಯನ್ನು ಸಂಪರ್ಕಿಸಬಹುದು. ಸಮಿ​ತಿಯು ಆಸ್ಪ​ತ್ರೆ​ಗ​ಳಿಂದ ನೇರ​ವಾಗಿ ದಾಖ​ಲೆ​ಗ​ಳನ್ನು ಪಡೆದು ಮೃತ ವ್ಯಕ್ತಿಯ ಸಾವಿನ ಕಾರಣ ತಿಳಿ​ಯ​ಬ​ಹು​ದು ಎಂದಿತು.