ಮುಂಬೈನಲ್ಲಿ ಗೀತೋತ್ಸವ-2020, ಸುಗಮ ಸಂಗೀತಕ್ಕೆ ಕಿವಿಯಾಗಿ
ಮುಂಬೈನಲ್ಲಿ ಗೀತೋತ್ಸವ 2020/ 17ನೇ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನ/ ಕುರ್ಲಾ ಮುಂಬೈನ ಬಂಟರ ಭವನದಲ್ಲಿ ಕಾರ್ಯಕ್ರಮ/ ಸಾಹಿತಿಗಳು ಚಿಂತಕರು ಭಾಗಿ
ಮುಂಬೈ(ಜ.08) ಕರ್ನಾಟಕ ಸುಗಮ ಸಂಗೀತ ಪರಿಷತ್ತು ಬೆಂಗಳೂರು ಮತ್ತು ಮಹಾರಾಷ್ಟ್ರ ಘಟಕ ಮುಂಬೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗೀತೋತ್ಸವ 2020, 17ನೇ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನವನ್ನು ಜನವರಿ 11 ಮತ್ತು 12 ರಂದು ಹಮ್ಮಿಕೊಂಡಿದೆ. ಮುಂಬೈ ಕುರ್ಲಾದ ಬಂಟರ ಭವನದಲ್ಲಿ ಸಮ್ಮೇಳನ ಆಯೋಜನೆ ಮಾಡಲಾಗಿದೆ.
ಬೆಳಗ್ಗೆ 10 ಗಂಟೆಗೆ ಸಮ್ಮೇಳನ ಆರಂಭವಾಗಲಿದೆ. ಡಾ. ಜಯಶ್ರೀ ಅರವಿಂದ್ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಜನವರಿ 11 ರಂದು ಬೆಳಗ್ಗೆ 9 ಗಂಟೆಗೆ ಸಮ್ಮೇಳನಾಧ್ಯಕ್ಷರು ಹಾಗೂ ಸಾಹಿತಿ ಕಲಾವಿದರ ಮೆರವಣಿಗೆ ನಡೆಯಲಿದೆ. ಪದ್ಮಶ್ರೀ ಕವಿ ಡಾ. ದೊಡ್ಡರಂಗೇಗೌಡ, ಚರಿಷ್ಮ ಬಿಲ್ಡರ್ಸ್ ನ ಸುಧೀರ್ ಶೆಟ್ಟಿ ಪಾಲ್ಗೊಳ್ಳುವರು.
ಹೊಸ ವರ್ಷಕ್ಕೆ ನವೀನ್ ಸಜ್ಜು ಏನ್ ಹೇಳ್ತಾರೆ!
ಸಮಾರಂಭವನ್ನು ಕೇಂದ್ರ ಸಚಿವ ಸದಾನಂದ ಗೌಡ ಉದ್ಘಾಟಿಸಲಿದ್ದಾರೆ. ಡಾ. ಆರ್.ಕೆ.ಶೆಟ್ಟಿ ಸ್ವಾಗತ ಕೋರಲಿದ್ದಾರೆ. ಕವಿ ಎಚ್.ಎಸ್.ವೆಂಕಟೇಶ ಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ನಿಕಟಪೂರ್ವ ಅಧ್ಯಕ್ಷೆ ಮಾಲತಿ ಶರ್ಮ ಅವರಿಂದ ಡಾ. ಜಯಶ್ರೀ ಅರವಿಂದ್ ಅಧಿಕಾರ ಸ್ವೀಕರಿಸಲಿದ್ದಾರೆ. ವೈ.ಕೆ.ಮುದ್ದುಕೃಷ್ಣ ಆಶಯ ನುಡಿಗಳನ್ನಾಡಲಿದ್ದಾರೆ. ಸಾಹಿತಿ ಜಯಂತ್ ಕಾಯ್ಕಿಣಿ 'ಗೀತ ಸಂಗಮ' ಬಿಡುಗಡೆ ಮಾಡಲಿದ್ದಾರೆ. ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಅವರಿಗೆ ಕಾವ್ಯಶ್ರೀ ಪ್ರಶಸ್ತಿ, ಇಂದು ವಿಶ್ವನಾಥ್ ಅವರಿಗೆ ಭಾವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಜನವರಿ 11 ರಂದು ಮಧ್ಯಾಹ್ನ 12 ಗಂಟೆಗೆ ನಾಡೋಜ ಬಿ.ಕೆ.ಸುಮಿತ್ರ ನೇತೃತ್ವದಲ್ಲಿ ಜಾನಪದ ಸಿರಿ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಗಾನ ಸಂಭ್ರಮ, ಕವಿ-ಕಾವ್ಯ-ಗಾಯನ ಸಂಜೆ ಗೀತ ಸಂಗೀತ ಕಾರ್ಯಕ್ರಮಗಳಿವೆ. ಜನವರಿ 12 ರಂದು ಹಬ್ಬ-ಕಬ್ಬ, ದಾಸ ಚಿಂತನ, ಕವಿ ಚಿತ್ರ ಗೀತೆಗಳು ವಿಶೇಷ ಕಾರ್ಯಕ್ರಮಗಳಿವೆ.
ಸಮಾರೋಪ ಭಾಷಣವನ್ನು ಕನ್ನಡಪ್ರಭ ಪುರವಣಿ ಸಂಪಾದಕ, ಸಾಹಿತಿ ಜೋಗಿ ಮಾಡಲಿದ್ದಾರೆ. ಸಮಾರೋಪದ ಅಧ್ಯಕ್ಷತೆಯನ್ನು ಡಾ. ನರಹಳ್ಳಿ ಸುಬ್ರಹ್ಮಣ್ಯ ವಹಿಸಿಕೊಳ್ಳಲಿದ್ದಾರೆ. ಅತಿಥಿಗಳಾಗಿ ಮುಜರಾಯಿ ಸಚಿವ ಶ್ರೀನಿವಾಸ ಪೂಜಾರಿ, ಮುಂಬೈ ಸಂಸದ ಗೋಪಾಲ ಶೆಟ್ಟಿ, ನಿರ್ದೇಶಕ ಟಿ.ಎನ್.ಸೀತಾರಾಮ್ ಭಾಗವಹಿಸಲಿದ್ದಾರೆ.