ಜೈಲಿಂದಲೇ ಕೇಜ್ರಿ 2ನೇ ಆದೇಶ: ದಿಲ್ಲಿಯ ಸರ್ಕಾರಿ ಆಸ್ಪತ್ರೆ, ಮೊಹಲ್ಲಾ ಕ್ಲಿನಿಕ್ ಸಮಸ್ಯೆ ಇತ್ಯರ್ಥಕ್ಕೆ ಸೂಚನೆ
ರಾಷ್ಟ್ರ ರಾಜಧಾನಿಯ ನೀರಿನ ಸಮಸ್ಯೆ ಕುರಿತು ಜೈಲಿನಿಂದಲೇ ಆದೇಶ ಹೊರಡಿಸಿ ತನಿಖೆಯ ಬಲೆಯಲ್ಲಿ ಬಿದ್ದಿರುವ ದೆಹಲಿಯ ಆಪ್ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೀಗ ಜೈಲಿನಿಂದಲೇ ಮತ್ತೊಂದು (2ನೇ) ಆದೇಶ ಹೊರಡಿಸಿದ್ದಾರೆ.
ನವದೆಹಲಿ (ಮಾ.27): ರಾಷ್ಟ್ರ ರಾಜಧಾನಿಯ ನೀರಿನ ಸಮಸ್ಯೆ ಕುರಿತು ಜೈಲಿನಿಂದಲೇ ಆದೇಶ ಹೊರಡಿಸಿ ತನಿಖೆಯ ಬಲೆಯಲ್ಲಿ ಬಿದ್ದಿರುವ ದೆಹಲಿಯ ಆಪ್ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೀಗ ಜೈಲಿನಿಂದಲೇ ಮತ್ತೊಂದು (2ನೇ) ಆದೇಶ ಹೊರಡಿಸಿದ್ದಾರೆ. ನವದೆಹಲಿಯ ಸರ್ಕಾರಿ ಆಸ್ಪತ್ರೆಗಳು ಮತ್ತು ಮೊಹಲ್ಲಾ ಕ್ಲಿನಿಕ್ಗಳಲ್ಲಿನ ಸಮಸ್ಯೆಗಳನ್ನು ತುರ್ತಾಗಿ ಸರಿಪಡಿಸುವಂತೆ ಅವರು ಆದೇಶಿಸಿದ್ದಾರೆ.
ಆದರೆ ಇದನ್ನು ಲಿಖಿತ ರೂಪದಲ್ಲಿ ಹೊರಡಿಸಲಾಗಿದೆಯೋ ಅಥವಾ ಮೌಖಿಕ ಸೂಚನೆ ಹೊರಡಿಸಿದ್ದಾರೋ ಎಂಬುದನ್ನು ಆಮ್ಆದ್ಮಿ ಪಕ್ಷ ಖಚಿತಪಡಿಸಿಲ್ಲ. ಜೈಲಿನೊಳಗೆ ಯಾವುದೇ ಸಾಮಗ್ರಿ ಕೊಂಡೊಯ್ಯಲು ಅನುಮತಿ ಇಲ್ಲದೇ ಇದ್ದರೂ ನೀರಿನ ಸಮಸ್ಯೆ ಬಗೆಹರಿಸಲು ಕೇಜ್ರಿವಾಲ್ ಲಿಖಿತವಾಗಿ ಆದೇಶ ಹೊರಡಿಸಿದ ಆದೇಶದ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ಆರಂಭಿಸಿದ ಬೆನ್ನಲ್ಲೇ ಹೊಸ ಆದೇಶ ನೀಡಲಾಗಿದೆ.
ಜೈಲಿಂದಲೇ ಕೇಜ್ರಿವಾಲ್ ಮೊದಲ ಆದೇಶ: ನೀರಿನ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ
ಈ ಕುರಿತು ಮಂಗಳವಾರ ಮಾಹಿತಿ ನೀಡಿದ ಆರೋಗ್ಯ ಖಾತೆ ಸಚಿವ ಸೌರಭ್ ಭಾರದ್ವಾಜ್, ನಗರದ ಆಸ್ಪತ್ರೆಯಲ್ಲಿ ಸಮಸ್ಯೆಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಮೊಹಲ್ಲಾ ಕ್ಲಿನಿಕ್ಗಳಲ್ಲಿ ಅಗತ್ಯ ಔಷಧ ಲಭ್ಯವಾಗುವಂತೆ ಮತ್ತು ಲ್ಯಾಬೋರೇಟರಿ ಪರೀಕ್ಷೆಗಳಿಗೆ ಅಗತ್ಯ ವ್ಯವಸ್ಥೆ ಮಾಡುವಂತೆ ಕೇಜ್ರಿವಾಲ್ ಆದೇಶಿಸಿದ್ದಾರೆ. ಈ ಕುರಿತು ಆರೋಗ್ಯ ಇಲಾಖೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಈ ನಡುವೆ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಬಂಧಿತರಾದವರು ಜೈಲಿನಿಂದಲೇ ಆಡಳಿತ ನಡೆಸಬಹುದೇ ಎಂಬ ವಿಷಯದ ಕುರಿತು ತಾನು ಗಮನಹರಿಸಿರುವುದಾಗಿ ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.
ಕೇಜ್ರಿ ಆದೇಶ ಏನು?: ದೆಹಲಿಯ ಆಸ್ಪತ್ರೆಯಲ್ಲಿ ಸಮಸ್ಯೆಗಳಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಮೊಹಲ್ಲಾ ಕ್ಲಿನಿಕ್ಗಳಲ್ಲಿ ಅಗತ್ಯ ಔಷಧ ಮತ್ತು ಲ್ಯಾಬೋರೇಟರಿ ಪರೀಕ್ಷೆಗಳಿಗೆ ಅಗತ್ಯ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿ ಕೇಜ್ರಿವಾಲ್ ಆದೇಶಿಸಿದ್ದಾರೆ.
ಬೇಲಿಯೇ ಎದ್ದು ಹೊಲ ಮೇಯ್ದ ಸ್ಥಿತಿ: ಕೇಜ್ರಿವಾಲ್ ಬಗ್ಗೆಅಣ್ಣಾ ಹಜಾರೆ ವ್ಯಂಗ್ಯ
ಬಂಧನಕ್ಕೆ ಜರ್ಮನಿ ಬಳಿಕ ಅಮೆರಿಕದಿಂದಲೂ ಕ್ಯಾತೆ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನಕ್ಕೆ ಜರ್ಮನಿ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಇದೀಗ ಅಮೆರಿಕ ಸರ್ಕಾರ ಕೂಡ ತಕರಾರು ತೆಗೆದಿದೆ. ‘ಈ ಬೆಳವಣಿಗೆಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನ್ಯಾಯಸಮ್ಮತ, ಪಾರದರ್ಶಕ ಮತ್ತು ಕಾಲಮಿತಿಯಲ್ಲಿನ ಕಾನೂನು ಪ್ರಕ್ರಿಯೆಯನ್ನು ನಾವು ಪ್ರೋತ್ಸಾಹಿಸುತ್ತೇವೆ’ ಎಂದು ಹೇಳಿದೆ.