ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂಧನ ಉಳಿತಾಯಕ್ಕೆ ಕರೆ ನೀಡಿದ್ದ ಪ್ರಧಾನಿ ಮೋದಿ, ಸ್ವತಃ ತಮ್ಮ ಬೆಂಗಾವಲು ವಾಹನಗಳನ್ನು ಕಡಿತಗೊಳಿಸಿ ಮಾದರಿಯಾಗಿದ್ದಾರೆ. ಅವರ ಈ ನಡೆ ಅನುಸರಿಸಿ, ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು ಕೂಡ ತಮ್ಮ ಬೆಂಗಾವಲು ವಾಹನಗಳ ಸಂಖ್ಯೆ ಕಡಿಮೆ ಮಾಡಿದ್ದಾರೆ.

ಪಿಟಿಐ ನವದೆಹಲಿ (ಮೇ.14): ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಉಂಟಾಗಿರುವ ಸಮಸ್ಯೆ ಎದುರಿಸಲು ಜನತೆಯ ಸಹಕಾರ ಕೋರಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಸ್ವತಃ ಇಂಧನ ಉಳಿತಾಯದ ಮೂಲಕ ಮಾತನ್ನು ಕೃತಿಗೆ ಇಳಿಸಿದ್ದಾರೆ. ಕಳೆದ 2 ದಿನಗಳಿಂದಲೇ ಮೋದಿ ಅವರ ವಿವಿಧ ರಾಜ್ಯಗಳ ಸಂಚಾರದ ವೇಳೆ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಶೇ.50ರಷ್ಟು ಕಡಿತ ಮಾಡಲಾಗಿದೆ.

ಇತ್ತ ಮೋದಿ ಕರೆಯ ಬೆನ್ನಲ್ಲೇ ಹಲವು ರಾಜ್ಯಗಳ ರಾಜ್ಯಪಾಲರು, ಬಿಜೆಪಿ ಆಡಳಿತದ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಕೂಡಾ ತಮ್ಮ ಬೆಂಗಾವಲು ವಾಹನಗಳ ಸಂಖ್ಯೆ ಕಡಿತ ಮಾಡಿದ್ದಾರೆ.

3 ದಿನಗಳ ಹಿಂದೆ ಹೈದರಾಬಾದ್‌ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಪೆಟ್ರೋಲ್‌, ಡೀಸೆಲ್‌ ಬಳಕೆ ಇಳಿಕೆ, ಅನಗತ್ಯ ಚಿನ್ನ ಖರೀದಿ ಮುಂದೂಡಿಕೆ, ಖಾದ್ಯ ತೈಲ ಬಳಕೆಯಲ್ಲಿ ಇಳಿಕೆ ಮಾಡುವಂತೆ ದೇಶದ ಜನರಲ್ಲಿ ಮನವಿ ಮಾಡಿದ್ದರು.

ನುಡಿದಂತೆ ನಡೆ:

ಅದರ ಬೆನ್ನಲ್ಲೇ ಮೋದಿ ಅಸ್ಸಾಂ ಮತ್ತು ಗುಜರಾತ್ ಪ್ರವಾಸದ ವೇಳೆ ಅವರ ಬೆಂಗಾವಲು ವಾಹನಗಳಲ್ಲಿ ಭಾರೀ ಕಡಿತ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಜೊತೆಗೆ ಬುಧವಾರ ದೆಹಲಿಯಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಆಗಮಿಸಿದ ವೇಳೆಯೂ ಪ್ರಧಾನಿ ಕೇವಲ 2 ಬೆಂಗಾವಲು ವಾಹನ ಬಳಸಿದ್ದರು. ಆದರೆ ಈ ಕಡಿತವನ್ನು ಅತಿಗಣ್ಯರಿಗೆ ಭದ್ರತೆ ಒದಗಿಸುವ ಎಸ್‌ಪಿಜಿಯ ಶಿಷ್ಟಾಚಾರಕ್ಕೆ ಅಡ್ಡಿಬರದಂತೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಬೆಂಗಾವಲು ವಾಹನಗಳಲ್ಲಿ ಸಾಧ್ಯವಾದಷ್ಟು ಎಲೆಕ್ಟ್ರಿಕ್ ವಾಹನ ಅಳವಡಿಸುವಂತೆ ಆದರೆ ಇದಕ್ಕಾಗಿ ಹೊಸ ಕಾರು ಖರೀದಿ ಮಾಡದಂತೆ ಮೋದಿ ಸೂಚಿಸಿದ್ದಾರೆ.

--

ಕಾಪ್ಟರಲ್ಲಿ ಸಂಚರಿಸಲ್ಲ: ಗುಜರಾತ್‌ ರಾಜ್ಯಪಾಲ

ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ, ‘ನಾನು ಇನ್ನು ಹೆಲಿಕಾಪ್ಟರ್‌ನಲ್ಲಿ ಸಂಚರಿಸುವುದಿಲ್ಲ. ಸಾಧ್ಯವಿದ್ದ ಕಡೆಯಲ್ಲಿ ನಾನು ರೈಲಿನಲ್ಲಿ ಹಾಗೂ ರಸ್ತೆ ಮೂಲಕ ಪ್ರವಾಸ ಮಾಡುತ್ತೇನೆ’ ಎಂದು ಘೋಷಿಸಿದ್ದಾರೆ. ಗುಜರಾತ್‌ ಡಿಸಿಎಂ ಹರ್ಷ್‌ ಸಾಂಘ್ವಿ ತಮ್ಮ ಅಮೆರಿಕ ಪ್ರವಾಸ ರದ್ದು ಮಾಡಿದ್ದಾರೆ.

--

ಸಿಎಂಗಳ ಬೆಂಗಾವಲು ವಾಹನ ಶೇ.50 ಕಡಿತ

ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಅಸ್ಸಾಂ, ಛತ್ತೀಸ್‌ಗಢ, ರಾಜಸ್ಥಾನ, ಗುಜರಾತ್‌, ಮಹಾರಾಷ್ಟ್ರ, ಬಿಹಾರ, ಆಂಧ್ರಪ್ರದೇಶ ಸೇರಿ ಹಲವು ರಾಜ್ಯಗಳ ಸಿಎಂಗಳು ತಮ್ಮ ಬೆಂಗಾವಲು ವಾಹನಗಳನ್ನು ಶೇ.50ರಷ್ಟು ಕಡಿತ ಮಾಡಿದ್ದಾರೆ.

--

ಬಿಹಾರ ಸಿಎಂರಿಂದ ವಾಹನ ರಹಿತ ದಿನ

ಬಿಹಾರ ಸಿಎಂ ಸಾಮ್ರಾಟ್‌ ಚೌಧರಿ, ವಾರದ 1 ದಿನ ವಾಹನ ರಹಿತ ದಿನ ಎಂದು ಘೋಷಿಸಿದ್ದಾರೆ. ಅಧಿಕಾರಿಗಳಿಗೆ ಸಾರ್ವಜನರಿಗೆ ಸಾರಿಗೆ ಬಳಸುವಂತೆ ಸೂಚಿಸಿದ್ದಾರೆ. ಸಚಿವರು ವಿಮಾನ ಪ್ರಯಾಣಕ್ಕೂ ತಮ್ಮ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಮಹಾರಾಷ್ಟ್ರ ಸಿಎಂ ಫಡ್ನವೀಸ್‌ ಸೂಚಿಸಿದ್ದಾರೆ.+

ಬೆಂಗಾವಲು ವಾಹನ ಗಾತ್ರ ತಗ್ಗಿಸಿದ ವರ್ಮಾ

ಮಹಾರಾಷ್ಟ್ರ ರಾಜ್ಯಪಾಲ ಜಿಷ್ಣು ದೇವ್ ವರ್ಮಾ ಕೂಡ ತಮ್ಮ ಬೆಂಗಾವಲು ಗಾತ್ರ ತಗ್ಗಿಸಲು ಸೂಚಿಸಿದ್ದಾರೆ. ಹಿಮಾಚಲದ ರಾಜ್ಯಪಾಲ ಕವಿಂದರ್‌ ಗುಪ್ತಾ ಲೋಕಭವನವನ್ನು ಇಂಧನ ಸಂರಕ್ಷಣಾ ವಲಯ ಎಂದು ಘೋಷಿಸಿ ಭಾನುವಾರವನ್ನು ಪೆಟ್ರೋಲ್‌ ಮುಕ್ತ ಎಂದು ಪ್ರಕಟಿಸಿದ್ದಾರೆ.