Ukraine Crisis: ರಕ್ತ ಹರಿಸೋದ್ರಿಂದ ಸಮಸ್ಯೆ ಬಗೆಹರಿಯಲ್ಲ, ಲೋಕಸಭೆಯಲ್ಲಿ ಸಚಿವ ಜೈಶಂಕರ್!
* ರಷ್ಯಾ-ಉಕ್ರೇನ್ ಯುದ್ಧದ ಕುರಿತು ಲೋಕಸಭೆಯಲ್ಲಿ ಸಚಿವ ಎಸ್. ಜೈಶಂಕರ್ ಮಾತು
* ಯಾವುದೇ ರೀತಿಯ ಸಂಘರ್ಷಕ್ಕೂ ಸಾಥ್ ನೀಡುವುದಿಲ್ಲ
* ಸಂವಾದ ಮತ್ತು ರಾಜತಾಂತ್ರಿಕತೆ ಮಾತ್ರ ಪ್ರತಿ ವಿವಾದಕ್ಕೂ ಸೂಕ್ತವಾದ ಪರಿಹಾರ
ನವದೆಹಲಿ(ಏ.06): ರಷ್ಯಾ-ಉಕ್ರೇನ್ ಯುದ್ಧದ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಯಾವುದೇ ರೀತಿಯ ಸಂಘರ್ಷಕ್ಕೂ ಸಾಥ್ ನೀಡುವುದಿಲ್ಲ, ಅದನ್ನು ವಿರೋಧಿಸುತ್ತೇವೆ. ಮುಗ್ಧ ಜೀವಗಳನ್ನು ಬಲಿಕೊಟ್ಟು ರಕ್ತ ಚೆಲ್ಲುವುದರಿಂದ ಯಾವುದೇ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ನಂಬಿದ್ದೇವೆ. ಸಂವಾದ ಮತ್ತು ರಾಜತಾಂತ್ರಿಕತೆ ಮಾತ್ರ ಪ್ರತಿ ವಿವಾದಕ್ಕೂ ಸೂಕ್ತವಾದ ಪರಿಹಾರ ಎಂದಿದ್ದಾರೆ. ಉಕ್ರೇನ್ನ ಬುಚಾದಲ್ಲಿ ನಡೆದ ಹತ್ಯಾಕಾಂಡ ವರದಿ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಜೈಶಂಕರ್ ಇಂತಹ ವರದಿಗಳಿಂದ ನಮಗೆ ತೀವ್ರ ನೋವಾಗಿದೆ ಎಂದು ಹೇಳಿದ್ದಾರೆ. ಅಲ್ಲಿನ ಹತ್ಯೆಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇದು ಬಹಳ ಗಂಭೀರವಾದ ವಿಷಯ. ಈ ಬಗ್ಗೆ ಸ್ವತಂತ್ರ ತನಿಖೆಯನ್ನು ನಾವು ಬೆಂಬಲಿಸುತ್ತೇವೆ. ಉಕ್ರೇನ್ನಿಂದ ಭಾರತೀಯರ ವಾಪಸಾತಿಗಾಗಿ ನಡೆಸಲಾದ ಆಪರೇಷನ್ ಗಂಗಾ ಬಗ್ಗೆಯೂ ಜೈಶಂಕರ್ ಹೇಳಿಕೆ ನೀಡಿದ್ದಾರೆ.
ಭಾರತ ಶಾಂತಿಯನ್ನು ಬೆಂಬಲಿಸುತ್ತದೆ
ರಷ್ಯಾ ಮತ್ತು ಉಕ್ರೇನ್ ಮಾತುಕತೆಗೆ ಮುಂದಾಗಬೇಕು ಎಂಬುವುದು ಭಾರತದ ನಿಲುವು ಎಂದು ಜೈಶಂಕರ್ ಲೋಕಸಭೆಯಲ್ಲಿ ಹೇಳಿದ್ದಾರೆ. ಪ್ರಸ್ತುತ ಜಾಗತಿಕ ಕ್ರಮವನ್ನು ವಿಶ್ವಸಂಸ್ಥೆಯ ಚಾರ್ಟರ್ ಅಡಿಯಲ್ಲಿ ನಿರ್ಮಿಸಲಾಗಿದೆ ಎಂದು ಪ್ರತಿಯೊಬ್ಬರೂ ಗಮನಿಸಬೇಕು, ಇದು ಅಂತರರಾಷ್ಟ್ರೀಯ ಕಾನೂನು ಮತ್ತು ದೇಶಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವವನ್ನು ನೀಡುತ್ತದೆ. ಭಾರತ ಆಯ್ಕೆ ಮಾಡಿಕೊಂಡಿರುವುದು ಶಾಂತಿಯನ್ನು. ಇದು ಹಿಂಸಾಚಾರವನ್ನು ತಕ್ಷಣವೇ ಅಂತ್ಯಗೊಳಿಸುವ ನಿಟ್ಟಿನಲ್ಲಿ ತೆಗೆದುಕೊಂಡ ನಿರ್ಧಾರ. ಇದು ನಮ್ಮ ತಾತ್ವಿಕ ನಿಲುವಾಗಿದೆ. ವಿಶ್ವಸಂಸ್ಥೆ ಸೇರಿದಂತೆ ಅಂತರಾಷ್ಟ್ರೀಯ ವೇದಿಕೆಗಳು ಮತ್ತು ಚರ್ಚೆಗಳಲ್ಲಿ, ನಾವು ನಿರಂತರವಾಗಿ ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಿದ್ದೇವೆ ಎಂದಿದ್ದಾರೆ.
ಭಾರತ ಎಲ್ಲ ರೀತಿಯ ಸಹಾಯಕ್ಕೆ ಸಿದ್ಧವಾಗಿದೆ
ನಾವು ರಷ್ಯಾ ಮತ್ತು ಉಕ್ರೇನ್ ಅಧ್ಯಕ್ಷರಿಂದ ಪ್ರತಿಯೊಂದು ಹಂತದಲ್ಲೂ ಸಂವಹನ ನಡೆಸಿದ್ದೇವೆ ಎಂದು ವಿದೇಶಾಂಗ ಸಚಿವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರೇ ಮಾತನಾಡಿದ್ದಾರೆ. ಭಾರತವು ಶಾಂತಿಯನ್ನು ಕಾಪಾಡಲು ಯಾವುದೇ ರೀತಿಯಲ್ಲಿ ಸಹಾಯ ಮಾಡಲು ಸಿದ್ಧವಾಗಿದೆ ಎಂದು ಭೇಟಿ ನೀಡಿದ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರಿಗೆ ನಮ್ಮ ಸಂದೇಶವಾಗಿತ್ತು. ಕೆಲವು ವಿರೋಧ ಪಕ್ಷದ ಸದಸ್ಯರ ಕಾಮೆಂಟ್ಗಳನ್ನು ಉಲ್ಲೇಖಿಸಿದ ಜೈಶಂಕರ್, ಉಕ್ರೇನ್ನಲ್ಲಿನ ಪರಿಸ್ಥಿತಿಯನ್ನು ರಾಜಕೀಯಗೊಳಿಸುವ ಭಾರತದ ಪ್ರಯತ್ನ ದುರದೃಷ್ಟಕರ ಎಂದು ಹೇಳಿದರು.
ಆರ್ಎಸ್ಪಿಯ ಎನ್ಕೆ ಪ್ರೇಮಚಂದ್ರನ್ ಮತ್ತು ಕಾಂಗ್ರೆಸ್ನ ಮನೀಶ್ ತಿವಾರಿ ಅವರ ನಿಯಮ 193 ರ ನೋಟೀಸ್ ನಂತರ ಲೋಕಸಭೆಯಲ್ಲಿ ಉಕ್ರೇನ್ ಕುರಿತು ಈ ಚರ್ಚೆ ನಡೆಯುತ್ತಿದೆ. ಮಂಗಳವಾರ ನಾಲ್ವರು ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಕಿರಣ್ ರಿಜಿಜು, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ವಿಕೆ ಸಿಂಗ್ ಅವರು ಆಪರೇಷನ್ ಗಂಗಾ ಕುರಿತು ಸದನಕ್ಕೆ ಮಾಹಿತಿ ನೀಡಿದರು. ಈ ಎಲ್ಲಾ ಸಚಿವರು ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಹಿಂದಿರುಗಿಸಲು ವಿವಿಧ ದೇಶಗಳಿಗೆ ತೆರಳಿದ್ದರು.