* ಕರ್ನಾಟಕ ವಿರುದ್ಧ ಕೇರಳಕ್ಕೆ ಮುಖಭಂಗ* ಗಡಿ ನಿರ್ಬಂಧ ಪ್ರಶ್ನಿಸಿದ್ದ ನೆರೆರಾಜ್ಯ* ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

ನವದೆಹಲಿ(ಅ. 30) ಕೊರೋನಾ (Coronavirus) ಸೋಂಕು ನಿಯಂತ್ರಣಕ್ಕಾಗಿ ಕೇರಳ (Kerala) ಜನತೆಗೆ ಕರ್ನಾಟಕ (Karnataka) ಗಡಿ ಪ್ರವೇಶಕ್ಕೆ ನಿರ್ಬಂಧ ಹೇರಿದ ಕರ್ನಾಟಕ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್‌ (Supreme Court) ಎತ್ತಿ ಹಿಡಿದಿದೆ.

Add Asianetnews Kannada as a Preferred SourcegooglePreferred

ಕರ್ನಾಟಕ ಸರ್ಕಾರವು ಕೇರಳದಲ್ಲಿ ಕೋವಿಡ್‌ ತಾರಕಕ್ಕೇರಿದ್ದ ಹಿನ್ನೆಲೆಯಲ್ಲಿ ಕಾಸರಗೋಡು ಗಡಿಯಿಂದ ದಕ್ಷಿಣ ಕನ್ನಡ ಪ್ರವೇಶಕ್ಕೆ ಕೇರಳದ ಜನತೆಗೆ ಕೆಲವು ನಿರ್ಬಂಧ ವಿಧಿಸಿತ್ತು. ಕೋವಿಡ್‌ನ ಆರ್‌ಟಿಪಿಸಿಆರ್‌ ಪರೀಕ್ಷೆಯ ನೆಗೆಟಿವ್‌ ವರದಿಯನ್ನು ಕಡ್ಡಾಯಗೊಳಿಸಿತ್ತು. ಇದನ್ನು ಕೇರಳದ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್‌ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಕೂಡ ಕರ್ನಾಟಕದ ನಿರ್ಧಾರವನ್ನು ಅನೇಕ ಬಾರಿ ತೀವ್ರವಾಗಿ ಪ್ರಶ್ನಿಸಿದ್ದರು.

ಈ ಕುರಿತಾದ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ‘ದೇಶದಲ್ಲಿ ಇನ್ನೂ ಕೋವಿಡ್‌ ಅಂತ್ಯವಾಗಿಲ್ಲ. ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರ ನಿರ್ಬಂಧದ ಕ್ರಮ ಹೇರಿದ್ದು ಸರಿ. ಇಲ್ಲದಿದ್ದರೆ ಕೇರಳದಿಂದ ಕರ್ನಾಟಕಕ್ಕೆ ಬರುವವರ ಮೇಲೆ ನಿರ್ಬಂಧ ವಿಧಿಸುತ್ತಿರಲಿಲ್ಲ. ಹೀಗಾಗಿ ಈ ವಿಷಯದಲ್ಲಿ ಮಂಗಳೂರಿಗೆ ತೆರಳಬಯಸುವ ಕಾಸರಗೋಡು ಜನರ ಮೂಲಭೂತ ಹಕ್ಕು ಉಲ್ಲಂಘನೆಯಾಗಿಲ್ಲ’ ಎಂದು ಹೇಳಿತು ಹಾಗೂ ಅರ್ಜಿಯನ್ನು ತಿರಸ್ಕರಿಸಿತು.

ಭಾರತದಲ್ಲೇ ಕೋವಿಡ್ ಟ್ಯಾಬ್ಲೆಟ್ ಸಿದ್ಧ..ದರ ಎಷ್ಟು?

ಅಲ್ಲದೆ, ‘ಈ ಮೊದಲು ಕರ್ನಾಟಕ ನಿರ್ಬಂಧ ಹೇರಿತ್ತು. ಆದರೆ, ಜುಲೈ 31ರಂದು ಕರ್ನಾಟಕವು ಪ್ರಯಾಣದ 15 ದಿನದೊಳಗೆ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿಯನ್ನು ಹೊಂದಿರಬೇಕು ಎಂಬ ನಿರ್ಬಂಧವನ್ನು ಸಡಿಲಿಸಿದೆ. ವಿದ್ಯಾರ್ಥಿಗಳು, ಉದ್ಯಮಿಗಳು ಸೇರಿದಂತೆ ಇತರರ ಅನುಕೂಲಕ್ಕಾಗಿ ಈ ಕ್ರಮ ಕೈಗೊಂಡಿದೆ. ಹೀಗಾಗಿ ಈ ಹಂತದಲ್ಲಿ ಈ ಅರ್ಜಿ ಸಮರ್ಥನೀಯ ಎನ್ನಿಸುವುದಿಲ್ಲ’ ಎಂದು ನ್ಯಾಯಪೀಠ ನುಡಿಯಿತು.

ಈ ಹಿಂದೆ ಕೂಡ ಕೇರಳ ಹೈಕೋರ್ಟು ಇದೇ ಮಾದರಿಯ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸೆ.28ರಂದು ಮೇಲ್ಮನವಿ ಸಲ್ಲಿಸಲಾಗಿತ್ತು. ‘ಕೇರಳದ ಕಾಸರಗೋಡಿನ ಜನ ಮಂಗಳೂರಿನ ಮೇಲೆಯೇ ಅವಲಂಬಿತರಾಗಿದ್ದಾರೆ. ಹೀಗಾಗಿ ಕರ್ನಾಟಕದ ನಿರ್ಬಂಧವು ಕಾಸರಗೋಡು ಜನರಿಗೆ ಅಡ್ಡಿ ಉಂಟು ಮಾಡಿದೆ. ಗಡಿ ನಿರ್ಬಂಧಿಸಬಾರದು ಎಂಬ ಕೇಂದ್ರದ ನಿಯಮಗಳಿಗೆ ವಿರುದ್ಧವಾಗಿದೆ’ ಎಂದು ಮೇಲ್ಮನವಿಯಲ್ಲಿ ವಾದಿಸಲಾಗಿತ್ತು.