'RSS ಎಂದಿಗೂ ಮೀಸಲಾತಿ ಪರ: ಅಸಮಾನತೆ ನಿವಾರಣೆವರೆಗೆ ಇದು ಅಗತ್ಯ'
* ಅಸಮಾನತೆ ಇರುವವರೆಗೆ ಮೀಸಲಾತಿ ಬೇಕು
* ಆರೆಸ್ಸೆಸ್ ಎಂದಿಗೂ ಮೀಸಲಾತಿ ಪರ
* ಮೀಸಲಾತಿ ಪ್ರತಿಪಾದಿಸಿದ ದತ್ತಾತ್ರೇಯ ಹೊಸಬಾಳೆ
ನವದೆಹಲಿ(ಆ.11): ದೇಶದ ಸಮುದಾಯಗಳಲ್ಲಿ ಎಲ್ಲಿಯವರೆಗೆ ಅಸಮಾನತೆ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಮುಂದುವರಿಯಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಪ್ರತಿಪಾದಿಸಿದ್ದಾರೆ. ಅಲ್ಲದೆ, ‘ನಾನು ಮತ್ತು ಆರ್ಎಸ್ಎಸ್ ಎಂದೆಂದಿಗೂ ಮೀಸಲಾತಿಯ ಪ್ರಬಲ ಬೆಂಬಲಿಗರು’ ಎಂದು ಅವರು ಒತ್ತಿ ಹೇಳಿದ್ದಾರೆ.
ಮಂಗಳವಾರ ಇಂಡಿಯಾ ಫೌಂಡೇಶನ್ ಏರ್ಪಡಿಸಿದ್ದ ‘ಆಧುನಿಕ ದಲಿತ ಇತಿಹಾಸದ ನಿರ್ಮಾತೃಗಳು’ ಇಂಗ್ಲಿಷ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ದಲಿತರ ಇತಿಹಾಸವಿಲ್ಲದೆ ಭಾರತದ ಇತಿಹಾಸ ಅಪೂರ್ಣವಾಗಲಿದೆ. ಭಾರತದ ಇತಿಹಾಸವು ದಲಿತರ ಇತಿಹಾಸಕ್ಕಿಂತ ಭಿನ್ನವೇನೂ ಅಲ್ಲ’ ಎಂದು ಹೇಳಿದರು.
ಇದೇ ವೇಳೆ ತುಳಿತಕ್ಕೊಳಪಟ್ಟಸಮುದಾಯಗಳ ಮೀಸಲಾತಿ ಬಗ್ಗೆ ಪ್ರತಿಕ್ರಿಯಿಸಿ, ‘ಸಾಮಾಜಿಕ ಸಾಮರಸ್ಯ ಮತ್ತು ಸಾಮಾಜಿಕ ನ್ಯಾಯ ಎಂಬ ವಿಚಾರಗಳು ನಮ್ಮ ಪಾಲಿಗೆ ರಾಜಕೀಯ ತಂತ್ರಗಳಲ್ಲ. ಬದಲಾಗಿ ಈ ಎರಡೂ ಅಂಶಗಳು ನಂಬಿಕೆಯ ವಿಷಯಗಳು. ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ವಿರೋಧಿ ಹೋರಾಟಗಳು ನಡೆದಾಗ ನಾವು ಮೀಸಲಾತಿ ಪರ ಉಪನ್ಯಾಸ ಆಯೋಜಿಸಿದ್ದೇವೆ’ ಎಂದರು.