ನಾಯಿ ಕಚ್ಚಿದ ಸಂತ್ರಸ್ತರಿಗೆ ಪ್ರತಿ ಹಲ್ಲಿನ ಗಾಯಕ್ಕೆ 10,000 ಪರಿಹಾರ, ಹೈಕೋರ್ಟ್ ಆದೇಶ!
ಬೀದಿ ನಾಯಿ ದಾಳಿ ಘಟನೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇನ್ನು ಲಿಫ್ಟ್ನಲ್ಲಿ, ಅಪಾರ್ಟ್ಮೆಂಟ್ನಲ್ಲಿ ನಾಯಿ ಕಚ್ಚಿ ಗಂಭೀರಗಾಯಗೊಂಡವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದೀಗ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ವಾಘ್ ಬಕ್ರಿ ಚಹಾ ಗ್ರೂಪ್ ಮಾಲೀಕ ಬೀದಿ ನಾಯಿಗೆ ಬಲಿಯಾದ ಬೆನ್ನಲ್ಲೇ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ನಾಯಿ ಕಡಿತ ಸಂತ್ರಸ್ತರಿಗೆ, ನಾಯಿಯ ಪ್ರತಿ ಹಲ್ಲಿನ ಗಾಯಕ್ಕೆ ಕನಿಷ್ಠ 10,000 ರೂಪಾಯಿ ಪರಿಹಾರ ನೀಡುವಂತೆ ಸೂಚಿಸಿದೆ.

ಹರ್ಯಾಣ(ನ.14) ಬೀದಿ ನಾಯಿ ಹಾವಳಿ, ಸಾಕು ನಾಯಿಗಳ ದಾಳಿ ಸೇರಿದಂತೆ ನಾಯಿ ಕಡಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬೀದಿಯಲ್ಲಿರುವ ಪ್ರಾಣಿಗಳ ದಾಳಿಯಿಂದ ಗಂಭೀರ ಗಾಯ, ಸಾವು ಪ್ರಕರಣಗಳು ವರದಿಯಾಗಿದೆ. ಇದೀಗ ಬೀದಿಯಲ್ಲಿ ಪ್ರಾಣಿಗಳ ದಾಳಿಯಿಂದ ಗಾಯಕ್ಕೊಳಗಾಗುವ ವ್ಯಕ್ತಿಗೆ ಪರಿಹಾರ ನೀಡಬೇಕು. ಅದರಲ್ಲೂ ನಾಯಿ ಕಚ್ಚಿದರೆ ಸಂತ್ರಸ್ತರಿಗೆ ಪ್ರತಿ ಹಲ್ಲಿನ ಗಾಯಕ್ಕೆ 10 ಸಾವಿರ, ಇನ್ನು 0.2 ಸೆಂಟಿಮೀಟರ್ ಆಳದ ಗಾಯಕ್ಕೆ 20,000 ರೂಪಾಯಿ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ. ಸಾಕು ನಾಯಿ ಯಾರಿಗಾದರು ಕಚ್ಚಿದರೆ ಮಾಲೀಕ ಇದೀಗ ಹೊಸ ಆದೇಶದ ಪ್ರಕಾರ ಹಣ ನೀಡಬೇಕು. ಈ ಹೊಸ ಆದೇಶವನ್ನು ಪಂಜಾಬ್-ಹರ್ಯಾಣ ಹೈಕೋರ್ಟ್ ನೀಡಿದೆ.
ಬೀದಿ ಪ್ರಾಣಿಗಳು, ನಾಯಿಗಳ ದಾಳಿಯಿಂದ ಗಾಯಗೊಳಗಾಗುವ ವ್ಯಕ್ತಿಗೆ ಸರ್ಕಾರ ಪರಿಹಾರ ನೀಡಬೇಕು. ಯಾವುದೇ ವ್ಯಕ್ತಿ ನಾಯಿ ಅಥವಾ ಇತರ ಸಾಕು ಪ್ರಾಣಿಗಳ ದಾಳಿಗೆ ತುತ್ತಾದರೆ, ಆತನಿಗೆ ಪರಿಹಾರವನ್ನು ಸಂಬಂಧ ಪಟ್ಟ ಮಾಲೀಕರಿಂದ ಅಥವಾ ಎಜೆನ್ಸಿಗಳಿಂದ ನೀಡುವ ಜವಾಬ್ದಾರಿ ಸರ್ಕಾರದ್ದು ಎಂದು ಹೈಕೋರ್ಟ್ ಹೇಳಿದೆ.
ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ: ನಟ ದರ್ಶನ್ಗೆ ಪೊಲೀಸರ ನೋಟಿಸ್
ಖಾಸಗಿ ವ್ಯಕ್ತಿಗಳ ಸಾಕು ನಾಯಿ ದಾಳಿ, ಕಚೇರಿ ಸಾಕು ಪ್ರಾಣಿಗಳ ದಾಳಿಗಳ ಪ್ರಕರಣಗಳ ಇತ್ಯರ್ಥಕ್ಕೆ ಸರ್ಕಾರ ಸಮಿತಿ ರಚಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ. ವಾಘ್ ಬಕ್ರಿ ಚಹಾ ಗ್ರೂಪ್ ಮಾಲೀಕ 49 ವರ್ಷ ಪರಾಗ್ ದೇಸಾಯಿ ಬೀದಿ ನಾಯಿಗಳ ದಾಳಿಗೆ ಬಲಿಯಾಗಿದ್ದರು. ಇದೇ ದೇಶದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಕೋಟಿ ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿದ್ದ ಉದ್ಯಮಿ ಬೀದಿ ನಾಯಿ ದಾಳಿಗೆ ಬಲಿಯಾದ ಪ್ರಕರಣ ಜನಸಾಮಾನ್ಯರ ಆತಂಕ ಹೆಚ್ಚಿಸಿತ್ತು.
ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಪಂಜಾಬ್-ಹರ್ಯಾಣ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ವಾಘ್ ಬಕ್ರಿ ಮಾಲೀಕ ನಿಧನದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಬೀದಿ ನಾಯಿ, ಬೀದಿ ಪ್ರಾಣಿಗಳ ದಾಳಿಯಿಂದ ರಕ್ಷಣೆಗೆ ಸೂಕ್ತ ಕ್ರಮದ ಅಗತ್ಯವಿದೆ. ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂಬ ಆಗ್ರಹಗಳು ಹೆಚ್ಚಾಗಿತ್ತು.
ಬೀದಿ ನಾಯಿಗಳ ದಾಳಿ, ವಾಘ್ ಬಕ್ರಿ ಕಂಪನಿ ಮಾಲೀಕ ಪರಾಗ್ ದೇಸಾಯಿ ಸಾವು
ಇದೀಗ ನಾಯಿ ಮಾಲೀಕರು ಅತೀವ ಎಚ್ಚರವಹಿಸಬೇಕು. ಸಾಕು ನಾಯಿ ಯಾರಿಗಾದರೂ ಕಚ್ಚಿದರೇ ಸಾಕು, ಈ ಪ್ರಕರಣಕ್ಕೆ ಇತರ ಕಾರಣಗಳು ಬೇಕಿಲ್ಲ. ಸಂತ್ರಸ್ತರ ಚಿಕಿತ್ಸಾ ವೆಚ್ಚ, ಪರಿಹಾರ ಮಾಲೀಕರೇ ನೀಡಬೇಕು. ಸದ್ಯ ಇದು ಪಂಜಾಬ್ ಹಾಗೂ ಹರ್ಯಾಣಕ್ಕೆ ಅನ್ವಯವಾಗಲಿದೆ. ಆದರೆ ಈ ಕಾನೂನು ದೇಶದ ಎಲ್ಲಾ ರಾಜ್ಯಗಳಲ್ಲೂ ಜಾರಿಯಾಗುವ ದಿನ ದೂರವಿಲ್ಲ.