ಕೊರೋನಾ ಅಟ್ಟಹಾಸ: ಹೊರಗೆ ಬಾರದ ರಾಷ್ಟ್ರ ರಾಜಧಾನಿಯ ಜನ!
ದೆಹಲಿಯಲ್ಲಿ ಕೊರೋನಾ ಪ್ರಕರಣಗಳ ವರದಿ 20 ಸಾವಿರದ ಗಡಿಗೆ ಬಂದು ನಿಂತಿದೆ| ನಿಯಂತ್ರಣ ಅಸಾಧ್ಯ ಎಂದು ದೆಹಲಿ ಸರ್ಕಾರ ವೀಕೆಂಡ್ ಕಫ್ರ್ಯೂ ಜಾರಿಗೊಳಿಸಿದೆ| ಶುಕ್ರವಾರ ರಾತ್ರಿಯಿಂದ ವೀಕೆಂಡ್ ಕಫ್ರ್ಯೂ ಜಾರಿ
ಡೆಲ್ಲಿ ಮಂಜು, ಇಂಡಿಯಾ ರೌಂಡ್ಸ್
ನವದೆಹಲಿ(ಏ.17) ಕೊರೊನಾ ಸೋಂಕು ನಿಯಂತ್ರಣದ ಮೊದಲ ಕ್ರಮವಾಗಿ ದೆಹಲಿ ಸರ್ಕಾರ ತೆಗೆದುಕೊಂಡ ವೀಕೆಂಡ್ ಕಫ್ರ್ಯೂ ಯಶಸ್ವಿಯಾಗಿದೆ.
ದೆಹಲಿಯಲ್ಲಿ ಕೊರೊನಾ ಪ್ರಕರಣಗಳ ವರದಿ 20 ಸಾವಿರದ ಗಡಿಗೆ ಬಂದು ನಿಂತಿದೆ. ನಿಯಂತ್ರಣ ಅಸಾಧ್ಯ ಎಂದು ದೆಹಲಿ ಸರ್ಕಾರ ವೀಕೆಂಡ್ ಕಫ್ರ್ಯೂ ಜಾರಿಗೆ ತಂದಿದೆ.
ಶುಕ್ರವಾರ ರಾತ್ರಿಯಿಂದ ವೀಕೆಂಡ್ ಕಫ್ರ್ಯೂ ಜಾರಿಯಲ್ಲಿದ್ದು, ಸೋಮವಾರ ಬೆಳಗ್ಗೆ 6 ಗಂಟೆಯ ತನಕ ಚಾಲ್ತಿಯಲ್ಲಿರುತ್ತದೆ. ಇದರಿಂದಾಗಿ ದೆಹಲಿಯ ಜನರು ಇವತ್ತು ಹೊರಗಡೆಯೇ ಬಂದಿಲ್ಲ.
ಯಾವಾಗಲೂ ಜನರಿಂದ ಗಿಜಿಗುಡುವ ಹಾಗು ವಾರಾಂತ್ಯದ ಮೋಜು-ಮಸ್ತಿಗೆ ಹೆಸರಾಗಿರುವ ಕನಾಟ್ ಪ್ಲೇಸ್, ಪಾಲಿಕಾ ಎಸಿ ಬಜಾರ್, ಕೋರೊಲ್ ಬಾಗ್ ಪ್ರದೇಶಗಳು ಇವತ್ತು ಜನರಿಲ್ಲದೆ ಖಾಲಿ ಖಾಲಿಯಾಗಿತ್ತು.
ಜನರು ರಸ್ತೆಗೆ ಬಾರದ ಕಾರಣಕ್ಕೆ ಪ್ರಮುಖ ಕಮರ್ಷಿಯಲ್ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ವಲಾಗಿತ್ತು.
ಊರಿಗೆ ಹೋಗೋರಿಗೆ ತೊಂದರೆ ಇಲ್ಲ : ದೆಹಲಿಯ ಸರ್ಕಾರ ವೀಕೆಂಡ್ ಕಫ್ರ್ಯೂ ವಿಧಿಸಿದ್ದರೂ ಹೊರಗಡೆಯಿಂದ ದೆಹಲಿಗೆ ಬಂದವರಿಗೆ ಅಥವಾ ದೆಹಲಿಯಿಂದ ಇತರೆ ಊರುಗಳಿಗೆ ಹೋಗುವವರಿಗೆ ಯಾವುದೇ ತೊಂದರೆ ಇಲ್ಲ. ಟ್ಯಾಕ್ಸಿ, ಆಟೋ ಹಾಗು ನಗರ ಸಾರಿಗೆಯ ಬಸ್ ಸೇವೆ ಚಾಲ್ತಿಯಲ್ಲಿದ್ದು, ಪ್ರಯಾಣಿಕರು ಪೊಲೀಸರಿಗೆ ಟಿಕೆಟ್ ತೋರಿಸಿದರೆ ಸಾಕು ಅಂಥವರ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗುತ್ತಿದೆ.
ವಾಹನ ತಪಾಸಣೆ :
ಇನ್ನು ವೀಕೆಂಡ್ ಕಫ್ರ್ಯೂ ಭಾಗವಾಗಿ ಪೊಲೀಸರು ಎಲ್ಲಾ ಕಡೆ ಬ್ಯಾರಿಕೇಡಿಂಗ್ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈ ಬ್ಯಾರಿಕೇಡ್ ಗಳನ್ನು ಹಾದೋಗುವ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಿ, ವಿವರ ಪಡೆಯುತ್ತಾರೆ.