09:24 AM (IST) Jun 14

ಬಿಜೆಪಿ ಹಿರಿಯ ನಾಯಕ ಪ್ರಕಾಶ್ ಗೋಡಬೋಲೆ ನಿಧನ

ಧಾರವಾಡದ ಪಾಲಿಕೆ ಮಾಜಿ ಸದಸ್ಯ ಹಾಗೂ ಬಿಜೆಪಿ ಹಿರಿಯ ನಾಯಕ ಪ್ರಕಾಶ್ ಗೋಡಬೋಲೆ ನಿಧನ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ 40 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಳಗ್ಗೆ ನಿಧನ

06:29 PM (IST) Jun 13

ವಿಶ್ರಾಂತ ಕುಲಪತಿ ಪ್ರೊ. ಎಚ್. ಎಂ. ಮಹೇಶ್ವರಯ್ಯ ನಿಧನ

ಮೂಲತಃ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಹಿತ್ತಲ ಗ್ರಾಮದವರಾದ ಪ್ರೊ. ಮಹೇಶ್ವರಯ್ಯ ಅವರು ಧಾರವಾಡದ ಕರ್ನಾಟಕ ವಿ.ವಿ.ಯ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ, ವಿದ್ಯಾರ್ಥಿ ಕಲ್ಯಾಣ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ನಂತರ ಕಲಬುರ್ಗಿಯ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿ.ವಿ. ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದರು. ನಿವೃತ್ತಿಯ ಬಳಿಕ ಧಾರವಾಡಕ್ಕೆ ತಮ್ಮ ವಾಸ್ತವ್ಯ ಬದಲಾಯಿಸಿದ್ದರು. ಅವರಿಗೆ ಪತ್ನಿ. ಕೆಸಿಡಿ ಕಾಲೇಜಿನ ನಿವೃತ್ತ ಪ್ರಾಚಾರ್ಯೆ ಪ್ರೊ. ರಾಜೇಶ್ವರಿ ಮಹೇಶ್ವರಯ್ಯ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಅವರಿಗೆ ಬ್ಲಾಕ್ ಫಂಗಸ್ ಆಗಿತ್ತು ಎಂಬ ಮಾಹಿತಿ ಇದೆ.

06:31 PM (IST) Jun 11

ನಾಡೋಜ ಸಿದ್ದಲಿಂಗಯ್ಯ ಇನ್ನಿಲ್ಲ

ಬಂಡಾಯ ಸಾಹಿತಿ, ದಲಿತ ಕವಿ, ಕನ್ನಡದ ಮೇರು ಸಾಹಿತಿ ನಾಡೋಜ ಡಾ.ಸಿದ್ದಲಿಂಗಯ್ಯ ವಿಧಿವಶರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಕೋವಿಡ್‌ ಸೋಂಕಿನಿಂದ ಬಳಲುತ್ತಿದ್ದ ಸಿದ್ದಲಿಂಗಯ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 

ಸಂಪೂರ್ಣ ಸುದ್ದಿ ಓದಲು ಕ್ಲಿಕ್ ಮಾಡಿ: ಸಾಹಿತ್ಯ ಲೋಕ ಅಗಲಿದ ಕವಿ, ಸಾಹಿತಿ ಡಾ. ಸಿದ್ದಲಿಂಗಯ್ಯ ಇನ್ನು ನೆನಪು ಮಾತ್ರ...

04:39 PM (IST) Jun 08

ಬಿಜೆಪಿ ಹಿರಿಯ ಶಾಸಕ ಸಿ.ಎಂ.ಉದಾಸಿ ವಿಧಿವಶ

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಿಜೆಪಿ ಹಿರಿಯ ಶಾಸಕ ಸಿಎಂ ಉದಾಸಿ ವಿಧಿವಶರಾಗಿದ್ದಾರೆ.

ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಸಿ.ಎಂ.ಉದಾಸಿ (77) ಅವರು ಇಂದು (ಮಂಗಳವಾರ) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಅನಾರೋಗ್ಯದಿಂದ ಬಳಲುತ್ತಿದ್ದ ಸಿ.ಎಂ. ಉದಾಸಿ ನಿಧನ

11:39 AM (IST) Jun 07

ಮಾಜಿ ಸಚಿವ ಪ್ರೊ. ಮುಮ್ತಾಜ್ ಅಲಿ ಖಾನ್ ನಿಧನ!

ಮಾಜಿ ಸಚಿವ ಪ್ರೊ. ಮುಮ್ತಾಜ್ ಅಲಿ ಖಾನ್ (94) ಇಂದು ಮುಂಜಾನೆ ನಿಧನರಾದರು. 

ಬೆಂಗಳೂರಿನ ಗಂಗಾನಗರದ ನಿವಾಸದಲ್ಲಿ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದು ಅವರು ಪತ್ನಿ ಪುತ್ರಿಯನ್ನಗಲಿದ್ದಾರೆ. ಅವರು 2008ರಲ್ಲಿ ಹಜ್ ಹಾಗೂ ಅಲ್ಪಸಂಖ್ಯಾತ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

Scroll to load tweet…
12:53 PM (IST) Jun 04

ಕನ್ನಡದ ಖ್ಯಾತ ಸಾಹಿತಿ ಪ್ರೊಫೆಸರ್ ವಸಂತ ಕುಷ್ಟಗಿ ಇನ್ನಿಲ್ಲ

ಕನ್ನಡದ ಖ್ಯಾತ ಸಾಹಿತಿ, ದಾಸ ಸಾಹಿತ್ಯ ಸಂಶೋಧಕ ಪ್ರೊಫೆಸರ್ ವಸಂತ ಕುಷ್ಟಗಿ ಜೂ.04ರಂದು ಬೆಳೆಗ್ಗೆ ಕಲಬುರಗಿ ನಗರದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಕಲಬುರಗಿಯಲ್ಲಿ ಕನ್ನಡದ ಕೈಂಕರ್ಯವನ್ನು ಮಾಡಿ, ದಾಸಸಾಹಿತ್ಯದಲ್ಲಿ ಕೃಷಿ ಮಾಡಿದ್ದ ಹಿರಿಯ ಜೀವಿ ಶ್ರಿ ವಸಂತಕುಷ್ಟಗಿ, ಕಲಬುರಗಿಯಲ್ಲಿ ಕನ್ನಡ ಸಾಹಿತ್ಯ ಸಂಘದ ಬೆಳವಣಿಗೆಗೂ ಸಾಕಷ್ಟು ಕಾಣಿಕೆ ನೀಡಿದ್ದರು. ಬೇಂದ್ರೆ, ಕಾರಂತ, ಗೋಕಾಕ್ ರಂತಹ ಖ್ಯಾತನಾಮರನ್ನು ಕಲಬುರಗಿ ಮಂದಿಗೆ ಪರಿಚಯಿಸಿದ್ದರು, ಗಾಂಧಿ ತತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿದ್ದರು. ಇವರ ಹಾರೈಕೆ ಕವಿತೆ ಕನ್ನಡ ಪಠ್ಯ ಆಗಿತ್ತು.

05:19 PM (IST) May 30

ಬಾಲಿವುಡ್ ಯುವ ನಿರ್ಮಾಪಕ ರಿಯಾನ್ ಸ್ಟೀಫನ್ ಇನ್ನಿಲ್ಲ

'ಇಂದೂ ಕಿ ಜವಾನಿ' ಮತ್ತು ಸಿನಿಮಾಗಳನ್ನು ಬ್ಯಾಂಕ್‌ರೋಲ್ ಮಾಡಿದ ನಿರ್ಮಾಪಕ ರಿಯಾನ್ ಸ್ಟೀಫನ್ ಇಂದು ಮೇ 29, 2021 ಗೋವಾದಲ್ಲಿ ನಿಧನರಾಗಿದ್ದಾರೆ. ಕೊರೋನಾ ದೃಢಪಟ್ಟಿದ್ದ ನಿರ್ಮಾಪಕ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ರಿಯಾನ್ ಸ್ಟೀಫನ್ 'ದೇವಿ' ಜನಪ್ರಿಯ ಕಿರುಚಿತ್ರವನ್ನು ನಿರ್ಮಿಸಿದ್ದರು. ಇದರಲ್ಲಿ ಕಾಜೋಲ್, ಶ್ರುತಿ ಹಾಸನ್, ನೇಹಾ ಧೂಪಿಯಾ, ನೀನಾ ಕುಲಕರ್ಣಿ, ಮುಕ್ತಾ ಬಾರ್ವೆ, ಶಿವಾನಿ ರಘುವಂಶಿ, ಯಶಸ್ವಿನಿ ದಯಾಮಾ, ಸಂಧ್ಯಾ ಮಾತ್ರೆ ಮತ್ತು ರಾಮ ಜೋಶಿ ನಟಿಸಿದ್ದಾರೆ.

12:09 PM (IST) May 30

ಹಿರಿಯ ಚಿತ್ರ ನಿರ್ದೇಶಕ ತಿಪಟೂರು ರಘು ನಿಧನ

ಹಿರಿಯ ನಿರ್ದೇಶಕ, ಕಲಾವಿದ ತಿಪಟೂರು ರಘು (83) ಶನಿವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬ ವರ್ಗ ತಿಳಿಸಿದೆ. ಕೆಲವು ಕಾಲದಿಂದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ರಘು ಇತ್ತೀಚೆಗಷ್ಟೇ ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದರು. ರಘು ಅವರು ‘ಊರ್ವಶಿ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗುತುರಿಸಿಕೊಂಡಿದ್ದರು. ‘ಹಳ್ಳಿ ಸುರಾಸುರರು’, ‘ಕಲ್ಲು ವೀಣೆ ನುಡಿಯಿತು’, ‘ಆಕ್ರೋಶ’, ‘ಲೇಡಿಸ್‌ ಹಾಸ್ಟೆಲ್‌’, ‘ಸ್ವರ್ಣ ಮಹಲ್‌ ರಹಸ್ಯ’, ‘ನಾಗ ಕಾಳ ಭೈರವ’, ‘ಬೆಂಕಿ ಬಿರುಗಾಳಿ’ ಅವರ ನಿರ್ದೇಶನದ ಜನಪ್ರಿಯ ಚಿತ್ರಗಳು.

12:09 PM (IST) May 30

ಕೋವಿಡ್‌ ಇದ್ರೂ ಚಿಕಿತ್ಸೆ ಪಡೆಯದೇ ಯುವ ನಿರ್ದೇಶಕ ಅಭಿರಾಂ ನಿಧನ

ಯುವ ನಿರ್ದೇಶಕ ಅಭಿರಾಮ್‌ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಅವರಿಗೆ 34 ವರ್ಷ ವಯಸ್ಸಾಗಿತ್ತು. ‘ಸಂಯುಕ್ತಾ 2’, ‘0% ಲವ್‌’ ಮೊದಲಾದ ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು. ಕಳೆದ ಒಂದು ವಾರದಿಂದ ಜ್ವರ, ಕೆಮ್ಮು ಇತ್ಯಾದಿ ಕೊರೋನಾ ಲಕ್ಷಣಗಳಿದ್ದವು. ಆದರೆ ಸೂಕ್ತ ಚಿಕಿತ್ಸೆ ಪಡೆಯದೇ ಮನೆಯಲ್ಲಿಯೇ ಉಳಿದಿದ್ದರು. ಕೊನೆಗೆ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ. ಇವರ ನಿರ್ದೇಶನದಲ್ಲಿ ಎರಡು ಸಿನಿಮಾಗಳನ್ನು ನಿರ್ಮಿಸಿ, ಒಂದು ಚಿತ್ರದಲ್ಲಿ ನಾಯಕರಾಗಿದ್ದ ಡಿ.ಎಸ್‌. ಮಂಜುನಾಥ್‌ ಈ ಹಿಂದೆ ಕೊರೋನಾಗೆ ಬಲಿಯಾಗಿದ್ದರು. ಇದೀಗ ನಿರ್ದೇಶಕ ಅಭಿರಾಮ್‌ ಅವರೂ ಇಹಲೋಕ ತ್ಯಜಿಸಿದ್ದಾರೆ.

08:22 AM (IST) May 30

ಕನ್ನಡದಲ್ಲಿ ತೀರ್ಪು ನೀಡುತ್ತಿದ್ದ ನ್ಯಾ| ಕೆ.ವಿ. ವಾಸುದೇವ ಇನ್ನಿಲ್ಲ

ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ಆದೇಶಗಳನ್ನು ಬರೆಸಿದ ಕೀರ್ತಿಗೆ ಭಾಜನರಾಗಿದ್ದ ನಿವೃತ್ತ ಜಿಲ್ಲಾ ನ್ಯಾಯಾಧೀಶ ಕೆ.ವಿ. ವಾಸುದೇವ ಮೂರ್ತಿ (83) ಹೃದಯಾಘಾತದಿಂದ ಶನಿವಾರ ನಿಧನರಾದರು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ನಗರದ ಹನುಮಂತನಗರದ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ. ಸಂಜೆ 6.30ಕ್ಕೆ ಚಾಮರಾಜಪೇಟೆಯ ಟಿ.ಆರ್‌.ಮಿಲ್‌ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

09:44 AM (IST) May 27

ಸ್ವಾತಂತ್ರ್ಯ ಹೋರಾಟಗಾರ ಎಚ್‌. ಎಸ್. ದೊರೆಸ್ವಾಮಿ ವಿಧಿವಶ

ಸ್ವಾತಂತ್ರ್ಯ ಹೋರಾಟಗಾರ ಎಚ್‌. ಎಸ್. ದೊರೆಸ್ವಾಮಿ ಇಂದು (ಬುಧವಾರ) ವಿಧಿವಶರಾಗಿದ್ದಾರೆ.103 ವರ್ಷದ ಎಚ್‌. ಎಸ್. ದೊರೆಸ್ವಾಮಿ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ 1.30ರ ಸುಮಾರಿಗೆ ಹೃಧಯಾಘಾತದಿಂದ ಮೃತಪಟ್ಟಿದ್ದಾರೆ.

"

ಕೋವಿಡ್ ಸೋಂಕಿನಿಂದ ಗುಣಮುಖಗೊಂಡ ದೊರೆಸ್ವಾಮಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಆದ್ದರಿಂದ ಜಯದೇವ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 12 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರು.ಮತ್ತೆ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ಕರೆತರಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.

07:48 AM (IST) May 26

ದೇಶದ ಅತಿದೊಡ್ಡ ಪುಸ್ತಕ ಮಳಿಗೆ, ಸಪ್ನಾ ಸಂಸ್ಥಾಪಕ ಸುರೇಶ್‌ ಶಾ ನಿಧನ!

ದೇಶದ ಅತಿದೊಡ್ಡ ಪುಸ್ತಕ ಮಳಿಗೆ ಎಂದೇ ಖ್ಯಾತವಾಗಿರುವ ಸಪ್ನಾ ಬುಕ್‌ಹೌಸ್‌ ಸಂಸ್ಥಾಪಕ ಸುರೇಶ್‌ ಸಿ. ಶಾ (84) ಅವರು ನಿಧನರಾದರು.

ಚಿಕ್ಕ ಮಳಿಗೆಯೊಂದರಲ್ಲಿ 1966ರಲ್ಲಿ ಸಪ್ನಾ ಬುಕ್‌ ಹೌಸ್‌ ಆರಂಭಿಸಿದ ಸುರೇಶ್‌, ದೇಶದ ಅತಿ ದೊಡ್ಡ ಮಳಿಗೆಯಾಗಿ ಬೆಳೆಸಿದರು. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ 19 ಶಾಖೆಗಳನ್ನು ಹೊಂದಿರುವ ಸಪ್ನಾ ಕನ್ನಡ ಪುಸ್ತಕಗಳನ್ನು ವ್ಯಾಪಕವಾಗಿ ಓದುಗರಿಗೆ ತಲುಪಿಸುವ ಕೆಲಸವನ್ನು ಸತತವಾಗಿ ಮಾಡಿಕೊಂಡು ಬರುತ್ತಿದೆ.

ಸುರೇಶ್‌ ಅವರು ಮೂವರು ಪುತ್ರರು ಸೇರಿದಂತೆ ಕುಟುಂಬ ಸದಸ್ಯರು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ ಎಂದು ಸಪ್ನಾ ಸಂಸ್ಥೆ ಪ್ರಕಟಣೆ ತಿಳಿಸಿದೆ. ಸಿಎಂ ಸೇರಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

11:37 AM (IST) May 25

ಹಿರಿಯ ನಟ ಕೃಷ್ಣೇಗೌಡ ನಿಧನ

ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಹಿರಿಯ ನಟ ಕೃಷ್ಣೇಗೌಡ ಮಂಗಳವಾರ ಮುಂಜಾನೆ 4 ಗಂಟೆಗೆ, ಆಸ್ಟರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ರಂಗಭೂಮಿ ಕಲಾವಿದ ಹಾಗೂ ಹಲವಾರು ಚಿತ್ರಗಳಲ್ಲಿ ವಿಶಿಷ್ಟ ಅಭಿನಯ ನೀಡಿ ತಮ್ಮದೇ ಛಾಪು ಮೂಡಿಸಿದ್ದ ಕೃಷ್ಣೇಗೌಡರು, ಚಲನಚಿತ್ರ ಕಲಾವಿದರ ಸಂಘದ ಖಜಾಂಚಿ ಆಗಿ ಸೇವೆ ಸಲ್ಲಿಸಿದ್ದರು.

11:35 AM (IST) May 25

ಪ್ರಖ್ಯಾತ ಭರತನಾಟ್ಯ ಕಲಾವಿದೆ ಭಾನುಮತಿ ಕೊರೋನಾಕ್ಕೆ ಬಲಿ

ಕರ್ನಾಟಕ ಕಂಡ ಅಪ್ರತಿಮ ನೃತ್ಯ ಕಲಾವಿದರಲ್ಲಿ ಒಬ್ಬರಾಗಿದ್ದ ನೃತ್ಯ ಗುರು ಬಿ .ಭಾನುಮತಿ ಅವರು ಕೊರೊನಾದಿಂದ ಸೋಮವಾರ ನಿಧನ ಹೊಂದಿದ್ದಾರೆ. ಕಳೆದ ಒಂದು ವಾರದಿಂದ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿದ್ದರು. 

ಮೂಲತ: ಕಲಾವಿದರ ಕುಟುಂಬದಿಂದಲೇ ಬಂದ ಬಿ. ಭಾನುಮತಿ ಭರತನಾಟ್ಯ ನೃತ್ಯ ಪ್ರಕಾರದಲ್ಲಿ ದೊಡ್ಡ ಹೆಸರು ಮಾಡಿದವರು. ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಶಾಸ್ತ್ರೀಯ ನೃತ್ಯ ಸೌಂದರ್ಯವನ್ನು ಪಸರಿಸಿದವರು ಭಾನುಮತಿ.

04:41 PM (IST) May 24

ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಶ್ರೀಕುಮಾರ್ ಬ್ಯಾನರ್ಜಿ ನಿಧನ

ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಶ್ರೀಕುಮಾರ್ ಬ್ಯಾನರ್ಜಿ (70) ಅವರು ನವಿ ಮುಂಬೈನ ಸ್ವಗೃಹದಲ್ಲಿ ಭಾನುವಾರ ಹೃದಯಾಘಾತದಿಂದ ನಿಧನ ಹೊಂದಿದರು.

ಬ್ಯಾನರ್ಜಿ ಅವರು ಕಳೆದ ತಿಂಗಳಷ್ಟೇ ಕೋವಿಡ್‌–19ನಿಂದ ಗುಣಮುಖರಾಗಿದ್ದರು. 2012ರಲ್ಲಿ ಅವರು ಪರಮಾಣು ಶಕ್ತಿ ಆಯೋಗದ ಅಧ್ಯಕ್ಷ ಸ್ಥಾನ ಹಾಗೂ ಪರಮಾಣು ಶಕ್ತಿ ಇಲಾಖೆಯ ಕಾರ್ಯದರ್ಶಿ ಹುದ್ದೆಯಿಂದ ನಿವೃತ್ತಿ ಹೊಂದಿದ್ದರು.

2010ರ ತನಕ ಒಟ್ಟು ಆರು ವರ್ಷಗಳ ಕಾಲ ಬ್ಯಾನರ್ಜಿ ಅವರು ಭಾಭಾ ಪರಮಾಣು ಸಂಶೋಧನಾ ಕೇಂದ್ರದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.

03:00 PM (IST) May 24

ಅಂತಾರಾಷ್ಟ್ರೀಯ ಸ್ಯಾಕ್ಸೊಫೋನ್ ಕಲಾವಿದ ಮಚ್ಚೇಂದ್ರನಾಥ್ ಕೋವಿಡ್‌ನಿಂದ ಸಾವು

ಅಂತರರಾಷ್ಟ್ರೀಯ ಮಟ್ಟದ ಸ್ಯಾಕ್ಸೊಫೋನ್ ಕಲಾವಿದ ಮಚ್ಚೇಂದ್ರನಾಥ್ ಮಂಗಳಾದೇವಿ (62) ಭಾನುವಾರ ನಿಧನರಾದರು.

ಅವರಿಗೆ ಕೋವಿಡ್ ತಗುಲಿತ್ತು. ವಾರದ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ನಗರದ ಮಂಗಳಾದೇವಿ ದೇವಸ್ಥಾನದಲ್ಲಿ ಪ್ರತಿನಿತ್ಯ ಸ್ಯಾಕ್ಸೊಫೋನ್ ಸೇವೆ ಸಲ್ಲಿಸುತ್ತಿದ್ದರು. ದುಬೈ, ಅಬುಧಾಬಿ, ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳಲ್ಲಿ ಸ್ಯಾಕ್ಸೊಫೋನ್ ಸಂಗೀತ ಕಚೇರಿಗಳನ್ನು ನಡೆಸಿದ್ದರು.

09:43 AM (IST) May 23

ಮೈನೇ ಪ್ಯಾರ್‌ ಕಿಯಾ, ಹಮ್‌ ಆಪ್ಕೆ ಹೇ ಕೌನ್‌ ರಾಮ್‌ಲಕ್ಷಣ್‌ ಇನ್ನಿಲ್ಲ

ರಾಜಶ್ರೀ ಪ್ರೊಡಕ್ಷನ್‌ನ ಸೂಪರ್‌ಹಿಟ್‌ ಚಿತ್ರಗಳಾದ ‘ಮೈನೆ ಪ್ಯಾರ್‌ ಕಿಯಾ’, ‘ಹಮ್‌ ಆಪ್ಕೇ ಹೇ ಕೌನ್‌’ ಸೇರಿದಂತೆ ಹಲವು ಜನಪ್ರಿಯ ಚಿತ್ರಗಳಿಗೆ ಸಂಗೀತ ನೀಡಿದ್ದ ರಾಮ್‌ಲಕ್ಷ್ಮಣ್‌ (78)ಶನಿವಾರ ಹೃದಯಾಘಾತದಿಂದ ನಿಧನರಾದರು.

ರಾಮಲಕ್ಷ್ಮಣ್‌ 6 ದಿನಗಳ ಹಿಂದಷ್ಟೇ ಕೋವಿಶೀಲ್ಡ್‌ ಲಸಿಕೆಯ 2ನೇ ಡೋಸ್‌ ಪಡೆದಿದ್ದರು. ಲಸಿಕೆ ಪಡೆದಾಗ ಸಮಸ್ಯೆ ಇರಲಿಲ್ಲ. ಆದರೆ ಮನೆಗೆ ಬಂದ ನಂತರ ನಿಶ್ಯಕ್ತಿ ಕಾಣಿಸಿಕೊಂಡಿತ್ತು. ವೈದ್ಯರು ಮನೆಗೇ ಬಂದು ಚಿಕಿತ್ಸೆ ನೀಡಿದ್ದರು. ಆದರೆ ಶನಿವಾರ ಮುಂಜಾನೆ ಸಾವನ್ನಪ್ಪಿದರು’ ಎಂದು ಪುತ್ರ ಅಮರ್‌ ತಿಳಿಸಿದ್ದಾರೆ.

ಇವರ ಮೂಲ ಹೆಸರು ವಿಜಯ್‌ ಪಾಟೀಲ್‌. ತಮ್ಮ ಮೊದಲ ಮರಾಠಿ ಸಿನಿಮಾ ‘ಪಾಂಡು ಹವಾಲ್ದಾರ್‌’ನಲ್ಲಿ ಸಹೋದ್ಯೋಗಿ ಸುರೇಂದ್ರ ಅವರೊಂದಿಗೆ ಸೇರಿ ‘ರಾಮ-ಲಕ್ಷ್ಮಣ’ ಹೆಸರಿನಲ್ಲಿ ಹಾಡೊಂದನ್ನು ಬರೆದಿದ್ದರು. ಅನಂತರ ಅವರ ಹೆಸರೇ ರಾಮಲಕ್ಷ್ಮಣ್‌ ಎಂದಾಯಿತು. 40 ವರ್ಷಗಳ ವೃತ್ತಿಜೀವನದಲ್ಲಿ ಇವರು ಹಿಂದಿ, ಮರಾಠಿ, ಬೋಜ್ಪುರಿಯ 150ಕ್ಕೂ ಹೆಚ್ಚು ಸಿನಿಮಾಗಳಿಗೆ ಹಾಡು ಬರೆದಿದ್ದಾರೆ.

10:49 AM (IST) May 22

ಕರ್ನಾಟಕದ ಮಾಜಿ ಸ್ಪೀಕರ್ ನಿಧನ

ಆಧುನಿಕ ಗಾಂಧಿವಾದಿ ಎಂದೇ ಪ್ರಸಿದ್ಧಿಯಾಗಿದ್ದ ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ (80) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಚೈನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮೈಸೂರಿನ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಇಂದು (ಶುಕ್ರವಾರ) ಮಧ್ಯಾಹ್ನ ಮೈಸೂರಿನ ಕುವೆಂಪು ನಗರ ನಿವಾಸದಲ್ಲಿ ಸಾವನ್ನಪ್ಪಿದ್ದಾರೆ.

10:46 AM (IST) May 22

ಕೇಂದ್ರದ ಮಾಜಿ ಸಚಿವ, ರೈತ ಮುಖಂಡ ಬಾಬಾಗೌಡ ಪಾಟೀಲ ಇನ್ನಿಲ್ಲ

ಕೇಂದ್ರದ ಮಾಜಿ ಸಚಿವ, ರೈತ ಮುಖಂಡ ಬಾಬಾಗೌಡ ಪಾಟೀಲ(78) ಅವರು ಇಂದು(ಶುಕ್ರವಾರ) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದೆ ಅನರೋಗ್ಯದಿಂದ ಬಳಲುತ್ತಿದ್ದ ಬಾಬಾಗೌಡ ಅವರನ್ನ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. 

ಸಂಪೂರ್ಣ ಸುದ್ದಿಗಾಘಿ ಇಲ್ಲಿ ಕ್ಲಿಕ್ ಮಾಡಿ: ರೈತ ಮುಖಂಡ ಬಾಬಾಗೌಡ ಪಾಟೀಲ ವಿಧಿವಶ

02:51 PM (IST) May 21

ಮರ ಅಪ್ಪಿಕೊಂಡು ಅಮರರಾದ ಪರಿಸರವಾದಿ ಸುಂದರಲಾಲ್ ಬಹುಗುಣ