ಜನ ಬಯಸಿದರೆ ರಾಜಕೀಯ ಪ್ರವೇಶಿಸಲು ರೆಡಿ: ರಾಬಾರ್ಟ್ ವಾದ್ರಾ
- ನಾನು ಜನರ ಮಧ್ಯದಲ್ಲೇ ಇದ್ದೇನೆ, ರಾಜಕೀಯ ಗೊತ್ತಿದೆ
- ಜನರು ಬಯಸಿದರೆ ರಾಜಕಾರಣಕ್ಕೆ ಧುಮುಕಲು ಸಿದ್ಧ
- ರಾಜಕೀಯ ಸೇರುವ ಒಲವು ತೋರಿದ ಪ್ರಿಯಾಂಕಾ ಗಾಂಧಿ ಪತಿ
ಇಂದೋರ್(ಏ.12): ಜನರು ಬಯಸಿದರೆ ರಾಜಕಾರಣಕ್ಕೆ ಧುಮುಕಲು ಸಿದ್ಧ. ಇದರಿಂದ ಜನ ಸೇವೆಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅವಕಾಶ ಸಿಗಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ (Sonia Gandhi) ರಾಬರ್ಟ್ ವಾದ್ರಾ (Robert Vadra) ಹೇಳಿದ್ದಾರೆ. ಉಜ್ಜಯನಿಯ ಮಹಾಕಾಲೇಶ್ವರ ದೇಗುಲಕ್ಕೆ (Mahakaleshwara Temple at Ujjaini) ಭಾನುವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ನಾನು ಜನರನ್ನು ಪ್ರತಿನಿಧಿಸಬೇಕು, ಅವರಿಗಾಗಿ ಬದಲಾವಣೆ ತರಬೇಕು ಎಂದು ಜನರೇ ಬಯಸಿದರೆ ನಾನು ಆ ನಿಟ್ಟಿನಲ್ಲಿ ಮುಂದುವರಿಯುತ್ತೇನೆ. ನನ್ನ ದತ್ತಿ ಕೆಲಸಗಳು ಕಳೆದ 10 ವರ್ಷಗಳಿಂದ ನಡೆಯುತ್ತಿವೆ. ಮುಂದೆಯೂ ನಡೆಯುತ್ತವೆ. ನಾನು ರಾಜಕಾರಣ ಪ್ರವೇಶಿಸಲಿ, ಬಿಡಲಿ, ಆ ಕೆಲಸಗಳು ಮುಂದುವರಿಯಲಿವೆ’ ಎಂದು ಹೇಳಿದರು.
ನಾನು ಜನರ ಮಧ್ಯದಲ್ಲೇ ಇದ್ದೇನೆ, ಅವರೂ ನನ್ನ ಜತೆಗೇ ಇದ್ದಾರೆ. ನನಗೂ ರಾಜಕಾರಣ ಅರ್ಥವಾಗುತ್ತದೆ. ದೇಶದಲ್ಲಿ ಹಿಂದು ಹಾಗೂ ಮುಸ್ಲಿಮರ ನಡುವಣ ವಿಭಜನೆ ನಿಲ್ಲಬೇಕು. ದೇಶ ಜಾತ್ಯತೀತವಾಗಿಯೇ ಇದ್ದು, ಎಲ್ಲ ಧರ್ಮಗಳನ್ನು ಅಪ್ಪಿಕೊಳ್ಳಬೇಕು ಎಂದು ಪ್ರಿಯಾಂಕಾ ಗಾಂಧಿ (Priyanka Gandhi) ಅವರ ಪತಿಯಾಗಿರುವ ವಾದ್ರಾ ಹೇಳಿದರು. ಪತ್ನಿ ಪ್ರಿಯಾಂಕಾ ಅವರು ನೇತೃತ್ವ ವಹಿಸಿದ್ದ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 2 ಸ್ಥಾನ ಗೆದ್ದಿದ್ದರೂ ಪ್ರಿಯಾಂಕಾ ಅವರಿಗೆ 10ಕ್ಕೆ 10 ಅಂಕ ನೀಡುತ್ತೇನೆ. ಏಕೆಂದರೆ, ಅವರು ಹಗಲು ರಾತ್ರಿ ಚುನಾವಣೆಗಾಗಿ ಕೆಲಸ ಮಾಡಿದ್ದಾರೆ. ಆದರೂ ಜನಾದೇಶವನ್ನು ನಾವು ಒಪ್ಪಿಕೊಳ್ಳಬೇಕು ಎಂದು ಹೇಳಿದರು.
ವಾದ್ರಾ ದೇಗುಲ ಭೇಟಿ ವೇಳೆ ‘ಮೋದಿ ಮೋದಿ’ ಘೋಷಣೆ!
2019ರಲ್ಲಿ ಮುಂಬೈನ (Mumbai) ಮುಂಬಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾವ ರಾಬರ್ಟ್ ವಾದ್ರಾ ಮುಜುಗರಕ್ಕೆ ಈಡಾದ ಘಟನೆ ನಡೆದಿತ್ತು.
ವಾದ್ರಾ ಅವರು ದೇವಸ್ಥಾನ ಪ್ರವೇಶಿಸುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ಭಕ್ತರು ‘ಮೋದಿ ಮೋದಿ’ ಎಂದು ಘೋಷಣೆ ಕೂಗಿದ್ದಾರೆ. ಅಲ್ಲದೆ ಮೋದಿ ಜಿಂದಾಬಾದ್, ಭಾರತ ಮಾತಾ ಕೀ ಜೈ ಎಂದೂ ಕೂಗಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆಗಮಿಸಿ ವಾದ್ರಾಗೆ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ವೇಳೆ ಮಾತನಾಡಿದ ವಾದ್ರಾ ದೇವರ ಆಶೀರ್ವಾದ ಪಡೆಯಲು ಬಂದಿದ್ದೇನೆ. ನನಗೆ ರಾಜಕೀಯ ಬೇಕಾಗಿಲ್ಲ. ರಾಜಕೀಯ ಚಟುವಟಿಕೆಗಳನ್ನು ದೇಗುಲದಲ್ಲಿ ಮಾಡಬಾರದು ಎಂದು ಹೇಳಿದ್ದರು.
Fact Check: ಪ್ರಿಯಾಂಕಾ, ವಾದ್ರಾ ಮದ್ವೆ ಮಾಡಿದ್ದು ಮೌಲ್ವಿ?
ಈ ಹಿಂದೆ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರ ಆಪ್ತ ಎನ್ನಲಾದ ಮನೋಜ್ ಅರೋರಾ ವಿರುದ್ಧ ಕಾಲ ಮಿತಿಯಿಲ್ಲದ ಜಾಮೀನು ರಹಿತ ವಾರೆಂಟ್ ಹೊರಡಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ದೆಹಲಿ ಕೋರ್ಟ್ ಮೊರೆ ಹೋಗಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ವಿಚಾರಣೆ ಹಾಜರಾಗುವಂತೆ ನೀಡಲಾದ ಸಮನ್ಸ್ಗಳನ್ನು ಮನೋಜ್ ಅರೋರಾ ನಿರ್ಲಕ್ಷಿಸಿದ್ದಾರೆ. ಹೀಗಾಗಿ, ಮನೋಜ್ ಅರೋರಾ ವಿರುದ್ಧ ಕಾಲ ಮಿತಿಯಿಲ್ಲದ ಜಾಮೀನು ರಹಿತ ವಾರೆಂಟ್ ಹೊರಡಿಸಬೇಕು ಎಂದು ಇಡಿ ಮನವಿ ಮಾಡಿತ್ತು.
2018ರಲ್ಲಿ ರಾಜಸ್ಥಾನದ ಬಿಕಾನೇರ್ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ (Rahul Gandi) ಭಾವ, ಉದ್ಯಮಿ ರಾಬರ್ಟ್ ವಾದ್ರಾ ಅವರ ಕಂಪನಿ ಹೊಂದಿದ್ದ ಜಮೀನನ್ನು ಏಳುಪಟ್ಟು ಅಧಿಕ ಬೆಲೆಗೆ ಖರೀದಿ ಮಾಡಿದ್ದ ಕಂಪನಿಗೆ ಸಾಲ ನೀಡಿದ್ದ ಭೂಷಣ್ ಪವರ್ ಮತ್ತು ಉಕ್ಕು ಕಂಪನಿಗೆ ಸಂಕಷ್ಟಎದುರಾಗಿತ್ತು. ಅಂದು ವಾದ್ರಾ ವಿರುದ್ಧ ತನಿಖೆ ತೀವ್ರಗೊಳಿಸಿದ ಜಾರಿ ನಿರ್ದೇಶನಾಲಯ, ಭೂಷಣ್ ಕಂಪನಿಗೆ ಸಂಬಂಧಿಸಿದಂತೆ ತೆರಿಗೆ ವ್ಯಾಜ್ಯ ಇತ್ಯರ್ಥ ಆಯೋಗ ನಡೆಸಿದ್ದ ವಿಚಾರಣೆ ಹಾಗೂ ಅನುಮಾನಾಸ್ಪದ ಬೆಳವಣಿಗೆಗಳ ಕುರಿತು ಮಾಹಿತಿ ಕೇಳಿ ಪತ್ರ ಬರೆದಿತ್ತು.