ಮತ್ತೆ ಜೈಲಿನಿಂದ ಬಿಡುಗಡೆಯಾದ ರಾಮ್ ರಹೀಮ್ ಸಿಂಗ್: 4 ವರ್ಷದಲ್ಲಿ 9ನೇ ಬಾರಿ ಪೆರೋಲ್!
ಇದು ಕಳೆದ 24 ತಿಂಗಳುಗಳಲ್ಲಿ ರಾಮ್ ರಹೀಮ್ ಸಿಂಗ್ ಅವರ 7ನೇ ಪೆರೋಲ್ ಮತ್ತು ಕಳೆದ ನಾಲ್ಕು ವರ್ಷಗಳಲ್ಲಿ 9ನೆಯದು ಎಂದೂ ವರದಿಯಾಗಿದೆ.
ಹೊಸದಿಲ್ಲಿ (ಜನವರಿ 19, 2024): ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ಗೆ ಮತ್ತೆ ಪೆರೋಲ್ ಮಂಜೂರಾಗಿದೆ. ಈ ಹಿನ್ನೆಲೆ ಜೈಲಿನಿಂದ ಬಿಡುಗಡೆಯಾಗ್ತಿದ್ದು, 50 ದಿನಗಳ ಕಾಲ ಜೈಲಿನಿಂದ ಹೊರಗಿರಲಿದ್ದಾರೆ ಎಂದೂ ತಿಳಿದುಬಂದಿದೆ.
ಅಲ್ಲದೆ, ಇದು ಕಳೆದ 24 ತಿಂಗಳುಗಳಲ್ಲಿ ರಾಮ್ ರಹೀಮ್ ಸಿಂಗ್ ಅವರ 7ನೇ ಪೆರೋಲ್ ಮತ್ತು ಕಳೆದ ನಾಲ್ಕು ವರ್ಷಗಳಲ್ಲಿ 9ನೆಯದು ಎಂದೂ ವರದಿಯಾಗಿದೆ. ಹರ್ಯಾಣದ ರೋಹ್ಟಕ್ ಜಿಲ್ಲೆಯ ಸುನಾರಿಯಾ ಜೈಲಿನಲ್ಲಿರೋ ರಾಮ್ ರಹೀಮ್ ಸಿಂಗ್ ಕಳೆದ ವರ್ಷ 3 ಸಲ ಪೆರೋಲ್ನಲ್ಲಿ, ಅಂದರೆ ಬರೋಬ್ಬರಿ 91 ದಿನಗಳ ಕಾಲ ಬಿಡುಗಡೆಯಾಗಿದ್ದರು. ನವೆಂಬರ್ನಲ್ಲಿ 21 ದಿನ, ಜುಲೈನಲ್ಲಿ 30 ದಿನಗಳು ಮತ್ತು ಜನವರಿಯಲ್ಲಿ ಡೇರಾ ಸಚ್ಚಾ ಸೌದಾ ಮಾಜಿ ಮುಖ್ಯಸ್ಥ ಶಾ ಸತ್ನಾಮ್ ಜನ್ಮ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು 40 ದಿನ ಬಿಡುಗಡೆಯಾಗಿದ್ದರು.
ಇದನ್ನು ಓದಿ: ತಾಳಿ ಕಟ್ಟಲು ಪೆರೋಲ್: ಅಪರಾಧಿ ಮದ್ವೆಯಾಗಲು ಕೋರ್ಟ್ ಮೊರೆ ಹೋದ ಮಹಿಳೆ; ಹೈಕೋರ್ಟ್ನಿಂದ ಶಾದಿ ಭಾಗ್ಯ
ಆ ಸಂದರ್ಭದಲ್ಲಿ ಹುಟ್ಟುಹಬ್ಬದ ಕೇಕ್ ಅನ್ನು ಕತ್ತಿಯಿಂದ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸುತ್ತಿರುವುದು ಸೆರೆಯಾಗಿತ್ತು. ಆನ್ಲೈನ್ನಲ್ಲಿ ವ್ಯಾಪಕವಾಗಿ ಶೇರ್ ಆಗಿದ್ದ ವಿಡಿಯೋದಲ್ಲಿ ರಾಮ್ ರಹೀಮ್ ಸಿಂಗ್ ಕೇಕ್ ಕತ್ತರಿಸಿ, ಐದು ವರ್ಷಗಳ ನಂತರ ಈ ರೀತಿ ಆಚರಿಸಲು ಅವಕಾಶ ಸಿಕ್ಕಿತು... ಹಾಗಾಗಿ ನಾನು ಕನಿಷ್ಠ ಐದು ಕೇಕ್ಗಳನ್ನು ಕತ್ತರಿಸಬೇಕು. ಇದು ಮೊದಲ ಕೇಕ್! ಎಂದಿದ್ದರು.
ಆಯುಧಗಳ ಸಾರ್ವಜನಿಕ ಪ್ರದರ್ಶನವನ್ನು (ಕತ್ತಿಯಿಂದ ಕೇಕ್ ಕತ್ತರಿಸುವುದು ಆ ವರ್ಗಕ್ಕೆ ಸೇರುತ್ತದೆ) ಶಸ್ತ್ರಾಸ್ತ್ರ ಕಾಯಿದೆಯಡಿಯಲ್ಲಿ ನಿಷೇಧಿಸಲಾಗಿದೆ. ಈ ಮಧ್ಯೆ, ರಾಮ್ ರಹೀಮ್ ಅವರ ಜನವರಿ 2023 ರ ಬಿಡುಗಡೆಯು ವಿವಾದವನ್ನು ಹುಟ್ಟುಹಾಕಿತ್ತು. ವಿಶೇಷವಾಗಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಎಲ್ಲಾ ಕಾರ್ಯವಿಧಾನಗಳನ್ನು ಅನುಸರಿಸಿದರೆ ಪೆರೋಲ್ ಪಡೆಯುವುದು ಅವರ ಹಕ್ಕು ಎಂದಿದ್ದರು. ರಾಮ್ ರಹೀಮ್ ಅವರಿಗೆ ಪೆರೋಲ್ ಸಿಕ್ಕಿದೆ ಎಂದು ನನಗೆ ತಿಳಿದಿರಲಿಲ್ಲ. ಆದರೆ ಅವರು ಪಡೆದಿದ್ದರೆ, ಅದು ಎಲ್ಲಾ ಕಾರ್ಯವಿಧಾನಗಳನ್ನು ಅನುಸರಿಸಿದ ನಂತರ ಇರಬೇಕು ಮತ್ತು ಅದು ಅವರ ಹಕ್ಕು. ನಾನು ಅದರಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಖಟ್ಟರ್ ಹೇಳಿದ್ದರು.
ಬ್ಲೇಡ್ ರನ್ನರ್ ಖ್ಯಾತಿಯ ಆಸ್ಕರ್ ಪಿಸ್ಟೋರಿಯಸ್ಗೆ ಪೆರೋಲ್
2022ರಲ್ಲೂ ಹರಿಯಾಣದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ರಾಮ್ ರಹೀಮ್ ಸಿಂಗ್ ಅವರಿಗೆ ಮೂರು ಬಾರಿ ಪೆರೋಲ್ ನೀಡಿತ್ತು. ಅಕ್ಟೋಬರ್ನಲ್ಲಿ ಅವರನ್ನು 40 ದಿನಗಳವರೆಗೆ ಬಿಡುಗಡೆ ಮಾಡಲಾಯಿತು, ಜೂನ್ನಲ್ಲಿ ಅವರನ್ನು ಒಂದು ತಿಂಗಳು ಬಿಡುಗಡೆ ಮಾಡಲಾಯಿತು ಮತ್ತು ಫೆಬ್ರವರಿಯಲ್ಲಿ ಅವರನ್ನು 21 ದಿನಗಳವರೆಗೆ ಬಿಡುಗಡೆ ಮಾಡಲಾಯಿತು. ಅವರ ತಾಯಿಯನ್ನು ಭೇಟಿ ಮಾಡಲು - 2021 ಮತ್ತು 2020 ರಲ್ಲಿ ತಲಾ ಒಮ್ಮೆ ಪೆರೋಲ್ ನೀಡಲಾಯಿತು.
ಅಕ್ಟೋಬರ್ ಪೆರೋಲ್ ಹರಿಯಾಣದಲ್ಲಿ ಪಂಚಾಯತ್ ಚುನಾವಣೆಗೆ ಮುಂಚಿತವಾಗಿ ಸಂಭವಿಸಿತ್ತು ಮತ್ತು ರಾಮ್ ರಹೀಮ್ ನಡೆಸಿದ 'ವರ್ಚುವಲ್ ಸತ್ಸಂಗ'ದಲ್ಲಿ ಹಲವಾರು ಬಿಜೆಪಿ ನಾಯಕರು ಭಾಗವಹಿಸಿದ್ದು, ಈ ಹಿನ್ನೆಲೆ ಪ್ರತಿಪಕ್ಷಗಳ ಮುಖಂಡರು ವಾಗ್ದಾಳಿ ನಡೆಸಿದ್ದರು. ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ರಾಮ್ ರಹೀಮ್ ಸಿಂಗ್ ಅವರನ್ನು ಹರಿಯಾಣದ ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯವು 2017ರ ಆಗಸ್ಟ್ನಲ್ಲಿ ದೋಷಿ ಎಂದು ಘೋಷಿಸಿತ್ತು.