ಮುಖ ಮುಚ್ಚಿಕೊಂಡು ರೆಸ್ಟೋರೆಂಟ್ಗೆ ಕನ್ನ ಹಾಕಿದ ಕಳ್ಳನಿಗೆ ನಿರಾಸೆಯಾಗಿದೆ. ಕ್ಯಾಶ್ ಕೌಂಟರ್ ಸೇರಿ ಎಲ್ಲಾ ಕಡೆ ತಡಕಾಡಿದರೂ ಒಂದು ರೂಪಾಯಿ ಸಿಕ್ಕಿಲ್ಲ. ಕೊನೆಗೆ ತನ್ನಲ್ಲಿದ್ದ 20 ರೂಪಾಯಿ ತೆಗೆದು ಟೇಬಲ್ ಮೇಲಿಟ್ಟು ಹೊರಟ ದೃಶ್ಯ ಸೆರೆಯಾಗಿದೆ.
ಹೈದರಾಬಾದ್(ಜು.26) ಕ್ಷಮಾಪಣೆ ಪತ್ರ ಬರೆದು ಕಳ್ಳತನ, ಕೆಲ ದಿನಗಳಲ್ಲಿ ಹಿಂತಿರುಗಿಸುವುದಾಗಿ ಹೇಳಿ ಕಳ್ಳತನ ಹೀಗೆ ಹಲವು ಘಟನೆಗಳು ವರದಿಯಾಗಿದೆ. ಇದೀಗ ಕಳ್ಳನೊಬ್ಬ ರೆಸ್ಟೋರೆಂಟ್ಗೆ ಕನ್ನ ಹಾಕಿದ್ದಾರೆ. ರಾತ್ರಿ ವೇಳೆ ರೆಸ್ಟೋರೆಂಟ್ಗೆ ನುಗ್ಗಿದ ಕಳ್ಳ ಕ್ಯಾಶ್ ಕೌಂಟರ್ ಸೇರಿದಂತೆ ಎಲ್ಲಾ ಕಡೆ ತಡಕಾಡಿದರೂ ಒಂದು ರೂಪಾಯಿ ಸಿಗಲಿಲ್ಲ. ನಿರಾಸೆಗೊಂಡ ಕಳ್ಳ ತನ್ನ ಬಳಿ ಇದ್ದ 20 ರೂಪಾಯಿಯನ್ನು ತೆಗೆದು ಟೇಬಲ್ ಮೇಲಿಟ್ಟಿದ್ದಾನೆ. ನೋಟಿನ ಮೇಲೆ ನೀರಿನ ಬಾಟಲಿಯೊಂದನ್ನು ಇಟ್ಟು ಪರಾರಿಯಾದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ರಂಗರೆಡ್ಡಿ ಜೆಲ್ಲಿಯ ಮಹೇಶ್ವರಂ ಬಳಿ ಇರುವ ರೆಸ್ಟೋರೆಂಟ್ಗೆ ಕಳ್ಳನೊಬ್ಬ ಕನ್ನ ಹಾಕಿದ್ದಾನೆ. ಬೆಳಗ್ಗೆಯಿಂದ ರಾತ್ರಿ ವರೆಗೆ ಈ ರೆಸ್ಟೋರೆಂಟ್ ಜನರಿಂದ ತುಂಬಿ ತುಳುಕುತ್ತದೆ. ಭಾರಿ ವ್ಯಾಪಾರ ವಹಿವಾಟು ನಡೆಯುತ್ತದೆ.ಹೀಗಾಗಿ ಇದೇ ಹೊಟೆಲ್ ದೋಚಲು ಕಳ್ಳ ಪ್ಲಾನ್ ಮಾಡಿದ್ದಾನೆ. ಎಲ್ಲೆಡೆ ಸಿಸಿಟಿವಿ ಇರುವುದರಿಂದ ಮುಖಕ್ಕೆ ಮಾಸ್ಕ್, ಕೈಗಳಿಗೆ ಗ್ಲೌಸ್ ಧರಿಸಿ ಬಂದಿದ್ದಾನೆ. ಬಳಿಕ ರೆಸ್ಟೋರೆಂಟ್ ಬಾಗಿಲನ್ನು ಕಬ್ಬಿಣ ರಾಡ್ ಮೂಲಕ ಮುರಿದಿದ್ದಾನೆ.
ಮನೆಗೆ ನುಗ್ಗಿ ಪಕೋಡ ತಯಾರಿಸಿ ತಿಂದು ಚಿನ್ನಾಭರಣ ದೋಚಿದ ಕಳ್ಳರ ಗ್ಯಾಂಗ್!
ಒಳ ಪ್ರವೇಶಿಸಿದ ಕಳ್ಳ ನೇರವಾಗಿ ಕ್ಯಾಶ್ ಹಾಗೂ ಬಿಲ್ಲಿಂಗ್ ಕೌಂಟರ್ಗೆ ತೆರಳಿದ್ದಾನೆ. ಕೌಂಟರ್ ಡ್ರವರ್ ಸೇರಿದಂತೆ ಎಲ್ಲೆಡೆ ತಡಕಾಡಿದ್ದಾನೆ. ಆದರೆ ಏನೂ ಸಿಗಲಿಲ್ಲ. ಇತರೆಡೆಯೂ ಹುಡುಕಾಡಿದ್ದಾನೆ. ಒಂದು ರೂಪಾಯಿ ಸಿಕ್ಕಿಲ್ಲ. ಕೊನೆಗೆ ಬೆಲೆಬಾಳುವ ವಸ್ತುಗಳೇನಾದರು ಸಿಗಬಹುದಾ ಎಂದು ಹುಡುಕಾಟ ನಡೆಸಿದ್ದಾನೆ. ಅದೆಷ್ಟೆ ಹುಡುಕಾಡಿದರೂ ಹಣವೂ ಸಿಗಲಿಲ್ಲ. ಬೆಲೆಬಾಳುವ ವಸ್ತುಗಳು ಸಿಗಲಿಲ್ಲ.
ರಾಡ್ ಮೂಲಕ ಬಾಗಿಲು ಒಡೆದು ಇಷ್ಟು ರಿಸ್ಕ್ ತೆಗೆದುಕೊಂಡು ಕಳ್ಳತನ ಮಾಡಲು ಬಂದರೆ ಒಂದು ರೂಪಾಯಿ ಕೂಡ ಸಿಕ್ಕಿಲ್ಲ ಎಂದು ಕಳ್ಳನಿಗೆ ನಿರಾಸೆಯಾಗಿದೆ. ಅಲ್ಲೆ ಇದ್ದ ಸಿಸಿಟಿವಿಯತ್ತ ಮುಖ ಮಾಡಿ, ಇಷ್ಟು ದೊಡ್ಡ ರೆಸ್ಟೋರೆಂಟ್ನಲ್ಲಿ ವ್ಯಾಪಾರವೇ ಇಲ್ಲವೇ ಎಂದು ಪ್ರಶ್ನಿಸಿದ್ದಾನೆ. ಬಳಿಕ ತನ್ನಲ್ಲಿದ್ದ ಹಣದಲ್ಲಿ 20 ರೂಪಾಯಿ ನೋಟು ತೆಗೆದು ಕ್ಯಾಶ್ ಕೌಂಟರ್ ಟೇಬಲ್ ಮೇಲೆ ಇಟ್ಟಿದ್ದಾನೆ. ನೋಟು ಎಗರಿ ಹೋಗದಂತೆ ನೀರಿನ ಬಾಟಲಿ ಇಟ್ಟ ಕಳ್ಳ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.
ಹಾಸನ: ಅರಸೀಕೆರೆಯಲ್ಲಿ ಚಡ್ಡಿ ಗ್ಯಾಂಗ್ ಮತ್ತೆ ಪ್ರತ್ಯಕ್ಷ, ಆತಂಕದಲ್ಲಿ ಜನತೆ..!
ಕಳ್ಳನ ಈ ವಿಡಿಯೋ ವೈರಲ್ ಆಗಿದೆ. ಹಲವು ಸ್ಥಳೀಯ ಮಾಧ್ಯಮಗಳು ಈ ಕುರಿತ ವಿಡಿಯೋ ಪೋಸ್ಟ್ ಮಾಡಿದೆ. ಕಳ್ಳನ ನಡೆ ಭಾರಿ ಚರ್ಚೆಯಾಗುತ್ತಿದೆ.
