ಮಧ್ಯಪ್ರದೇಶದಲ್ಲಿ ದೇಶದ ಪ್ರಥಮ ವಿಶ್ವದರ್ಜೆ ರೈಲು ನಿಲ್ದಾಣ!
* ಕಮಲಾಪತಿ ರೈಲು ನಿಲ್ದಾಣ ಮೋದಿಯಿಂದ ಉದ್ಘಾಟನೆ'
* ಇಂದು ದೇಶದ ಮೊದಲ ವಿಶ್ವದರ್ಜೆ ರೈಲು ನಿಲ್ದಾಣ ಲೋಕಾರ್ಪಣೆ
-* ಮ.ಪ್ರ.ದ ಹಲವು ಅಭಿವೃದ್ಧಿ ಯೋಜನೆಗಳಿಗೂ ಚಾಲನೆ
ಭೋಪಾಲ್(ನ.15): ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ (Bhopal, Madhya Pradesh) ಮರು ಅಭಿವೃದ್ಧಿಪಡಿಸಲಾಗಿರುವ ದೇಶದ ಮೊದಲ ವಿಶ್ವದರ್ಜೆ ರಾಣಿ ಕಮಲಾಪತಿ ರೈಲ್ವೆ ನಿಲ್ದಾಣವನ್ನು (Rani Kamalapati Station) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸೋಮವಾರ ಲೋಕಾರ್ಪಣೆಗೊಳಿಸಲಿದ್ದಾರೆ. ಈ ರೈಲ್ವೆ ನಿಲ್ದಾಣವನ್ನು ಹಬೀಬ್ಗಂಜ್ ಎಂಬ ಹೆಸರಿನಿಂದ ಗುರುತಿಸಲಾಗಿತ್ತು. ಅಲ್ಲದೆ ಈ ವೇಳೆ ಮೋದಿ ಅವರು ಉಜ್ಜೈನಿ ಮತ್ತು ಇಂದೋರ್ ನಡುವೆ ಎರಡು ಮೆಮು ರೈಲು ಸೇವೆಗೂ ಚಾಲನೆ ನೀಡಲಿದ್ದಾರೆ.
ಕಳೆದ 3 ವರ್ಷಗಳ ಅವಧಿಯಲ್ಲಿ 450 ಕೋಟಿ ರು. ಮೊತ್ತದಿಂದ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದೊಂದಿಗೆ ಆಧುನಿಕ ವಿಮಾನ ನಿಲ್ದಾಣಗಳಲ್ಲಿ ಲಭ್ಯವಿರುವ ಸೌಲಭ್ಯಗಳೊಂದಿಗೆ ಈ ರೈಲ್ವೆ ನಿಲ್ದಾಣವನ್ನು ಮರು ಅಭಿವೃದ್ಧಿಪಡಿಸಲಾಗಿದೆ. ಈ ನಿಲ್ದಾಣವನ್ನು ಅಂಗವಿಕಲರಿಗೆ ಅನುಕೂಲವಾಗುವಂತೆ ಮತ್ತು ಹಸಿರು ಕಟ್ಟಡವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಐಎಸ್ಒ-9001 ಪ್ರಮಾಣೀಕೃತ ಹೊಂದಿದ ದೇಶದ ಮೊದಲ ರೈಲ್ವೆ ನಿಲ್ದಾಣವಾಗಿದೆ.
ವಿವಿಧ ಕಾರ್ಯಕ್ರಮಗಳ ಉದ್ಘಾಟನೆ:
ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು, ಸ್ವಾತಂತ್ರ್ಯವೀರ ಬಿರ್ಸಾ ಮುಂಡಾ ಸ್ಮರಣಾರ್ಥ ಬುಡಕಟ್ಟು ಸಮುದಾಯಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
‘ರೇಷನ್ ಆಪ್ಕೇ ಗ್ರಾಮ್’(ನಿಮ್ಮ ಗ್ರಾಮದಲ್ಲೇ ಪಡಿತರ), ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 50 ಏಕಲವ್ಯ ಮಾದರಿಯ ವಸತಿ ಶಾಲೆಗಳ ನಿರ್ಮಾಣಕ್ಕೆ ಶಂಕು ಸ್ಥಾಪನೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಲ್ಲಿ ಮೋದಿ ಭಾಗವಹಿಸಲಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿರುವ ಸೌಲಭ್ಯಗಳು
- ಶಾಪಿಂಗ್ ಕಾಂಪ್ಲೆಕ್ಸ್, ಆಸ್ಪತ್ರೆ ಮತ್ತು ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ
- ಅತ್ಯಾಧುನಿಕ ಶೌಚಾಲಯಗಳು, ಉತ್ತಮ ಗುಣಮಟ್ಟದ ಹೋಟೆಲ್ಗಳು
- ವಸ್ತು ಸಂಗ್ರಹಾಲಯ, ಗೇಮಿಂಗ್ ವಲಯ ಸೇರಿ ಇನ್ನಿತರ ಸೌಕರ್ಯಗಳು
- ಅಂಗವಿಕಲ ಸ್ನೇಹಿ ಸೌಲಭ್ಯಗಳು
- ಪರಿಸರ ಸ್ನೇಹಿಯಾಗಿ ರೈಲ್ವೆ ನಿಲ್ದಾಣದ ಆವರಣ ಅಭಿವೃದ್ಧಿ
- ಹಲವೆಡೆ ಕುಡಿಯುವ ನೀರಿನ ಬೂತ್ಗಳ ಸೌಕರ್ಯ
- ಮಳೆ ನೀರಿನ ಕೊಯ್ಲು, ಸೌರಶಕ್ತಿ ಮುಖಾಂತರ ವಿದ್ಯುತ್ ಉತ್ಪಾದನೆ ಸೇರಿ ಇನ್ನಿತರ ಸೌಕರ್ಯಗಳು
ಹಬೀಬ್ಗಂಜ್ ನಿಲ್ದಾಣ ಇದೀಗ ರಾಣಿಕಮಲಾಪತಿ ರೈಲು ನಿಲ್ದಾಣ
18ನೇ ಶತಮಾನದ ಗೊಂಡಾದ ರಾಣಿ, ಧೈರ್ಯಶಾಲಿ ಹಾಗೂ ಹೋರಾಟಗಾರ್ತಿ ರಾಣಿ ಕಮಲಾಪತಿ (Queen Kamalapati of the Gond kingdom) ಹೆಸರನ್ನು ನವೀಕರಿಸಿದ ರೈಲು ನಿಲ್ದಾಣಕ್ಕೆ ಇಡಲಾಗಿದೆ. ಇದಕ್ಕೂ ಮೊದಲು ಹಬೀಬ್ಗಂಜ್ ರೈಲು ನಿಲ್ದಾಣವಾಗಿತ್ತು. ಸ್ಥಳೀಯ ಇತಿಹಾಸಕ್ಕೆ ಅನುಗುಣವಾಗಿ ಇದೀಗ ಹೆಸರು ಬದಲಾಯಿಸಲಾಗಿದೆ.
ಸ್ವಾತಂತ್ರ್ಯ ಹೋರಾಟಗಾರ ಹಾಗೂ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರ ಸ್ಮರಣಾರ್ಥ ನವೆಂಬರ್ 15 ರಂದು ಕೇಂದ್ರ ಸರ್ಕಾರ ಜನಜಾತಿಯ ಗೌರವ ದಿವಸ್ ಎಂದು ಆಚರಿಸುತ್ತಿದೆ. ಇದರ ಅಂಗವಾಗಿ ಹಬೀಬ್ಗಂಜ್ ರೈಲು ನಿಲ್ದಾಣದ ಹೆಸರು ಮರುನಾಮಕರಣ ಮಾಡಲಾಗಿದೆ. ರೈಲು ನಿಲ್ದಾಣದ ಹಬೀಬ್ಗಂಜ್ ಹೆಸರು ಬದಲಾವಣೆಗೆ ಅಪಸ್ವರಗಳು ಕೇಳಿಬಂದಿದೆ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ.