ರಾಮನಗರ ಜಿಲ್ಲೆಯ ಹೆಸರನ್ನು ತೆಗೆದು ಬೆಂಗಳೂರು ದಕ್ಷಿಣ ಎಂದು ಮಾಡುವ ಬಗ್ಗೆ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಕೇಂದ್ರ ಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು.

ಬೆಂಗಳೂರು/ನವದೆಹಲಿ (ಜು.27): ‘ರಾಮನಗರ ಜಿಲ್ಲೆಯಿಂದ ರಾಮನ ಹೆಸರು ತೆಗೆಯಲು ಆಗಲ್ಲ. ಈ ಭೂಮಿ ಇರುವ ತನಕ ರಾಮನಗರ ಹೆಸರನ್ನು ತೆಗೆಯಲು ಸಾಧ್ಯವಿಲ್ಲ. ಒಂದು ವೇಳೆ ತಮ್ಮ ಸ್ವಾರ್ಥಕ್ಕಾಗಿ ಹೆಸರು ಬದಲಾವಣೆ ಮಾಡಿದರೆ, ಆ ಕೃತ್ಯ ಎಸಗಿದವರು ಸರ್ವನಾಶ ಆಗುತ್ತಾರೆ’ ಎಂದು ಕೇಂದ್ರ ಭಾರಿ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಂಬರುವ 2028 ಅಥವಾ ಅದರೊಳಗಾಗಿಯೇ ಆ ಜಿಲ್ಲೆಗೆ ರಾಮನಗರ(Ramanagara) ಹೆಸರು ಮತ್ತೆ ಬರುತ್ತದೆ. ಅದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ ಎಂದೂ ಅವರು ತೀಕ್ಷ್ಣವಾಗಿ ಹೇಳಿದ್ದಾರೆ. ಶುಕ್ರವಾರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಮನಗರ ಜಿಲ್ಲೆಯ ಹೆಸರನ್ನು ತೆಗೆದು ಬೆಂಗಳೂರು ದಕ್ಷಿಣ(Bengaluru south) ಎಂದು ಮಾಡುವ ಬಗ್ಗೆ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಕಟುವಾಗಿ ಟೀಕಿಸಿದರು.

ರಾಮನಗರ ಹೆಸರು ಬದಲಾವಣೆಯಿಂದ ಅಭಿವೃದ್ಧಿಯಾಗಲಿದೆ: ಶಾಸಕ ಇಕ್ಬಾಲ್ ಹುಸೇನ್

ಯಾವುದೇ ಕಾರಣಕ್ಕೂ ರಾಮನಗರದಿಂದ ರಾಮನ ಹೆಸರನ್ನು ಬೇರ್ಪಡಿಸಲು ಆಗಲ್ಲ. ಜಿಲ್ಲೆ ರಚನೆ ಮಾಡಿ ರಾಮನಗರ ಎಂದು ಹೆಸರಿಡುವಾಗ, ವಿಧಾನಸಭಾ ಕ್ಷೇತ್ರಕ್ಕೆ ರಾಮನಗರ ಎಂದು ಹೆಸರು ಇಡುವಾಗ ಯಾವುದೇ ಮಾತು ಆಡಲೇ ಇಲ್ಲ. ತಕರಾರು ಮಾಡಲಿಲ್ಲ. ಈಗ ಸ್ವಾರ್ಥಕ್ಕಾಗಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(DK Shivakumar) ವಿರುದ್ಧ ಹರಿಹಾಯ್ದರು.ಈ ಸರ್ಕಾರ ಮೊದಲು ಕಾನೂನು ವ್ಯವಸ್ಥೆ ಸರಿ ಮಾಡಲಿ. ಹೆಸರು ಬದಲಾವಣೆ ಮಾಡಲು ಹೊರಟವರ ಪಕ್ಷದ ಎಂಎಲ್‌ಸಿ ಇರುವ ಕಡೆ ದಲಿತನ ಕೈ ಕತ್ತರಿಸಿದ್ದಾರೆ. ರಾಮನಗರ ಎಷ್ಟು ಅಭಿವೃದ್ಧಿ ಆಗಿದೆ ಅನ್ನುವುದನ್ನು ನೋಡಲಿ. ಹೆಸರು ಬದಲಾವಣೆಯಿಂದ ಭೂಮಿಗೆ ಬೆಲೆ ಬರಲ್ಲ. ಹೆಸರು ಬದಲಾಯಿಸಿದರೆ ಅವರ ಪತನ ಶುರುವಾಯಿತು ಎಂದೇ ಲೆಕ್ಕ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.