ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸುವ ರಾಜ್ಯಸಭಾ ಸದಸ್ಯರಿಗೆ ಮಸೂದೆಗಳಿಗೆ ಸಂಬಂಧಿಸಿದ ಮತದಾನ ಪ್ರಕ್ರಿಯೆ ವೇಳೆ ಮತ ಹಾಕುವುದರಿಂದ ನಿರ್ಬಂಧ ಹೇರಬೇಕು ಎಂದು ಸದನದ ನಿಯಮಗಳ ಪರಿಶೀಲನೆಗೆ ನೇಮಕಗೊಂಡಿದ್ದ ಸಮಿತಿಯೊಂದು ಶಿಫಾರಸು ಮಾಡಿದೆ.

ನವದೆಹಲಿ (ಫೆ. 21): ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸುವ ರಾಜ್ಯಸಭಾ ಸದಸ್ಯರಿಗೆ ಮಸೂದೆಗಳಿಗೆ ಸಂಬಂಧಿಸಿದ ಮತದಾನ ಪ್ರಕ್ರಿಯೆ ವೇಳೆ ಮತ ಹಾಕುವುದರಿಂದ ನಿರ್ಬಂಧ ಹೇರಬೇಕು ಎಂದು ಸದನದ ನಿಯಮಗಳ ಪರಿಶೀಲನೆಗೆ ನೇಮಕಗೊಂಡಿದ್ದ ಸಮಿತಿಯೊಂದು ಶಿಫಾರಸು ಮಾಡಿದೆ.

Add Asianetnews Kannada as a Preferred SourcegooglePreferred

ಇದೇ ವೇಳೆ, ರಾಜ್ಯಸಭೆಯ ನಿಯಮ 267 ರಡಿ ಕೇವಲ ಅರ್ಧ ತಾಸು ಚರ್ಚೆಗಷ್ಟೇ ಅವಕಾಶ ಕಲ್ಪಿಸಬೇಕು ಎಂದೂ ಸಲಹೆ ಮಾಡಿದೆ. ನಿಯಮ 267ರಡಿ ಎಲ್ಲ ಕಲಾಪಗಳನ್ನೂ ಬದಿಗೊತ್ತಿ, ನಿರ್ದಿಷ್ಟ ವಿಷಯಗಳ ಕುರಿತು ಚರ್ಚೆಗೆ ಅವಕಾಶವಿದೆ. ಹೀಗಾಗಿ ಈ ನಿಯಮ ರಾಜ್ಯಸಭೆಯ ಪ್ರತಿಪಕ್ಷಗಳಿಗೆ ಅಚ್ಚುಮೆಚ್ಚಿನದ್ದಾಗಿದೆ.

‘100 ಕೋಟಿ ಜನರ ಮಣಿಸಲು 15 ಕೋಟಿ ಮುಸ್ಲಿಮರು ಸಾಕು’

ಕಲಾಪದ ಸಂದರ್ಭ ಸದಸ್ಯರು ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರೆ ಅವರನ್ನು ಅಮಾನತುಗೊಳಿಸುವ ಅಧಿಕಾರ ಲೋಕಸಭೆಯಲ್ಲಿ ಸ್ಪೀಕರ್‌ ಅವರಿಗೆ ಇದೆ. ಆದರೆ ರಾಜ್ಯಸಭೆಯಲ್ಲಿ ಸಭಾಪತಿಗಳಿಗೆ ಆ ಅಧಿಕಾರ ಇಲ್ಲ. ಹೀಗಾಗಿ ನಿಯಮ ತಿದ್ದುಪಡಿಗಾಗಿ ರಾಜ್ಯಸಭೆಯ ಮಾಜಿ ಮಹಾಪ್ರಧಾನ ಕಾರ್ಯದರ್ಶಿ ವಿ.ಕೆ. ಅಗ್ನಿಹೋತ್ರಿ, ಕಾನೂನು ಸಚಿವಾಲಯದ ಮಾಜಿ ಹೆಚ್ಚುವರಿ ಕಾರ್ಯದರ್ಶಿ ದಿನೇಶ್‌ ಭಾರದ್ವಾಜ್‌ ಅವರ ಸಮಿತಿಯನ್ನು ಸಭಾಪತಿ ವೆಂಕಯ್ಯ ನಾಯ್ಡು ರಚಿಸಿದ್ದರು. 51 ಸಭೆಗಳನ್ನು ನಡೆಸಿ ಆ ಸಮಿತಿ ಕೆಲವೊಂದು ಶಿಫಾರಸುಗಳನ್ನು ಮಾಡಿದೆ.

ಆದರೆ ಸದನದ ಬಾವಿಗೆ ಇಳಿದವರ ಮತ ಹಕ್ಕು ಕಸಿಯುವುದು ಪ್ರಜಾಸತ್ತೆ ವಿರೋಧಿ, ಅಪ್ರಾಯೋಗಿಕ ಎಂದು ಮಾಜಿ ಸಂಸದೀಯ ಕಾರ್ಯದರ್ಶಿ ಅಫ್ಜಲ್‌ ಅಮಾನುಲ್ಲಾ ತಿಳಿಸಿದ್ದರೆ, ಈ ವಿಷಯ ಚರ್ಚೆಗೆ ಬಂದಾಗ ನಿಲುವು ತೆಗೆದುಕೊಳ್ಳುತ್ತೇವೆ ಎಂದು ಕಾಂಗ್ರೆಸ್ಸೇತರ ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.