ಜೈಲಿಂದ ಬಿಡುಗಡೆಯಾದ ರಾಜೀವ್ ಗಾಂಧಿ ಹಂತಕರಿಗೆ ಹೊಸ ಟೆನ್ಶನ್!
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ಬಿಡುಗಡೆ ಮಾಡಿದೆ. ನಳಿನಿ ಶ್ರೀಹರನ್ ಸೇರಿ 6 ಹಂತಕರು ಬಂಧ ಮುಕ್ತಗೊಂಡಿದ್ದಾರೆ. ಬರೋಬ್ಬರಿ 31 ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆಯಾದ ಸಂಭ್ರಮದಲ್ಲಿದ್ದ ರಾಜೀವ್ ಗಾಂಧಿ ಹಂತಕರಿಗೆ ಇದೀಗ ತಲೆನೋವು ಶುರುವಾಗಿದೆ.
ನವದೆಹಲಿ(ನ.21): ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರು ಈಗಾಗಲೇ ಜೈಲಿನಿಂದ ಬಿಡುಗಡೆಯಾಗಿ ಮನೆ ಸೇರಿಕೊಂಡಿದ್ದಾರೆ. 31 ವರ್ಷಗಳ ಬಳಿಕ ಜೈಲಿನಿಂದ ಹೊರಬಂದ ನಳಿನಿ ಶ್ರೀಹರನ್ ಸೇರಿ 6 ಹಂತಕರು ಸಂಭ್ರಮ ಆಚರಿಸಿದ್ದಾರೆ. ಇತ್ತ ತಮಿಳುನಾಡಿನ ಬಹುತೇಕ ಕಡೆಗಳಲ್ಲಿ ಇವರ ಬಿಡುಗಡೆಯನ್ನು ಸಂಭ್ರಮದಿಂದ ಸಿಹಿ ಹಂಚಿ ಆಚರಿಸಲಾಗಿದೆ. ಮನೆ ಸೇರಿಕೊಂಡಿರುವ ರಾಜೀವ್ ಗಾಂಧಿ ಹಂತಕರಿಗೆ ಇದೀಗ ಹೊಸ ತಲೆನೋವು ಶುರುವಾಗಿದೆ. ಕೇಂದ್ರ ಸರ್ಕಾರದ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ. ಮೂರಿಂದ ನಾಲ್ಕು ದಿನದಲ್ಲಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ. ಈಗಾಗಲೇ ಕೇಂದ್ರ ಸರ್ಕಾರ ಆದೇಶ ಪುನರ್ ಪರಿಶೀಲಿಸಲು ಈಗಾಗಲೇ ಮನವಿ ಸಲ್ಲಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಸುಪ್ರೀಂ ಕೋರ್ಟ್ ಆದೇಶ ಒಪ್ಪಲು ಸಾಧ್ಯವಿಲ್ಲ ಎಂದಿದೆ. ರಾಜೀವ್ ಹಂತಕರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಹೊರತು ಅವರನ್ನು ಆರೋಪದಿಂದ ಮುಕ್ತಗೊಳಿಸಲಾಗಿಲ್ಲ. ಹೀಗಾಗಿ ರಾಜೀವ್ ಹಂತರನ್ನು ಹೀರೋಗಳಂತೆ ಬಿಂಬಿಸುವುವುದು ತಪ್ಪು ಎಂದು ಕಾಂಗ್ರೆಸ್ ಹೇಳಿದೆ. ಈ ಮೂಲಕ ತಮಿಳುನಾಡು ಸರ್ಕಾರ ಹಾಗೂ ಜನತೆಗೆ ಪರೋಕ್ಷವಾಗಿ ಸೂಚನೆ ನೀಡಿದೆ.
ರಾಜೀವ್ ಹಂತಕರ ಬಿಡುಗಡೆ ಆದೇಶ ಪುನರ್ ಪರಿಶೀಲಿಸಲು ಸುಪ್ರೀಂಗೆ ಕೇಂದ್ರ ಸರ್ಕಾರ ಮನವಿ!
ನವೆಂಬರ್ 11 ರಂದು ಸುಪ್ರೀಂ ಕೋರ್ಟ್ ರಾಜೀವ್ ಗಾಂಧಿ ಹಂತರನ್ನು ಬಿಡುಗಡೆ ಮಾಡಲು ಆದೇಶ ನೀಡಿತ್ತು. ನಳಿನಿ ಶ್ರೀಹರನ್, ಆರ್ಪಿ ರವಿಚಂದ್ರನ್ ಸೇರಿದಂತೆ 6 ಹಂತಕರು ಜೈಲಿನಿಂದ ಬಿಡುಗಡೆಗೊಳಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಮೇ 18 ರಂದು ರಾಜೀವ್ ಹಂತಕ ಎಜಿ ಪೆರಾರಿವಲನ್ ಬಿಡುಗಡೆ ಮಾಡಲು ಆದೇಶಿಸಿತ್ತು. ಈ ಆದೇಶದ ಕೆಲ ತಿಂಗಳಲ್ಲಿ ಉಳಿದ 6 ಮಂದಿಯನ್ನು ಬಿಡುಗಡೆಗೆ ಕೋರ್ಟ್ ಆದೇಶಿಸಿತ್ತು. ಸುಪ್ರೀಂ ಕೋರ್ಟ್ ಈ ಆದೇಶವನ್ನು ಈಗಾಗಲೇ ಕೇಂದ್ರ ಸರ್ಕಾರ ಪುನರ್ ಪರಿಶೀಲಿಸುವಂತೆ ಮನವಿ ಮಾಡಿದೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 6 ಹಂತಕರ ಅವಧಿಪೂರ್ವ ಬಿಡುಗಡೆಗೆ ಮಾಡಲಾದ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಚ್ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ. ‘ಕೇಂದ್ರ ಸರ್ಕಾರದ ಅಭಿಪ್ರಾಯಕ್ಕೆ ಸೂಕ್ತ ಅವಕಾಶ ನೀಡದೇ ಮಾಡಲಾದ ಬಿಡುಗಡೆ ಇದಾಗಿದ್ದು, ತೀವ್ರ ದುಷ್ಪರಿಣಾಮ ಬೀರುವಂಥದ್ದು. ಆದೇಶವನ್ನು ಮರುಪರಿಶೀಲನೆ ಮಾಡಬೇಕು’ ಎಂದು ಕೋರಿದೆ.
ಪತಿಯನ್ನು ಯುಕೆಗೆ ಕಳಿಸುವಂತೆ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡುತ್ತೇನೆ: ನಳಿನಿ ಶ್ರೀಹರನ್
ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದ ಹಂತಕರಾದ ನಳಿನಿ, ಮುರುಗನ್, ಶಾಂತನ್, ಜಯಕುಮಾರ್, ರಾಬರ್ಚ್ ಪಯಸ್ ಹಾಗೂ ರವಿಚಂದ್ರನ್ ಅವರನ್ನು ಅವಧಿಪೂರ್ವ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟು, ನ.11ರಂದು ಆದೇಶಿಸಿತ್ತು. ‘ಈ ಮುನ್ನ ಬಿಡುಗಡೆ ಆಗಿದ್ದ 7ನೇ ದೋಷಿ ಪೆರಾರಿವಾಲನ್ನ ಉದಾಹರಣೆ ನೀಡಿದ್ದ ಕೋರ್ಚ್, ಬಾಕಿ 6 ಹಂತಕರು ಜೈಲಿನಲ್ಲಿ ಸನ್ನಡತೆ ತೋರಿದ್ದಾರೆ. ಹೀಗಾಗಿ ಬಿಡುಗಡೆಗೆ ಅರ್ಹರು ಎಂದು ಹೇಳಿತ್ತು.
ಈ ಆದೇಶವನ್ನು ತಮಿಳುನಾಡಿನ ಪಕ್ಷಗಳು ಸ್ವಾಗತಿಸಿದ್ದರೂ, ಕಾಂಗ್ರೆಸ್ ಪಕ್ಷ ತೀವ್ರವಾಗಿ ವಿರೋಧಿಸಿತ್ತು. ಆದರೆ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಮಾತ್ರ ತುಟಿ ಪಿಟಕ್ಕೆಂದಿರಲಿಲ್ಲ. ಈಗ ಆದೇಶದ 1 ವಾರ ಬಳಿಕ ಕೇಂದ್ರವು ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ.