ತನ್ನದೇ ಸರ್ಕಾರದ ವಿರುದ್ಧ ಸಚಿನ್ ಪೈಲಟ್ 5 ದಿನಗಳ ಜನ ಸಂಘರ್ಷ ಯಾತ್ರೆ
ರಾಜಸ್ಥಾನದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಗುರುವಾರದಿಂದ 5 ದಿನಗಳ ಜನ ಸಂಘರ್ಷ ಯಾತ್ರೆ ಆರಂಭಿಸಿದ್ದಾರೆ.
ಜೈಪುರ: ರಾಜಸ್ಥಾನದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಗುರುವಾರದಿಂದ 5 ದಿನಗಳ ಜನ ಸಂಘರ್ಷ ಯಾತ್ರೆ ಆರಂಭಿಸಿದ್ದಾರೆ. ಅಜ್ಮೇರ್ನಿಂದ ಜೈಪುರದವರೆಗೆ 5 ದಿನಗಳ ಕಾಲ ನಡೆಯುವ ಯಾತ್ರೆಯಲ್ಲಿ ಸಚಿನ್ 125 ಕಿ.ಮೀ ಕ್ರಮಿಸಲಿದ್ದು, ಭ್ರಷ್ಟಾಚಾರದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ನೇತೃತ್ವದ ತಮ್ಮದೇ ಪಕ್ಷದ ಸರ್ಕಾರ ಮತ್ತು ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುವ ತಂತ್ರ ಆರಂಭಿಸಿದ್ದಾರೆ. ಭ್ರಷ್ಟಾಚಾರದ (Corruption) ವಿರುದ್ಧ ಗೆಹ್ಲೋಟ್ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಳೆದ ತಿಂಗಳು ಸಚಿನ್ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಅದರ ಬೆನ್ನಲ್ಲೇ ಇದೀಗ ಯಾತ್ರೆ ಕೈಗೊಂಡಿದ್ದಾರೆ.
ಅಜ್ಮೇರ್ನಲ್ಲಿ (Ajmeer) ಯಾತ್ರೆಗೆ ಚಾಲನೆ ನೀಡುವ ಮುನ್ನ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ ಸಚಿನ್, ವಿವಿಧ ಸರ್ಕಾರಿ ಹುದ್ದೆಗಳಿಗೆ ನಡೆದ ನೇಮಕದ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಪ್ರಶ್ನಿಸಿದರು. ಜೊತೆಗೆ ಇದೇ ಹಗರಣದಲ್ಲಿ ಸಿಕ್ಕಿಬಿದ್ದ ಲೋಕಸೇವಾ ಆಯೋಗದ ಸದಸ್ಯರ ಆಸ್ತಿಗಳ ಮೇಲೆ ಏಕೆ ಬುಲ್ಡೋಜರ್ ಹರಿಸಲಿಲ್ಲ ಎಂದು ಕಿಡಿಕಾರಿದರು. ಇದೇ ವೇಳೆ ಈ ಯಾತ್ರೆ ಯಾರ ವಿರುದ್ಧವೂ ಅಲ್ಲ ಎಂದ ಪೈಲಟ್, ಯುವಸಮೂಹವು ರಾಜ್ಯ ಮತ್ತು ದೇಶದ ಭವಿಷ್ಯ. ಹೀಗಾಗಿ ಇಂಥ ಯುವಸಮಹೂಹದ ಹಿತಾಸಕ್ತಿಯನ್ನು ಕಾಪಾಡದೇ ಭ್ರಷ್ಟರನ್ನು ರಕ್ಷಣೆ ಮಾಡುತ್ತಿರುವುದರ ವಿರುದ್ಧ ಈ ಹೋರಾಟ ಎಂದರು.
ರಾಜಸ್ಥಾನ ಸಿಎಂಗೆ ಮುಖಭಂಗ: ಸಚಿನ್ ಪೈಲಟ್ ಪರ ಬ್ಯಾಟ್ ಬೀಸಿದ ಗೆಹ್ಲೋಟ್ ಸರ್ಕಾರದ ಸಚಿವ..!
2020ರಲ್ಲಿ ತಮ್ಮದೇ ಸರ್ಕಾರದ ವಿರುದ್ಧ 20 ಶಾಸಕರೊಂದಿಗೆ ಬಂಡೆದಿದ್ದ ಸಚಿನ್ ಆ ವೇಳೆ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಕಳೆದುಕೊಂಡ ಬಳಿಕ ಪದೇ ಪದೇ ಸಿಎಂ ಗೆಹ್ಲೋಟ್ ವಿರುದ್ಧ ಬಹಿರಂಗ ಸಮರ ಸಾರುತ್ತಲೇ ಬಂದಿದ್ದಾರೆ. ಜೊತೆಗೆ ಹಿಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ವಸುಂಧರಾ ರಾಜೇ (Vasundhara raje) ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಗೆಹ್ಲೋಟ್ ತನಿಖೆ ನಡೆಸಲು ಮುಂದಾಗುತ್ತಿಲ್ಲ ಎಂದು ಕಿಡಿಕಾರಿದ್ದರು.
Rajasthan Politicsನಲ್ಲಿ ಗೆಹ್ಲೋಟ್ ಶಕ್ತಿ ಎಂಥದ್ದು? ರಬ್ಬರ್ಸ್ಟಾಂಪ್ ಅಂದ್ಕೊಂಡ್ರೆ ರೆಬೆಲ್ಸ್ಟಾರ್ ಆದ್ರಲ್ಲಾ?