ಮಗಳನ್ನು ಕಾಪಾಡಿ ಎನ್ನುತ್ತಾ ಅಪರಾಧಿಗಳನ್ನು ರಕ್ಷಿಸುತ್ತಿದ್ದಾರೆ: ಮೋದಿ ವಿರುದ್ಧ ಛಾಟಿ!
ಉತ್ತರ ಪ್ರದೇಶದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ| ಹತ್ರಾಸ್ ಪ್ರಕರಣದ ಬಳಿಕ ಈಗ ಬಲಿಯಾ ಗುಂಡಿನ ದಾಳಿ ಪ್ರಕರಣದಲ್ಲೂ ವೈಫಲ್ಯ| ಸರ್ಕಾರದ ವಿರುದ್ಧ ಮುಗಿಬಿದ್ದ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ
ಲಕ್ನೋ(ಅ.18): ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಪದೇ ಪದೇ ರಾಜ್ಯದಲ್ಲಿರುವ ಕಾನೂನು ವ್ಯವಸ್ಥೆ ಸಂಬಂಧ ಟೀಕೆಗೆ ಗುರಿಯಾಗುತ್ತಿದೆ. ಹತ್ರಾಸ್ ಪ್ರಕರಣದ ಬಳಿಕ ಈಗ ಬಲಿಯಾ ಗುಂಡಿನ ದಾಳಿ ಸಂಬಂಧ ಪೊಲೀಸರ ವೈಫಲ್ಯ ಹಾಗೂ ಆಡಳಿತಾಧಿಕಾರಿಗಳ ವರ್ತನೆ ಸಂಬಂಧ ಸವಾಲೆಸೆಯಲಾಗುತ್ತಿದೆ.
ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತೊಮ್ಮೆ ಉತ್ತರ ಪ್ರದೇಶದ ಕಾನೂನು ವ್ಯವಸ್ಥೆ ವಿರುದ್ಧ ಕಿಡಿ ಕಾರಿದ್ದಾರೆ. ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಸುದ್ದಿಯೊಂದನ್ನು ಶೇರ್ ಮಾಡುತ್ತಾ ಉತ್ತರ ಪ್ರದೇಶ ಸರ್ಕಾರದ ಬಳಿ ಏನು ನಡೆಯುತ್ತಿದೆ ಎಂದು ಕೇಳಿದ್ದಾರೆ.
ಏನಿದು ಪ್ರಕರಣ?
ಉತ್ತರ ಪ್ರದೇಶದ ಲಖೀಂಪುರ ಖೀರೀ ಜಿಲ್ಲೆಯ ಮೊಹಮ್ಮದಿ ಖೋತ್ವಾಲಿ ಪ್ರದೇಶದಲ್ಲಿ ನಡೆದ ಪೀಡಿಸಿದ ಘಟನೆ ಸಂಬಂಧ ಬಿಜೆಪಿ ಶಾಸಕ ಲೋಕೇಂದ್ರ ಬಹಾದುರ್ ಠಾಣೆಯಲ್ಲಿ ಬಂಧಿಯಾಗಿರುವ ಆರೋಪಿ ಯುವಕನನ್ನು ಬಿಡಿಸಿ ಕರೆದುಕೊಂಡು ಹೋಗಿದ್ದಾರೆ. ಅವರು ತಮ್ಮ ಸಮರ್ಥಕರೊಂದಿಗೆ ಠಾಣೆಗೆ ತೆರಳಿದ್ದರು. ಲಭ್ಯವಾದ ಮಾಹಿತಿ ಅನ್ವಯ ಬಿಜೆಪಿ ಶಾಸಕ ಠಾಣೆಯಲ್ಲಿ ಗಲಾಟೆಯನ್ನೂ ಮಾಡಿದ್ದಾರೆ. ಪೊಲೀಸರು ರೇಗಿಸಿದ್ದ ಆರೋಪದಡಿ ಯಾವ ಆರೋಪಿಯನ್ನು ಬಂಧಿಸಿದ್ದರೋ ಆತ ಬಿಜೆಪಿ ಕಾರ್ಯಕರ್ತನೆನ್ನಲಾಗಿದ್ದು, ಆತನನ್ನೇ ಶಾಸಕ ಬಿಡಿಸಿಕೊಂಡು ಹೋಗಿದ್ದಾರೆನ್ನಲಾಗಿದೆ.