ಕಾಂಗ್ರೆಸ್ಗೆ ಮುಖಭಂಗ, ರಾಹುಲ್ ಗಾಂಧಿ ಕಚೇರಿ ಧ್ವಂಸ ಪ್ರಕರಣದಲ್ಲಿ ತಮ್ಮದೇ ಪಕ್ಷದ ಕಾರ್ಯಕರ್ತರ ಬಂಧನ!
ವಯನಾಡು ಸಂಸದ ರಾಹುಲ್ ಗಾಂಧಿ ಕಚೇರಿಯಲ್ಲಿ ಪೀಠೋಪಕರಣ ಧ್ವಂಸ ಹಾಗೂ ಮಹಾತ್ಮ ಗಾಂಧಿ ಫೋಟೋ ಧ್ವಂಸ ಪ್ರಕರಣದಲ್ಲಿ ಇದೀಗ ಸ್ವತಃ ರಾಹುಲ್ ಗಾಂಧಿ ಪಿಎ ಸೇರಿ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಇದು ಎಸ್ಎಫ್ಐ ಕೃತ್ಯ ಎಂದಿದ್ದ ಕಾಂಗ್ರೆಸ್ಗೆ ಇದೀಗ ಮುಖಭಂಗವಾಗಿದೆ.
ವಯನಾಡು(ಆ.19): ಓರ್ವ ರಾಹುಲ್ ಗಾಂಧಿ ಪಿಎ, ಇನ್ನೂ ಮೂವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ಇದಕ್ಕೆ ಕಾರಣ ಕಾಂಗ್ರೆಸ್ ಕಚೇರಿ ಧ್ವಂಸ ಪ್ರಕರಣ. ವಯನಾಡು ಸಂಸದ ರಾಹುಲ್ ಗಾಂಧಿ ಕಚೇರಿಯನ್ನು ಧ್ವಂಸ ಮಾಡಿ, ಕಚೇರಿಯಲ್ಲಿದ್ದ ಮಹಾತ್ಮಾ ಗಾಂಧಿ ಫೋಟೋವನ್ನು ಪುಡಿ ಮಾಡಿದ್ದರು. ಇದು ಎಸ್ಎಫ್ಐ ಕೃತ್ಯ ಎಂದಿತ್ತು. ಘಟನೆ ನಡೆದ ಬೆನ್ನಲ್ಲೇ ಎಸ್ಎಫ್ಐ ಮೇಲೆ ಗೂಬೆ ಕೂರಿಸಿದ್ದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಇದೀಗ ತೀವ್ರ ಹಿನ್ನಡೆಯಾಗಿದೆ. ಕಚೇರಿ ಧ್ವಂಸ ಮಾಡಿದ ಪ್ರಕರಣದಲ್ಲಿ ತಮ್ಮದೇ ಪಕ್ಷದ ಕಾರ್ಯಕರ್ಕರು, ವಯನಾಡು ಸಂಸದ ರಾಹುಲ್ ಗಾಂಧಿ ಪಿಎ ಬಂಧಿಸಲಾಗಿದೆ.
ಈ ನಡೆ ಇದೀಗ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ಗೆ ಹಿನ್ನಡೆ ತಂದಿದೆ. ಈ ಕುರಿತು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಟ್ವೀಟ್ ಮೂಲಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ಸುಳ್ಳುಗಳು ಬಟಾಬಯಲಾಗಿದೆ ಎಂದಿದ್ದಾರೆ.
ಜೂನ್ ತಿಂಗಳಲ್ಲಿ ನಡೆದಿದ್ದ ಕೃತ್ಯ
ಕೇರಳದ ವಯನಾಡು ಕ್ಷೇತ್ರದ ಸಂಸದ ರಾಹುಲ್ ಗಾಂಧಿ ಅವರ ಕಚೇರಿಯನ್ನು ಧ್ವಂಸಗೊಳಿಸಿದ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಇದು ಎಸ್ಎಫ್ಐ ಕೃತ್ಯ. ಇದಕ್ಕೆ ಸಿಪಿಎಂ ಕಾರ್ಯಕರ್ತರು ಸಾಥ್ ನೀಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಇತ್ತ ಪೊಲೀಸರು ಸಿಪಿಎಂ ಯುವ ವೇದಿಕೆಯ ಕಾರ್ಯಕರ್ತರು ಸೇರಿದಂತೆ 8 ಮಂದಿಯನ್ನು ಬಂಧಿಸಿದ್ದರು. ಈ ದಾಳಿಯನ್ನು ಕಾಂಗ್ರೆಸ್ ನಾಯಕರು ಕಟುವಾಗಿ ಟೀಕಿಸಿದ್ದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ವಯ್ನಾಡ್ ಕಚೇರಿ ಧ್ವಂಸ
ಕೇರಳದ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಬಫರ್ ಜೋನ್ ನಿರ್ಮಾಣ ವಿಚಾರದಲ್ಲಿ ಸಂಸದ ರಾಹುಲ್ ಗಾಂಧಿ ಸಫಲರಾಗಿಲ್ಲ ಎಂದು ಆರೋಪಿಸಿ ಎಸ್ಎಫ್ಐನ ನೂರಾರು ಕಾರ್ಯಕರ್ತರು ಶುಕ್ರವಾರ ರಾಹುಲ್ ಕಚೇರಿ ಬಳಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಕಚೇರಿ ಸಿಬ್ಬಂದಿ ಮತ್ತು ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆದಿತ್ತು. ಇದರ ನಡುವೆ ಕಚೇರಿಯೂ ಧ್ವಂಸಗೊಂಡಿತ್ತು. ದೇಶದೆಲ್ಲೆಡೆ ರಾಹುಲ್ ಗಾಂಧಿ ಕಚೇರಿ ಮೇಲೆ, ಕಾಂಗ್ರೆಸ್ ಮೇಲೆ ದಾಳಿಯಾಗುತ್ತಿದೆ ಎಂದು ಬಿಂಬಿಸಲು ರಾಹುಲ್ ಗಾಂಧಿ ಸಹಾಯಕ ಹಾಗೂ ಮೂವರು ಕಾಂಗ್ರೆಸ್ ಕಾರ್ಯಕರ್ತರೇ ಇದನ್ನು ಮಾಡಿದ್ದಾರೆ ಅನ್ನೋದು ಸಾಬೀತಾಗಿದೆ. ಹೀಗಾಗಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಪಿಎಫ್ಐ ಭಾವುಟ ಹಿಡಿದು ಒಳನುಗ್ಗಿದ ಕಾರ್ಯಕರ್ತರು ಕಚೇರಿ ಧ್ವಂಸ ಮಾಡಿರುವ ವಿಡಿಯೋ ತನಿಖೆಯನ್ನು ಬೇರೊಂದು ದಿಕ್ಕಿನತ್ತ ಸಾಗುವಂತೆ ಮಾಡಿತ್ತು. ಆದರೆ ಅಸಲಿಗೆ ಕಾಂಗ್ರೆಸ್ ಕಾರ್ಯಕರ್ತರೇ ಪಿಎಫ್ಐ ಬಾವುಟ ಹಿಡಿದು ತಮ್ಮದೇ ಕಚೇರಿಗೆ ನುಗ್ಗಿ ಧ್ವಂಸ ಮಾಡಿದ್ದರು. ಇದು ಪೂರ್ವನಿಯೋಜಿತ ಕೃತ್ಯ. ಕೇರಳದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಕೇರಳ ಕಾಂಗ್ರೆಸ್ ಕಚೇರಿ ಮೇಲೆ ದಾಳಿಯಾಗಿದ್ದರೆ, ಕೇಂದ್ರದಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮೇಲೆ ಇಡಿ ಮುಂದಿಟ್ಟು ದಾಳಿ ಮಾಡಲಾಗುತ್ತಿದೆ ಎಂದು ಕೇರಳ ಕಾಂಗ್ರೆಸ್ ಮುಖಂಡ ಟಿ ಸಿದ್ದಿಕಿ ಆರೋಪಿಸಿದ್ದರು. ಇದೀಗ ಈ ಎಲ್ಲಾ ಹೇಳಿಕೆಗಳು ಕಾಂಗ್ರೆಸ್ಗೆ ತಿರುಗುಬಾಣವಾಗಿದೆ.