ಸಂಸತ್ತಿನಲ್ಲಿ ಕೇಂದ್ರ ಸಚಿವರ ಮೇಲೆ ಅಟ್ಯಾಕ್?: ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ!
ಲೋಕಸಭೆಯಲ್ಲಿ ಕೋಲಾಹಲ ಸೃಷ್ಟಿಸಿದ ರಾಹುಲ್ 'ಡಂಡಾ' ಹೇಳಿಕೆ| ರಾಹುಲ್ ಹೇಳಿಕೆಯನ್ನು ವಿರೋಧಿಸಿದ ಆಡಳಿತ ಪಕ್ಷದ ಸದಸ್ಯರು| ಕಾಂಗ್ರೆಸ್ ಸದಸ್ಯರಿಂದ ಹಲ್ಲೆ ಆರೋಪ ಮಾಡಿದ ಕೇಂದ್ರ ಸಚಿವ| ಕಾಂಗ್ರೆಸ್ ಸದಸ್ಯರು ಹಲ್ಲೆ ಮಾಡಿದರು ಎಂದ ಹರ್ಷವರ್ಧನ್| ಕೇಂದ್ರ ಸಚಿವ ಹರ್ಷವರ್ಧನ್ ಆರೋಪ ನಿರಾಕರಿಸಿದ ಕಾಂಗ್ರೆಸ್|
ನವದೆಹಲಿ(ಫೆ.07): ದೇಶದ ಯುವ ಜನತೆ ಇನ್ನಾರು ತಿಂಗಳಲ್ಲಿ ಪ್ರಧಾನಿ ಮೋದಿ ಅವರಿಗೆ ಬಡಿಗೆಯಿಂದ ಹೊಡೆಯಲಿದ್ದಾರೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ಲೋಕಸಭೆಯಲ್ಲಿ ಭಾರೀ ಕೋಲಾಹಲವನ್ನೇ ಎಬ್ಬಿಸಿದೆ.
ಇಂದು ನಡೆದ ಲೋಕಸಭೆಯ ಅಧಿವೇಶನದಲ್ಲಿ ರಾಹುಲ್ ಹೇಳಿಕೆ ವಿರುದ್ಧ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ರಾಹುಲ್ ಪ್ರಧಾನಿ ಅವರನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಸದಸ್ಯರು ಕಿಡಿಕಾರಿದರು.
ಈ ವೇಳೆ ನಡೆದ ಗಲಾಟೆಯಲ್ಲಿ ಕೆಲವು ಕಾಂಗ್ರೆಸ್ ಸದಸ್ಯರು ತಮ್ಮ ಮೇಲೆ ಹಲ್ಲೆಗೆ ಮುಂದಾದರು ಎಂದು ಕೇಂದ್ರ ಸಚಿವ ಹರ್ಷವರ್ಧನ್ ಗಂಭೀರ ಆರೋಪ ಮಾಡಿದ್ದಾರೆ.
ರಾಹುಲ್ ಹೇಳಿಕೆ ಖಂಡಿಸಿ ಭಾಷಣ ಮಾಡುತ್ತಿದ್ದಾಗ ಕೆಲವು ಕಾಂಗ್ರೆಸ್ ಸದಸ್ಯರು ತಮ್ಮ ಮೇಲೆ ಹಲ್ಲೆಗೆ ಮುಂದಾಗಿದ್ದಲ್ಲದೇ, ತಮ್ಮ ಬಳಿಯಿದ್ದ ದಾಖಲಾತಿಗಳನ್ನು ಹರಿದು ಹಾಕಿದರು ಎಂದು ಹರ್ಷವರ್ಧನ್ ಆರೋಪಿಸಿದರು.
70 ವರ್ಷದಲ್ಲಿ ಏನ್ಮಾಡಿದ್ರಿ? ಕೈ ನಾಯಕಿಯ ಉತ್ತರಕ್ಕೆ ಬಿಜೆಪಿಗರು ಫುಲ್ ಸೈಲೆಂಟ್!
ಮೆಡಿಕಲ್ ಕಾಲೇಜುಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹರ್ಷವರ್ಧನ ಅವರಿಗೆ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಲು ಎದ್ದು ನಿಂತ ಹರ್ಷವರ್ಧನ್, ಪ್ರಧಾನಿ ವಿರುದ್ಧ ರಾಹುಲ್ ಬಳಸಿದ ಪದಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.
ಇದರಿಂದ ಕೆರಳಿದ ಕಾಂಗ್ರೆಸ್ ಸದಸ್ಯರು ಉತ್ತರ ಕೊಡುವ ಬದಲು ವಿವಾದ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಹರ್ಷವರ್ಧನ್ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ನಡೆದ ತಳ್ಳಾಟದಲ್ಲಿ ಕಾಂಗ್ರೆಸ್ ಸದಸ್ಯರು ತಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಹರ್ಷವರ್ಧನ್ ಆರೋಪಿಸಿದರು. ಆದರೆ ಸಚಿವರ ಆರೋಪವನ್ನು ನಿರಾಕರಿಸಿರುವ ಕಾಂಗ್ರೆಸ್, ನಮ್ಮ ಸದಸ್ಯರ ಮೇಲೆಯೇ ಬಿಜೆಪಿ ಸದಸ್ಯರು ಹಲ್ಲೆ ನಡೆಸಿದ್ದಾರೆ ಎಂದು ಪ್ರತಿ ಆರೋಪ ಮಾಡಿದೆ.