ಶಾಸಕರು ಅಥವಾ ಸಂಸದರು ಎಷ್ಟೇ ಬಾರಿ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದರೂ, ಸೋಲಿನ ಬಳಿಕ ಒಂದೇ ಪಿಂಚಣಿ ಪಡೆಯುತ್ತಾರೆ ಎಂಬುದು ಎಲ್ಲರ ನಂಬಿಕೆ. 

ಚಂಡೀಗಢ (ಮಾ.26): ಶಾಸಕರು (MLAs) ಅಥವಾ ಸಂಸದರು (MPs) ಎಷ್ಟೇ ಬಾರಿ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದರೂ, ಸೋಲಿನ ಬಳಿಕ ಒಂದೇ ಪಿಂಚಣಿ (Pension) ಪಡೆಯುತ್ತಾರೆ ಎಂಬುದು ಎಲ್ಲರ ನಂಬಿಕೆ. ಆದರೆ ದಶಕಗಳಿಂದ ಕಾಂಗ್ರೆಸ್‌ (Congress) ಮತ್ತು ಶಿರೋಮಣಿ ಅಕಾಲಿದಳದ ಆಡಳಿತ ಹೊಂದಿದ್ದ ಪಂಜಾಬ್‌ನಲ್ಲಿ (Punjab), ಶಾಸಕರು ಎಷ್ಟು ಬಾರಿ ಆಯ್ಕೆಯಾಗಿದ್ದರೋ ಅಷ್ಟು ಪ್ರತ್ಯೇಕ ಪಿಂಚಣಿ ಪಡೆಯುವ ಅವಕಾಶ ಹೊಂದಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಆದರೆ ನಿಯಮವನ್ನು ಇದೀಗ ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಆಮ್‌ಆದ್ಮಿ ಸರ್ಕಾರ (AAP) ರದ್ದುಪಡಿಸಿದೆ.

Add Asianetnews Kannada as a Preferred SourcegooglePreferred

ಹೀಗಾಗಿ ಮಾಜಿ ಈ ಹಿಂದೆ ಎಷ್ಟು ಸಲ ಶಾಸಕರಾಗಿ ಆಯ್ಕೆಯಾಗಿದ್ದರೂ ಅವರಿಗೆ ಒಂದು ಅವಧಿಯ ಪಿಂಚಣಿ ಮಾತ್ರ ಸಿಗಲಿದೆ. ಈ ಕುರಿತು ಶುಕ್ರವಾರ ಹೇಳಿಕೆ ನೀಡಿರುವ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಸಿಂಗ್‌ ಮಾನ್‌ (Bhagwant Mann), ‘ಪಂಜಾಬಿನ ಮಾಜಿ ಶಾಸಕರು ಎರಡು, ಐದು ಅಥವಾ ಹತ್ತು ಬಾರಿ ಗೆದ್ದಿದ್ದರೂ ಅವರಿಗೆ ಒಂದೇ ಅವಧಿಯ ಪಿಂಚಣಿಯನ್ನು ನೀಡಲಾಗುತ್ತದೆ. ’ಒಬ್ಬ ಶಾಸಕನಿಗೆ ಒಂದೇ ಅವಧಿ ಪಿಂಚಣಿ’ ಯೋಜನೆಯಂತೆ ಮಾಜಿ ಶಾಸಕರು ಇನ್ನು ಪ್ರತಿ ತಿಂಗಳು 75,000 ರು ಪಿಂಚಣಿಯನ್ನು ಮಾತ್ರ ಪಡೆಯಲಿದ್ದಾರೆ.’ ಎಂದು ಮಾನ್‌ ವಿಡಿಯೋ ಸಂದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

Punjab ನೂತನ ಸಿಎಂ ಭಗವಂತ್ ಮಾನ್‌ರಿಂದ ಪ್ರಧಾನಿ ಮೋದಿ ಭೇಟಿ!

‘ಜನರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿ ಹಲವಾರು ಬಾರಿ ಒಬ್ಬ ಶಾಸಕನು ಹಲವಾರು ಬಾರಿ ಆಯ್ಕೆಯಾಗುತ್ತಾರೆ. ಐದಾರು ಬಾರಿ ಆಯ್ಕೆಯಾದವರು ನಂತರ ಸೋತು, ಯಾವುದೇ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ಸಿಗದೇ ಇರುವಾಗಲೂ ಕೂಡಾ ಪ್ರತಿ ತಿಂಗಳು ಲಕ್ಷಾಂತರ ರು ಹಣವನ್ನು ಪಿಂಚಣಿ ರೂಪದಲ್ಲಿ ಪಡೆಯುತ್ತಿದ್ದಾರೆ. ಶಾಸಕರೊಬ್ಬರಿಗೆ ಒಂದು ಅವಧಿಗೆ 75,000 ರು ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ನೀಡಲಾಗುತ್ತದೆ. ನಂತರ ಆ ಶಾಸಕ ಆಯ್ಕೆಯಾದ ನಂತರದ ಪ್ರತಿ ಅವಧಿಗೆ ಪಿಂಚಣಿ ಮೊತ್ತದ ಶೇ. 66ರಷ್ಟುಹಣವನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ. 

ಹೀಗಾಗಿ ಹಲವಾರು ಬಾರಿ ಆಯ್ಕೆಯಾಗಿದ್ದ ಶಾಸಕರು ತಿಂಗಳಿಗೆ 4.5 ರಿಂದ 5.25 ಲಕ್ಷದ ವರೆಗೆ ಪಿಂಚಣಿ ಪಡೆಯುತ್ತಿದ್ದಾರೆ. ಇದನ್ನು ನಿಲ್ಲಿಸಿ ಒಂದೇ ಅವಧಿಯ ಪಿಂಚಣಿ ನೀಡುವ ಮೂಲಕ ಸರ್ಕಾರ ಮುಂದಿನ ಐದು ವರ್ಷಗಳಲ್ಲಿ 80 ಕೋಟಿ ಹಣವನ್ನು ಉಳಿತಾಯ ಮಾಡಲಿದೆ. ಉಳಿತಾಯವಾದ ನಿಧಿಯನ್ನು ಜನರ ಕಲ್ಯಾಣಕ್ಕಾಗಿ ಬಳಸಲಾಗುವುದು’ ಎಂದು ಮಾನ್‌ ಘೋಷಿಸಿದ್ದಾರೆ. ನೆರೆಯ ಹರ್ಯಾಣದಲ್ಲೂ ಇದೇ ರೀತಿಯ ನಿಯಮ ಇದ್ದು, ಕೆಲ ವರ್ಷಗಳ ಹಿಂದೆ ಅದನ್ನು ರದ್ದುಪಡಿಸಲಾಗಿತ್ತು.

ಈವರೆಗಿನ ನಿಯಮ ಏನಿತ್ತು?: ಒಬ್ಬ ವ್ಯಕ್ತಿ 5 ಬಾರಿ ಆಯ್ಕೆಯಾಗಿದ್ದರೆ, ಮೊದಲ ಅವಧಿಗೆ 75000 ರು. ಪಿಂಚಣಿ ಸಿಗುತ್ತಿತ್ತು. ನಂತರದ 4 ಅವಧಿಗೆ ಮೊದಲ ಅವಧಿಯ ಮೊತ್ತದ ಶೇ.66ರಷ್ಟುಪಿಂಚಣಿ ಹಣ ಸಿಗುತ್ತಿತ್ತು. ಅಂದರೆ ಹೆಚ್ಚು ಕಡಿಮೆ 3 ಲಕ್ಷ ರು.ವರೆಗೆ ಪಿಂಚಣಿ ಸಿಗುತ್ತಿತ್ತು.

ಹೊಸ ನಿಯಮ ಏನು?: ಒಬ್ಬ ವ್ಯಕ್ತಿ 5 ಬಾರಿ ಆಯ್ಕೆಯಾಗಿದ್ದರೂ, ಸೋತ ಬಳಿಕ 75000 ರು. ಪಿಂಚಣಿ ಮಾತ್ರ ಸಿಗುತ್ತದೆ.

ಪಂಜಾಬ್ ಗೆದ್ದ ಅಪ್‌ನಿಂದ ಮತ್ತೊಂದು ರಣತಂತ್ರ: ಕಾಂಗ್ರೆಸ್, ಬಿಜೆಪಿಗೆ ನಡುಕ!

ಕೆಲಸ ಮಾಡಿ ಇಲ್ಲವೇ ಹೊರಡಿ: ‘ಪಂಜಾಬಿನ ಮುಖ್ಯಮಂತ್ರಿ ಭಗವಂತ್‌ ಮಾನ್‌ ತಮ್ಮ ಕ್ಯಾಬಿನೆಟ್‌ನಲ್ಲಿರುವ ಪ್ರತಿ ಸಚಿವರಿಗೂ ಗುರಿಗಳನ್ನು ನಿಗದಿಪಡಿಸಿದ್ದಾರೆ. ಸಚಿವರು ಆ ಗುರಿಯನ್ನು ಸಾಧಿಸುವಲ್ಲಿ ವಿಫಲವಾದರೆ ಜನರು ಸಚಿವರನ್ನು ಆ ಸ್ಥಾನದಿಂದ ವಜಾಗೊಳಿಸಲು ಒತ್ತಾಯಿಸಬಹುದಾಗಿದೆ’ ಎಂದು ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಭಾನುವಾರ ಹೇಳಿದ್ದಾರೆ. ಈ ಮೂಲಕ ಸಚಿವರಿಗೆ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ

ಶನಿವಾರ 10 ಸಚಿವರು ಕ್ಯಾಬಿನೆಟ್‌ನಲ್ಲಿ ಸೇರ್ಪಡೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಮಾನ್‌ ಕಾರ್ಯನಿರ್ವಹಿಸುತ್ತಿರುವ ಶೈಲಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೇಜ್ರಿವಾಲ್‌ ‘ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೂರೇ ದಿನಗಳಲ್ಲಿ ಮಾನ್‌ ಬಹಳಷ್ಟುಕಾರ್ಯಗಳನ್ನು ಮಾಡುತ್ತಿದ್ದಾರೆ. ಹಳೆಯ ಸಚಿವರಿಗೆ ನೀಡಿದ ಭದ್ರತಾ ವ್ಯವಸ್ಥೆಯನ್ನು ಹಿಂಪಡೆದುಕೊಂಡ ಮಾನ್‌ ಜನರಿಗೆ ಭದ್ರತೆ ನೀಡುತ್ತಿದ್ದಾರೆ. ನಷ್ಟವಾದ ಬೆಳೆಗಳಿಗೆ ಪರಿಹಾರ ನೀಡಿದ್ದಾರೆ. ಭ್ರಷ್ಟಾಚಾರ ತಡೆಗೆ ಸಹಾಯವಾಣಿ ಘೋಷಿಸಿದ್ದಾರೆ. 10,000 ಪೊಲೀಸ್‌ ಸೇರಿದಂತೆ 25,000 ಖಾಲಿಯಿರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದಾರೆ’ ಎಂದರು.