ದೆಹಲಿಗೆ ಹೋಗಿಬಂದು ಮಸೀದಿಯಲ್ಲಿ ಅಡಗಿಕೊಂಡಿದ್ದ 30 ತಬ್ಲಿಘಿಗಳ ಬಂಧನ..!
ದೆಹಲಿಯ ನಿಜಾಮುದ್ದೀನ್ ಮರ್ಕಜ್ನಲ್ಲಿ ನಡೆದ ತಬ್ಲೀಘಿ ಜಮಾತ್ ಧಾರ್ಮಿಕ ಸಭೆ ಬಳಿಕ ತಲೆಮರಿಸಿಕೊಂಡು ಮಸೀದಿಯಲ್ಲಿ ಅಡಗಿಕುಳಿತ್ತಿದ್ದವರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಪ್ರಯಾಗ್ರಾಜ್, (ಏ.21): ದೆಹಲಿಯ ನಿಜಾಮುದ್ದೀನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ತಲೆಮರಿಸಿಕೊಂಡಿದ್ದ ಒಟ್ಟು 30 ತಬ್ಲಿಘಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಎರಡು ಮಸೀದಿಗಳಲ್ಲಿ ಅಡಗಿದ್ದ ತಬ್ಲಿಘಿಗಳನ್ನು 14 ದಿನಗಳ ಕ್ವಾರಂಟೈನ್ ಆದ ನಂತರ ಟ್ರಾವೆಲ್ ಹಿಸ್ಟರಿ ಮುಚ್ಚಿಟ್ಟಿರುವ ಆರೋಪದಡಿಯಲ್ಲಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಅಲಹಬಾದ್ನ ವಿಶ್ವವಿದ್ಯಾಲಯದ ಓರ್ವ ಪ್ರೊಫೆಸರ್, 16 ವಿದೇಶಿಗರು ಸೇರಿ ಒಟ್ಟು 30 ಜನರು ಟ್ರಾವೆಲ್ ಹಿಸ್ಟರಿಯನ್ನು ಮುಚ್ಚಿಟ್ಟಿದ್ದರು. ಅದರಲ್ಲೂ ಪ್ರೊಫೆಸರ್, ದೆಹಲಿಯಿಂದ ಮರಳಿದ ನಂತರ ಕಾಲೇಜಿನಲ್ಲಿ ತರಗತಿ ತೆಗೆದುಕೊಂಡಿರುವುದಷ್ಟೇ ಅಲ್ಲದೆ ಮೌಲ್ಯಮಾಪನದಲ್ಲೂ ಭಾಗವಹಿಸಿದ್ದ ಎನ್ನುವುದು ಆತಂಕಕ್ಕೆ ಕಾರಣವಾಗಿದೆ.
ಇನ್ನೂ ಪರೀಕ್ಷೆಗೊಳಗಾಗಿಲ್ಲ ಬೆಂಗಳೂರಿನ 64 ತಬ್ಲೀಘಿಗಳು..!
ಈ ಹಿಂದೆ ಮಾರ್ಚ್ 31ರಂದು ಶಾಹಗಂಜ್ನ ಮಸೀದಿಯಲ್ಲಿ ಅಡಗಿದ್ದ 7 ಇಂಡೋನೇಷ್ಯಾ ಪ್ರಜೆಗಳು ಸೇರಿ ಒಟ್ಟು 9 ಜನರನ್ನು ಬಂಧಿಸಲಾಗಿತ್ತು. ಅದೇ ರೀತಿ 9 ಥಾಯ್ಲೆಂಡ್ ಪ್ರಜೆಗಳು ಸೇರಿ 11 ತಬ್ಲಿಘಿಗಳು ಮತ್ತೊಂದು ಮಸೀದಿಯಲ್ಲಿ ವಾಸಿಸುತ್ತಿರುವುದು ಕಂಡುಬಂದಿದ್ದು ಅವರನ್ನು ಕೂಡ ಕ್ವಾರಂಟೈನ್ ಮಾಡಲಾಗಿದೆ.
ಅವರ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಕ್ವಾರಂಟೈನ್ ಅವಧಿ ಮುಗಿದ ತಕ್ಷಣ ಅವರನ್ನೂ ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯ ತಬ್ಲಿಘಿ ಜಮಾತ್ ಪ್ರಕರಣ ಇಡೀ ದೇಶಕ್ಕೆ ಕೊರೋನಾ ವ್ಯಾಪಿಸಿದೆ. ಯಾರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೀರಿ ನೀವೇ ಆಸ್ಪತ್ರೆಗೆ ಬಂದು ತಪಾಸಣೆಗೆ ಒಳಗಾಗಿ ಎಂದು ಮನವಿ ಮಾಡಿಕೊಳ್ಳಲಾಗಿದೆ. ಆದರೂ ಆ ಮಂದಿ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತಲೆಮರಿಸಿಕೊಂಡಿದ್ದಾರೆ. ಈ ಹಿನ್ನೆಲೆ ಸರ್ಕಾರ ಈ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ.
ಇನ್ನು ಕರ್ನಾಟಕದಲ್ಲೂ ಸಹ ಹಲವು ತಬ್ಲಿಘಿಗಳು ದೆಹಲಿಗೆ ಹೋಗಿಬಂದು ತಲೆಮರಿಸಿಕೊಂಡಿದ್ದು, ಇವರ ಪತ್ತೆಗೆ ಶೋಧ ನಡೆದಿದೆ.