ನೆಹರೂ ಕುರಿತ ಹೇಳಿಕೆಯಿಂದ ಪ್ರಧಾನಿ ಮೋದಿ ಹಕ್ಕುಚ್ಯುತಿ ನಿಯಮ ಉಲ್ಲಂಘನೆ ಮಾಡಿದ್ದಾರೆ. ಈ ಹಿನ್ನೆಲೆ ರಾಜ್ಯಸಭೆ ಸಭಾಪತಿಗೆ ವೇಣುಗೋಪಾಲ್‌ ನೋಟಿಸ್‌ ನೀಡಿದ್ದಾರೆ ಎಂದು ತಿಳಿದುಬಂದಿದೆ.   

ನವದೆಹಲಿ (ಮಾರ್ಚ್‌ 18, 2023): ‘ಭಾರತೀಯ ಪ್ರಜಾಪ್ರಭುತ್ವ ಕುರಿತು ಬ್ರಿಟನ್‌ನಲ್ಲಿ ಅಪಮಾನಕಾರಿ ಹೇಳಿಕೆ ನೀಡಿದ್ದಾರೆ’ ಎಂದು ಆರೋಪಿಸಿ ತನ್ನ ನಾಯಕ ರಾಹುಲ್‌ ಗಾಂಧಿ ವಿರುದ್ಧ ಸಮರ ಸಾರಿರುವ ಬಿಜೆಪಿ ಮೇಲೆ ಕಾಂಗ್ರೆಸ್‌ ಇದೀಗ ಹಕ್ಕುಚ್ಯುತಿ ಅಸ್ತ್ರ ಪ್ರಯೋಗಿಸಿದೆ. ‘ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರು ಕುಟುಂಬ (ಸೋನಿಯಾ ಗಾಂಧಿ ಕುಟುಂಬ) ಸದಸ್ಯರು ಏಕೆ ನೆಹರು ಅವರ ಉಪನಾಮ (ಸರ್‌ನೇಮ್‌) ಬಳಸುವುದಿಲ್ಲ?’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಪ್ರಶ್ನಿಸುವ ಮೂಲಕ ಹಕ್ಕುಚ್ಯುತಿ ನಿಯಮ ಉಲ್ಲಂಘಿಸಿದ್ದಾರೆ ಎಂದು ರಾಜ್ಯಸಭೆ ಸಭಾಪತಿ ಜಗದೀಪ್‌ ಧನಕರ್‌ ಅವರಿಗೆ ಕಾಂಗ್ರೆಸ್‌ ನಾಯಕ ಕೆ.ಸಿ.ವೇಣುಗೋಪಾಲ್‌ ನೋಟಿಸ್‌ ನೀಡಿದ್ದಾರೆ.

Add Asianetnews Kannada as a Preferred SourcegooglePreferred

‘ಸಂಸತ್ತಿನ ಬಜೆಟ್‌ ಅಧಿವೇಶನದ ಮೊದಲ ಅವಧಿಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ ನೆಹರು ವಿಷಯವನ್ನು ಮೋದಿ ಪ್ರಸ್ತಾಪಿಸಿದ್ದರು. ಆದರೆ ಅವರು ಅಣಕಿಸುವ ರೀತಿಯಲ್ಲಿ ಈ ಹೇಳಿಕೆಯನ್ನು ನೀಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಲೋಕಸಭೆಯ ಸದಸ್ಯರಾಗಿರುವ, ನೆಹರು ಕುಟುಂಬ ಸದಸ್ಯರೂ ಆಗಿರುವ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರಿಗೆ ಅಪಮಾನ ಮಾಡಿದ್ದಾರೆ’ ಎಂದು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ: Adani ಕೇಸ್‌: ಇ.ಡಿ. ಕಚೇರಿ ಮುತ್ತಿಗೆಗೆ ವಿಪಕ್ಷಗಳ ಯತ್ನ; ತನಿಖೆ ಕೋರಿ ಇ - ಮೇಲ್‌ನಲ್ಲೇ ದೂರು

‘ತಂದೆಯ ಉಪನಾಮವನ್ನು ಬೇರೆ ಕುಟುಂಬದವರನ್ನು ವಿವಾಹವಾದ ಪುತ್ರಿ ಬಳಸುವುದಿಲ್ಲ ಎಂಬುದು ಪ್ರಧಾನಿಯವರಿಗೆ ಗೊತ್ತಿದೆ. ಆದಾಗ್ಯೂ ಅವರು ಈ ಬಗ್ಗೆ ಅಣಕ ಮಾಡಿದ್ದಾರೆ?’ ಎಂದು ಅವರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ನೊಬೆಲ್ ಶಾಂತಿ ಪ್ರಶಸ್ತಿ ರೇಸ್‌ನಲ್ಲಿ ಪ್ರಧಾನಿ ಮೋದಿ: ಮೋದಿಯೇ ಪ್ರಮುಖ ಸ್ಪರ್ಧಿ ಎಂದ ಪ್ರಶಸ್ತಿ ಸಮಿತಿ ಉಪ ನಾಯಕ