ಸಿಧು ಟ್ವೀಟ್ ಬೆನ್ನಲ್ಲೇ, ರಾಹುಲ್ ಗಾಂಧಿ ಭೇಟಿಯಾದ ಚುನಾವಣಾ ತಂತ್ರಗಾರ!
* ಪಂಜಾಬ್ ಚುನಾವಣೆಗೆ ಇನ್ನೊಂದೇ ವರ್ಷ ಬಾಕಿ
* ಚುನಾವಣೆಗೂ ಮುನ್ನ ಕಾಂಗ್ರೆಸ್ ನಾಯಕರ ಮಧ್ಯೆ ಶೀತಲ ಸಮರ
* ಸಿಎಂ ಜೊತೆಗಿನ ಕಲಹದ ಮಧ್ಯೆ ಆಪ್ ಹೊಗಳಿ ಟ್ವೀಟ್ ಮಾಡಿದ ಸಿಧು
* ಸಿಧು ಟ್ವೀಟ್ ಬೆನ್ನಲ್ಲೇ ರಾಹುಲ್ ಭೇಟಿಯಾದ ಪ್ರಶಾಂತ್ ಕಿಶೋರ್
ನವದೆಹಲಿ(ಜು.13): ಪಂಜಾಬ್ ಚುನಾವಣೆಗೆ ಎಲ್ಲಾ ಪಕ್ಷಗಳು ತಮ್ಮದೇ ರೀತಿಯಲ್ಲಿ ಸಿದ್ಧತೆ ನಡೆಸುತ್ತಿವೆ. ಹೀಗಿದ್ದರೂ ಮಾಜಿ ಕ್ರಿಕೆಟರ್ ಹಾಗೂ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಹಾಗೂ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ನಡುವಿನ ಮುಸುಕಿನ ಗುದ್ದಾಟ ಗುಟ್ಟಾಗಿ ಉಳಿದಿಲ್ಲ. ಆದರೀಗ ಈ ಶೀತಲ ಸಮರದ ಮಧ್ಯೆ ಸಿಧು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಭಗವಂತ್ ಮಾನ್ರವರ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಭಗವಂತ್ ಮಾನ್ ಸಿಧುರನ್ನು ಹೊಗಳಿತರುವ ದೃಶ್ಯಗಳಿವೆ.
ಸೋನಿಯಾ ನಿರ್ಧಾರಕ್ಕೆ ಬದ್ಧ: ಭೇಟಿ ಬಳಿಕ ಅಮರೀಂದರ್ ಹೇಳಿಕೆ!
ಈ ವಿಡಿಯೋ ಶೇರ್ ಮಾಡಿರುವ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ನಮ್ಮ ವಿಪಕ್ಷ ಆಮ್ ಆದ್ಮಿ ಪಾರ್ಟಿ ಯಾವತ್ತೂ ಪಂಜಾಬ್ ಪರವಿದ್ದ ನನ್ನ ಯೋಜನೆ ಹಾಗೂ ಕೆಲಸವನ್ನು ಗುರುತಿಸಿದೆ. 2017 ರ ಮೊದಲು ಡ್ರಗ್ಸ್, ರೈತರ ಸಮಸ್ಯೆಗಳು, ಭ್ರಷ್ಟಾಚಾರ ಮತ್ತು ವಿದ್ಯುತ್ ಬಿಕ್ಕಟ್ಟು ಮೊದಲಾದ ಸಮಸ್ಯೆಗಳನ್ನು ಪಂಜಾಬ್ ಜನತೆ ಎದುರಿಸಿತ್ತು. ಇಂದು "ಪಂಜಾಬ್ ಮಾದರಿಯನ್ನು" ಪ್ರಸ್ತುತಪಡಿಸುತ್ತಿದ್ದೇನೆ. ಹೀಗಿರುವಾಗ ಯಾರು ನಿಜವಾಗಿಯೂ ಪಂಜಾಬ್ ಪರ ಹೋರಾಡುತ್ತಿದ್ದಾರೆ ಎಂಬುದು ಅವರಿಗೆ (ಎಎಪಿ) ತಿಳಿದಿದೆ ಎಂಬುದು ಸ್ಪಷ್ಟವಾಗಿದೆ. " ಎಂದು ಬರೆದಿದ್ದಾರೆ.
ಸಿಧು ಈ ವಿಡಿಯೋ ಅಪ್ಲೋಡ್ ಮಾಡಿ ಸಿಧುರವರು ಪಂಜಾಬ್ ಕಾಂಗ್ರೆಸ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಜೊತೆಗೆ ಪಕ್ಷದ ಹೈಕಮಾಂಡ್ನಲ್ಲೂ ಒಂದು ಬಗೆಯ ಗೊಂದಲ ಸೃಷ್ಟಿಯಾಗಿದೆ. ಕಾಂಗ್ರೆಸ್ ಈಗಾಗಲೇ ಸಿಧು ಹಾಗೂ ಸಿಎಂ ನಡುವಿನ ಭಿನ್ನಮತ ಶಮನಗೊಳಿಸುವ ಹಂತದಲ್ಲಿತ್ತು. ಅಷ್ಟರಲ್ಲೇ ಸಿಧು ಇಂತಹುದ್ದೊಂದು ಟ್ವೀಟ್ ಮಾಡಿ ಈ ಸಮಸ್ಯೆಯನ್ನು ಮತ್ತಷ್ಟು ಎಳೆದಿದ್ದಾರೆ.
ಪಂಜಾಬ್ ಮಿಷನ್ ಆರಂಭ: AAP ಗೆದ್ದರೆ 300 ಯೂನಿಟ್ ವಿದ್ಯುತ್ ಫ್ರೀ ಎಂದ ಕೇಜ್ರೀವಾಲ್!
ರಾಹುಲ್ ಗಾಂಧಿ ಭೇಟಿಯಾದ ಚುನಾವಣಾ ತಂತ್ರಗಾರ
ಇನ್ನು ಸಿಧು ಟ್ವೀಟ್ ಬೆನ್ನಲ್ಲೇ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದಾರೆ. ರಾಹುಲ್ ಗಾಂಧಿಯವರ ದೆಹಲಿ ನಿವಾಸದಲ್ಲಿ ಈ ಸಭೆ ನಡೆದಿದ್ದು, ಪಂಜಾಬ್ನಲ್ಲಿ ನಡೆಯುತ್ತಿರುವ ಆಂತರಿಕ ಕಲಹ ಶಮನಗೊಳಿಸುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಘಿದೆ. ಮುಂದಿನ ವರ್ಷ ಪಂಜಾಬ್ನಲ್ಲಿ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ಪಂಜಾಬ್ ಕಾಂಗ್ರೆಸ್ನ ಪ್ರಮುಖ ನಾಯಕರಾದ ಸಿಎಂ ಅಮರಿಂದರ್ ಸಿಂಗ್ ಹಾಗೂ ನವಜೋತ್ ಸಿಂಗ್ ನಡುವವೆ ಸಂಧಾನ ನಡೆಸುವ ಯತ್ನ ಕಾಂಗ್ರೆಸ್ ಮಾಡುತ್ತಿದೆ ಎನ್ನಲಾಗಿದೆ.