ಪ್ರಶಾಂತ್ ಕಿಶೋರ್ ವಿರುದ್ಧ ಗಂಭೀರ ಆರೋಪ, FIR ದಾಖಲು!
ಬಿಹಾರದಲ್ಲಿ ನಿತೀಶ್, ದೆಹಲಿಯಲ್ಲಿ ಕೇಜ್ರೀವಾಲ್ಗೆ ಗೆಲುವು ತಂದುಕೊಟ್ಟ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.
ಪಟನಾ[ಫೆ.28]: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ವಿರುದ್ಧ ವಿಪಕ್ಷಗಳ ಸಂಘಟನೆಗಾಗಿ ಕರೆ ನೀಡಲಾಗಿದ್ದ ಬಾತ್ ಬಿಹಾರ್ ಕೀ ಅಭಿಯಾನ ಸಂಬಂಧ ಚುನಾವಣಾ ರಣತಂತ್ರಗಾರ ಪ್ರಶಾಂತ್ ಕಿಶೋರ್ ವಿರುದ್ಧ ಕೃತಿಚೌರ್ಯ ಕೇಸ್ ದಾಖಲಾಗಿದೆ.
ಕಾಂಗ್ರೆಸ್ ಜೊತೆ ಡೇಟಾ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶಾಶ್ವತ್ ಗೌತಂ ಎಂಬುವರು ಈ ಸಂಬಂಧ ಪಾಟಲೀಪುತ್ರ ಠಾಣೆಗೆ ದೂರು ದಾಖಲಿಸಿದ್ದು, ಪ್ರಶಾಂತ್ ಕಿಶೋರ್ ಅವರು ಬಳಸಿರುವ ಬಾತ್ ಬಿಹಾರ್ ಕೀ ಪದ ಬಳಕೆಯು ತಮ್ಮದು ಎಂದು ಪ್ರತಿಪಾದಿಸಿದ್ದಾರೆ.
ಅಲ್ಲದೆ, ಈ ಹಿಂದೆ ತಮ್ಮ ಆಪ್ತನಾಗಿದ್ದ ಒಸಮಾ ಎಂಬಾತನೇ ಈ ಪದ ಪ್ರಶಾಂತ್ ಅವರಿಗೆ ಸಿಗುವಂತೆ ಮಾಡಿರುವಲ್ಲಿ ಪಾತ್ರ ವಹಿಸಿರಬಹುದು ಎಂದು ಶಂಕಿಸಿದ್ದಾರೆ.