ಅಪರೇಶನ್ ಕಮಲಕ್ಕೆ ಹೆದರಿ ಬಿಡದಿ ರೆಸಾರ್ಟ್ಗೆ 8 ಕಾಂಗ್ರೆಸ್ ಶಾಸಕರು ಶಿಫ್ಟ್, ಮಹತ್ವದ ಬೆಳವಣಿಗೆ ನಡೆದಿದೆ. ಅಧಿಕಾರ ಬದಲಾವಣೆ ಚರ್ಚೆಗಳ ನಡುವೆ ಈ ಬೆಳವಣಿಗೆ ತೀವ್ರ ಕೋಲಾಹಲ ಸೃಷ್ಟಿಸಿದೆ. ಯಾವ ಶಾಸಕರು ರೆಸಾರ್ಟ್ಗೆ ಶಿಪ್ಟ್?
ಬೆಂಗಳೂರು (ಮಾ.13) ಕರ್ನಾಟಕ ಕಾಂಗ್ರೆಸ್ನಲ್ಲಿ ಈಗಾಗಲೇ ಹಲವು ಬಾರಿ ಕೋಲಾಹಲ ಸೃಷ್ಟಿಯಾಗಿದೆ. ಹೈಕಮಾಂಡ್ ಹೇಳುವವರೆ ನಾನು ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಈಗಾಗಲೇ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಬೆಂಗಳೂರಿನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯಾಗಿದೆ. ಬಿಜೆಪಿಯ ಆಪರೇಶನ್ ಕಮಲಕ್ಕೆ ಬೆದರಿ 8 ಕಾಂಗ್ರೆಸ್ ಶಾಸಕರು ರೆಸಾರ್ಟ್ಗೆ ಶಿಫ್ಟ್ ಆಗಿದ್ದಾರೆ. ಬೆಂಗಳೂರಿನ ಹೊರವಲಯದ ಬಿಡದಿ ಬಳಿಯ ರೆಸಾರ್ಟ್ಗೆ ಕಟುಂಬ ಸಮೇತ ಸ್ಥಳಾಂತರಗೊಂಡಿದ್ದಾರೆ. ಹೌದು, ಒಡಿಶಾದ 8 ಕಾಂಗ್ರೆಸ್ ಶಾಸಕರು ಬೆಂಗಳೂರು ರೆಸಾರ್ಟ್ನಲ್ಲಿ ಬೀಡು ಬಿಟ್ಟಿದ್ದಾರೆ.
ಡಿಕೆ ಶಿವಕುಮಾರ್ ನೇತೃತ್ವದಲ್ಲಿ ವಂಡರ್ಲಾ ರೆಸಾರ್ಟ್ಗೆ ಶಾಸಕರು
ಮಾರ್ಚ್ 16ರಂದು ರಾಜ್ಯಸಭಾ ಚುನಾವಣೆ ನಡೆಯಲಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆ ತೀವ್ರಗೊಂಡಿದೆ. ಒಡಿಶಾದಲ್ಲಿ ಕಾಂಗ್ರೆಸ್ ಶಾಸಕರು ಬಿಜೆಪಿಯ ಆಪೇರೇಶನ್ ಭೀತಿಯಲ್ಲಿದ್ದಾರೆ. ರಾಜ್ಯಸಭಾ ಚುನಾವಣೆಗೂ ಮೊದಲು ಒಡಿಶಾ ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿ ಮುಂದಾಗಿದೆ ಅನ್ನೋ ಆರೋಪಗಳು ಕೇಳಿಬಂದಿದೆ. ಹೀಗಾಗಿ ಒಡಿಶಾದ 8 ಕಾಂಗ್ರೆಸ್ ಶಾಸಕರು, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬಿಡದಿಯ ವಂಡರ್ಲಾ ರೆಸಾರ್ಟ್ಗೆ ಶಿಫ್ಟ್ ಆಗಿದ್ದಾರೆ.
14 ಮಂದಿ ರೆಸಾರ್ಟ್ ವಾಸ್ತವ್ಯ
ಕಾಂಗ್ರೆಸ್ 8 ಶಾಸಕರು ಹಾಗೂ ಅವರ ಕುಟುಂಬ ಸೇರಿದಂತೆ ಒಟ್ಟು 14 ಮಂದಿ ಇದೀಗ ಬಿಡದಿ ರೆಸಾರ್ಟ್ನಲ್ಲಿ ಬೀಡು ಬಿಟ್ಟಿದ್ದಾರೆ. ಇವರಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ. ಒಡಿಶಾದಲ್ಲಿ ರಾಜಕೀಯ ಕ್ಷಿಪ್ರ ಬೆಳವಣಿಗೆ ತೀವ್ರಗೊಳ್ಳುತ್ತಿದ್ದಂತೆ ಒಡಿಶಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಭಕ್ತ ಚರಣ್ ದಾಸ್ ಸೂಚನೆ ಮೇರೆಗೆ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಸ್ಥಳಾಂತರಗೊಂಡಿದಿದ್ದಾರೆ. ಭಕ್ತ ಚರಣ ದಾಸ್ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆ ಮಾತುಕತೆ ನಡೆಸಿ ರೆಸಾರ್ಟ್ ವ್ಯವಸ್ಥೆ ಮಾಡಿಸಿದ್ದಾರೆ.
ಒಡಿಶಾ ವಿಧಾನಸಭಾ ಸಂಖ್ಯಾ ಬಲ 147. ಬಿಜೆಪಿ 79 ಶಾಸಕರೊಂದಿಗೆ ಬಹುಮಾತ ಹೊಂದಿದೆ. ಇದೀಗ ಒಡಿಶಾ ಬಿಜೆಪಿ ಮೂವರು ಪ್ರಮುಖರನ್ನು ರಾಜ್ಯಸಭೆಗೆ ಕಳುಹಿಸಲು ಮುಂದಾಗಿದೆ. ಇದಕ್ಕಾಗಿ ಬಿಜೆಪಿಗೆ ಪಕ್ಷೇತರ ಅಭ್ಯರ್ಥಿಗಳು ಮಾತ್ರವಲ್ಲ, ಕ್ರಾಸ್ ವೋಟಿಂಗ್ ಅವಶ್ಯಕತೆ ಇದೆ. ಹೀಗಾಗಿ ಕಾಂಗ್ರೆಸ್ ಶಾಸಕರ ಖರೀದಿಗೆ ಮುಂದಾಗಿದೆ ಎಂದು ಒಡಿಶಾ ಬಿಜೆಪಿ ಆರೋಪಿಸಿದೆ. 48 ಶಾಸಕರನ್ನು ಹೊಂದಿರುವ ಬಿಜು ಜನತಾ ದಳ (ಬಿಜೆಡಿ) ಒಬ್ಬ ನಾಯಕನ ರಾಜ್ಯಸಭೆಗೆ ಕಳುಹಿಸಲಿದೆ. ಕಾಂಗ್ರೆಸ್ 14 ಶಾಸಕರನ್ನು ಹೊಂದಿದೆ.


