Asianet Suvarna News Asianet Suvarna News

PM Modi Security Breach: ದೇಶದ ಪ್ರಧಾನಿ ಭದ್ರತೆ ಲೋಪ ಗಂಭೀರ ವಿಚಾರ, ತನಿಖೆಗೆ ಒತ್ತಾಯಿಸಿದ ಠಾಕ್ರೆ!

* ಮೋದಿ ಭದ್ರತೆಯಲ್ಲಿ ಭಾರೀ ಲೋಪ

* ದೇಶದ ಪ್ರಧಾನಿ ಭದ್ರತೆಯಲ್ಲಿ ಯಾವುದೇ ಹೊಂದಾಣಿಕೆ ಬೇಡ

* ಪ್ರಕರಣದ ತನಿಖೆ ನಡೆಯಬೇಕು ಎಂದ ಠಾಕ್ರೆ

PM stranded: Thackeray wants probe into Punjab security lapse, says Raut pod
Author
Bangalore, First Published Jan 7, 2022, 7:17 AM IST

ಮುಂಬೈ(ಜ.07): ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪಂಜಾಬ್‌ಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರನ್ನು ರೈತರ ತಂಡವೊಂದು ಫ್ಲೈಓವರ್‌ವೊಂದರ ಮೇಲೆ ತಡೆಗಟ್ಟಿದ ಆತಂಕಕಾರಿ ಘಟನೆ ಭಾರೀ ಸದ್ದು ಮಾಡುತ್ತಿದೆ. ಸದ್ಯ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ (Maharashtra Chief Minister Uddhav Thackeray) ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಪ್ರಧಾನಿ ಭದ್ರತೆಯಲ್ಲಾದ ಲೋಪ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ. ಇದನ್ನು ಕಡೆಗಣಿಸಬಾರದು ಎಂದಿದ್ದಾರೆ.

ಹೌದು ಈ ಸಂಬಂಧ ಟ್ವೀಟ್ ಮಾಡಿರುವ ಶಿವಸೇನೆ ನಾಯಕ ಸಂಜಯ್ ರಾವತ್ (Sanjay Raut) 'ಪ್ರಧಾನಿ ಎಲ್ಲೇ ಇದ್ದರೂ ಸರಿ, ಅವರ ಭದ್ರತೆಯಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳಬಾರದು. ಪ್ರಧಾನಿ ಮೋದಿ ಪಂಜಾಬ್‌ಗೆ ಭೇಟಿ ವೇಳೆ ಕಂಡು ಬಂದ ಲೋಪ (PM Modi Security Breach) ಬಹಳ ಗಂಭೀರವಾದದ್ದು. ಇಂತಹುದೇ ನಿರ್ಲಕ್ಷ್ಯ, ಲೋಪದಿಂದಾಗಿ ದೇಶ ಈಗಾಗಲೇ ಇಬ್ಬರು ಪ್ರಧಾನಿಗಳನ್ನು ಕಳೆದುಕೊಂಡಿದೆ. ಹೀಗಾಗಿ ಈ ವಿಚಾರದ ಬಗ್ಗೆ ಕೂಲಂಕುಷ ತನಿಖೆ ನಡೆಯಬೇಕು ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

PM Modi Security Breach: ಮೋದಿ ರ‍್ಯಾಲಿ ವಿಫಲಕ್ಕೆ ಖಲಿಸ್ತಾನಿ ಉಗ್ರ ಸಂಚು?

ಮೋದಿ ಭದ್ರತೆ ವಿಚಾರವಾಗಿ ನಿರ್ಲಕ್ಷ್ಯ ತೋರಿದ ವಿಚಾರ ಸದ್ಯ ಭಾರೀ ಕಾವು ಪಡೆದಿದ್ದು, ಈ ವಿಚಾರವಾಗಿ ಪಂಜಾಬ್ ಸರ್ಕಾರ ಹಾಗೂ ಕೇಂದ್ರದ ನಡುವೆ ಭಾರೀ ತಿಕ್ಕಾಟ ಆರಂಣಭವಾಗಿದೆ. ಈಗಾಗಲೇ ಈ ವಿಚಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, ಗೃಹ ಸಚಿವಾಲಯವೂ ತನಿಖೆಗೆ ಆದೇಶಿಸಿದೆ. ಪಂಜಾಬ್‌ನಲ್ಲಿರುವ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಉದ್ದೇಶಪೂರ್ವಕವಾಗೇ ಈ ನಿರ್ಲಕ್ಷ್ಯ ತೋರಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಹೀಗಿದ್ದರೂ ಖರ್ಗೆ ಸೇರಿದಂತೆ ಇನ್ನೂ ಕೆಲ ನಾಯಕರು ಪಂಜಾಬ್‌ ಸರ್ಕಾರದ ತಪ್ಪಿಲ್ಲ, ಭದ್ರತಾ ವೈಫಲ್ಯಕ್ಕೆ ಕೆಂದ್ರ ಸರ್ಕಾರವೇ ಹೊಣೆ ಎಂದಿದ್ದಾರೆ.

ಇಂತಹ ಸಂದರ್ಭದಲ್ಲಿ ಉದ್ಧವ್ ಠಾಕ್ರೆ ನೀಡಿರುವ ಈ ಹೇಳಿಕೆ ಭಾರೀ ಮಹತ್ವ ಪಡೆದುಕೊಳ್ಳುತ್ತದೆ. ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡು ಶಿವಸೇನೆ ಅಧಿಕಾರ ವಹಿಸಿಕೊಂಡಿದೆ. ಹೀಗಿರಿವಾಗ ಪ್ರಧಾನಿ ಭದ್ರತೆ ಲೋಪ ವಿಚಾರವಾಗಿ ಸಿಎಂ ಠಾಕ್ರೆ ನೀಡಿರುವ ಹೇಳಿಕೆ ಮೈತ್ರಿಯಲ್ಲಿ ಬಿರುಕುಂಟುಉ ಮಾಡುವ ಸಾಧ್ಯತೆಯೂ ಇದೆ.

ಪಂಜಾಬ್‌ನಲ್ಲಿ ಆಗಿದ್ದೇನು?

ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪಂಜಾಬ್‌ಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರೈತರ ತಂಡವೊಂದು ಫ್ಲೈಓವರ್‌ವೊಂದರ ಮೇಲೆ ತಡೆಗಟ್ಟಿದ ಆತಂಕಕಾರಿ ಘಟನೆ ಬುಧವಾರ ನಡೆದಿತ್ತು. ಪರಿಣಾಮ, ಅತ್ಯಂತ ಬಿಗಿಭದ್ರತೆ ವ್ಯವಸ್ಥೆ ಹೊಂದಿರುವ ಪ್ರಧಾನಿ, ಫ್ಲೈಓವರ್‌ ಮೇಲೇ 20 ನಿಮಿಷಗಳನ್ನು ಅತಂತ್ರರಾಗಿ ಕಳೆದಿದ್ದರು. ಇದು ಪ್ರಧಾನಿಯಂತಹ ಅತಿಗಣ್ಯರ ವಿಷಯದಲ್ಲಿ ಕಂಡು ಕೇಳರಿಯದ ಭದ್ರತಾ ಲೋಪ ಎನ್ನಿಸಿಕೊಂಡಿದೆ.

ಇದರ ಬೆನ್ನಲ್ಲೇ ಮೋದಿ ಅವರು ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ದೆಹಲಿಗೆ ಮರಳಿದ್ದರು. ಘಟನೆಯನ್ನು ಅತ್ಯಂತ ಗಂಭೀರ ಎಂದಿರುವ ಕೇಂದ್ರ ಗೃಹ ಸಚಿವಾಲಯ, ಈ ಕುರಿತು ಪಂಜಾಬ್‌ ಸರ್ಕಾರದಿಂದ ವಿಸ್ತೃತ ವರದಿ ಕೇಳಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ತಾಕೀತು ಮಾಡಿದೆ. ಈ ನಡುವೆ, ಭಾರತೀಯ ಕಿಸಾನ್‌ ಯೂನಿಯನ್‌ (ಕ್ರಾಂತಿಕಾರಿ) ಎಂಬ ಸಂಘಟನೆ ಈ ಘಟನೆಯ ಹೊಣೆ ಹೊತ್ತಿದೆ.

PM Modi Security Breach: ಪ್ರಧಾನಿ ಭದ್ರತಾ ವೈಫಲ್ಯಕ್ಕೆ ಕೇಂದ್ರ ಪಡೆ ಕಾರಣ: ಖರ್ಗೆ

ಈ ನಡುವೆ, ಪ್ರಧಾನಿಗೆ ಸೂಕ್ತ ಭದ್ರತೆ ಕಲ್ಪಿಸುವಲ್ಲಿ ವಿಫಲವಾದ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಆದರೆ, ‘ಕೊನೆಯ ಕ್ಷಣದಲ್ಲಿ ಪ್ರಧಾನಿ ಸಂಚಾರವು ವಾಯು ಮಾರ್ಗದಿಂದ ರಸ್ತೆ ಮಾರ್ಗಕ್ಕೆ ಬದಲಾಯಿತು. ಆದರೂ ಪ್ರಧಾನಿಗಳ ಭದ್ರತೆಯಲ್ಲಿ ಲೋಪವಾಗಿಲ್ಲ. ಪ್ರತಿಭಟನಾಕಾರರು ಧರಣಿ ಕುಳಿತಿದ್ದ ಸ್ಥಳಕ್ಕಿಂತ ದೂರವೇ ಪ್ರಧಾನಿ ಬೆಂಗಾವಲು ವಾಹನ ನಿಲ್ಲಿಸಲಾಗಿತ್ತು’ ಎಂದು ಚನ್ನಿ ಸ್ಪಷ್ಟನೆ ನೀಡಿದ್ದಾರೆ.

ಈ ನಡುವೆ ಪ್ರಧಾನಿ ಮೋದಿ ಕಾರ್ಯಕ್ರಮ ಹಾಳುಗೆಡವಲು ಕಾಂಗ್ರೆಸ್‌ ಸರ್ಕಾರ ಎಲ್ಲಾ ತಂತ್ರ ಅನುಸರಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆರೋಪಿಸಿದ್ದರೆ, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಗೆ ಪಂಜಾಬ್‌ನ ಮಾಜಿ ಸಿಎಂ ಅಮರೀಂದರ್‌ ಸಿಂಗ್‌ ಒತ್ತಾಯಿಸಿದ್ದಾರೆ.

ಭದ್ರತಾ ಲೋಪ?:

ಪಾಕ್‌ ಗಡಿಗೆ ಹೊಂದಿಕೊಂಡ ಫಿರೋಜ್‌ಪುರದಲ್ಲಿ ರ‍್ಯಾಲಿ ಮತ್ತು ಹುಸೇನಿವಾಲಾದಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಲುವಾಗಿ ಮೋದಿ ಬುಧವಾರ ಬೆಳಗ್ಗೆ ಪಂಜಾಬ್‌ನ ಬಠಿಂಡಾಕ್ಕೆ ಬಂದಿಳಿದಿದ್ದರು. ಅಲ್ಲಿಂದ ಅವರು ಮೊದಲಿಗೆ ಹುಸೇನಿವಾಲಾಕ್ಕೆ ಕಾಪ್ಟರ್‌ ಮೂಲಕ ತೆರಳಬೇಕಿತ್ತು. ಆದರೆ ಪ್ರತಿಕೂಲ ವಾತಾವರಣ ಇದ್ದ ಹಿನ್ನೆಲೆಯಲ್ಲಿ ಸ್ಥಳದಲ್ಲೇ 20 ನಿಮಿಷ ಕಾದ ಪ್ರಧಾನಿ, ಬಳಿಕ 2 ಗಂಟೆ ಸಮಯ ತೆಗೆದುಕೊಳ್ಳುವ ರಸ್ತೆ ಮಾರ್ಗದಲ್ಲೇ ತೆರಳಲು ನಿರ್ಧರಿಸಿದ್ದರು. ರಸ್ತೆ ಸಂಚಾರಕ್ಕೆ ಎಲ್ಲಾ ಅಗತ್ಯ ಭದ್ರತಾ ಕ್ರಮ ಕೈಗೊಂಡ ಬಗ್ಗೆ ಪಂಜಾಬ್‌ ಡಿಜಿಪಿ ಕೂಡ ಖಚಿತಪಡಿಸಿದ್ದರು.

ಹೀಗೆ ಪ್ರಯಾಣ ಆರಂಭಿಸಿದ ಮೋದಿ, ಹುತಾತ್ಮರ ಸ್ಮಾರಕದಿಂದ 30 ಕಿ.ಮೀ ದೂರದಲ್ಲಿನ ಪ್ಯಾರೇನಾ ಗ್ರಾಮದ ಫ್ಲೈಓವರ್‌ ಒಂದರ ಮೇಲೆ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಎದುರಿನಲ್ಲಿ 20ಕ್ಕೂ ಹೆಚ್ಚು ಪ್ರತಿಭಟನಾಕಾರರ ತಂಡವೊಂದು ವಾಹನಗಳನ್ನು ಅಡ್ಡಗಟ್ಟಿನಿಲ್ಲಿಸಿದ್ದು ಕಂಡುಬಂದಿದೆ. ಕೂಡಲೇ ಪ್ರಧಾನಿ ಬೆಂಗಾವಲು ವಾಹನಗಳು ಸ್ಥಳದಲ್ಲೇ ವಾಹನ ನಿಲ್ಲಿಸಿದವು. ಬಳಿಕ ಸುಮಾರು 20 ನಿಮಿಷ ಪ್ರಧಾನಿ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಸ್ಥಳದಲ್ಲೇ ಆತಂಕದ ಪರಿಸ್ಥಿತಿ ಎದುರಿಸಿದರು. ಆಗ ಸ್ಥಳದಲ್ಲಿನ ಭಾರೀ ಭದ್ರತಾ ಲೋಪ ವಿಶ್ಲೇಷಿಸಿದ ಪ್ರಧಾನಿಗಳ ಭದ್ರತೆಯ ಉಸ್ತುವಾರಿ ಹೊತ್ತಿರುವ ಎಸ್‌ಪಿಜಿ ತಂಡ, ಮೋದಿ ಅವರನ್ನು ಮರಳಿ ವಿಮಾನ ನಿಲ್ದಾಣಕ್ಕೆ ವಾಪಸ್‌ ಕರೆತಂದಿತು. ಪರಿಣಾಮ ತಮ್ಮೆಲ್ಲ ಕಾರ‍್ಯಕ್ರಮ ರದ್ದು ಮಾಡಿ ಮೋದಿ ನವದೆಹಲಿಗೆ ಮರಳಿದರು.

ಭಾರೀ ಲೋಪ:

ಘಟನೆ ಕುರಿತು ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವಾಲಯ, ‘ಫೈಓವರ್‌ ಮೇಲೆ ಪ್ರಧಾನಿ 15-20 ನಿಮಿಷ ಸಿಕ್ಕಿಹಾಕಿಕೊಂಡಿದ್ದರು. ಪ್ರಧಾನಿ ಸಂಚಾರ ಕಾರ್ಯಕ್ರಮದ ಕುರಿತು ಮೊದಲೇ ಮಾಹಿತಿ ನೀಡಿದ್ದರೂ ಅವರ ಸಂಚಾರಕ್ಕೆ ಅಗತ್ಯವಾದ ವ್ಯವಸ್ಥೆ ಮತ್ತು ಪರ್ಯಾಯ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಿಕೊಂಡಿಲ್ಲ. ಶಿಷ್ಟಾಚಾರದ ಪ್ರಕಾರ, ವೈಮಾನಿಕ ಪ್ರವಾಸ ರದ್ದಾದರೆ, ರಸ್ತೆ ಸಂಚಾರಕ್ಕೆ ಸುಗಮ ವ್ಯವಸ್ಥೆ ಕಲ್ಪಿಸಲು ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜಿಸಿ ಪರ್ಯಾಯ ವ್ಯವಸ್ಥೆ ಸಿದ್ಧ ಮಾಡಿಟ್ಟುಕೊಳ್ಳಬೇಕು. ಆದರೆ ಅದು ಆಗಿಲ್ಲ. ಇದು ಪ್ರಧಾನಿಗಳ ಭದ್ರತೆಯಲ್ಲಿನ ಭಾರೀ ಲೋಪ. ಘಟನೆ ಕುರಿತು ತಕ್ಷಣವೇ ವರದಿಗೆ ಹಾಗೂ ಭದ್ರತಾ ಲೋಪಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ’ ಎಂದಿದೆ.

Follow Us:
Download App:
  • android
  • ios