INS Vikrant: ದೇಶಿ ಯುದ್ಧನೌಕೆ ವಿಕ್ರಾಂತ್ ಇಂದು ಲೋಕಾರ್ಪಣೆ
ನೌಕಾಪಡೆಗೆ ಇಂದು ಹೊಸ ಧ್ವಜ, ವಸಾಹತುಶಾಹಿ ನೆನಪಿಸುವ ಅಂಶಗಳಿಗೆ ಕೊಕ್, ದಶಕಗಳ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ಸರ್ಕಾರ
ಕೊಚ್ಚಿ(ಸೆ.02): ಸ್ವಾತಂತ್ರ್ಯ ಸಿಕ್ಕಿ 75 ವರ್ಷ ತುಂಬಿದರೂ, ಭಾರತೀಯ ನೌಕಾಪಡೆಯ ಧ್ವಜದಲ್ಲಿ ಇನ್ನೂ ಉಳಿದುಕೊಂಡಿದ್ದ ವಸಾಹತುಶಾಹಿ ಅಂಶಗಳನ್ನು ನೆನಪಿಸುವ ಅಂಶಗಳಿಗೆ ಇಂದು(ಶುಕ್ರವಾರ) ತೆರೆ ಬೀಳಲಿದೆ. ಭಾರತೀಯ ನೌಕಾಪಡೆ ಶುಕ್ರವಾರ ತನ್ನ ಧ್ವಜ ಅಳವಡಿಸಿಕೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ, ಕೊಚ್ಚಿಯಲ್ಲಿ ಐಎನ್ಎಸ್ ವಿಕ್ರಾಂತ್ ನೌಕೆಯನ್ನು ದೇಶಕ್ಕೆ ಸಮರ್ಪಿಸುವ ಕಾರ್ಯಕ್ರಮದಲ್ಲಿ ಹೊಸ ಧ್ವಜವನ್ನೂ ಅನಾವರಣಗೊಳಿಸಲಿದ್ದಾರೆ. ಭಾರತದ ಶ್ರೀಮಂತ ಕಡಲ ಪರಂಪರೆ ಅನುಸಾರವಾಗಿ ನೌಕಾಪಡೆಯ ಹೊಸ ಧ್ವಜವನ್ನು (ನಿಶಾನ್) ಅನ್ನು ವಿನ್ಯಾಸಗೊಳಿಸಲಾಗಿದ್ದು, ಹೊಸ ಧ್ವಜದಲ್ಲಿ ವಸಾಹತುಶಾಹಿ ಇತಿಹಾಸ ನೆನಪಿಸುವ ಸೇಂಟ್ ಜಾಜ್ರ್ ಕ್ರಾಸ್ ಕೈಬಿಡಲಾಗುತ್ತಿದೆ.
ನೌಕಾಪಡೆ ಇತಿಹಾಸ:
ಭಾರತದಲ್ಲಿ 1934ರ ಅ.2ರಂದು ‘ರಾಯಲ್ ಇಂಡಿಯನ್ ನೇವಿ’ ಎಂಬ ಹೆಸರಿನಲ್ಲಿ ನೌಕಾಪಡೆ ಆರಂಭಿಸಲಾಗಿತ್ತು. 1947ರಲ್ಲಿ ದೇಶ ವಿಭಜನೆ ವೇಳೆ ‘ರಾಯಲ್ ಇಂಡಿಯನ್ ನೇವಿ’ಯನ್ನು ‘ರಾಯಲ್ ಇಂಡಿಯನ್ ನೇವಿ’ ಮತ್ತು ‘ರಾಯಲ್ ಪಾಕಿಸ್ತಾನ್ ನೇವಿ’ಯೆಂದು ವಿಜಭಿಸಲಾಗಿತ್ತು. ಇನ್ನು 1950ರ ಜ. 26ಕ್ಕೆ್ಕ ದೇಶವನ್ನು ಗಣರಾಜ್ಯ ಎಂದು ಘೋಷಿಸಿದ ಬಳಿಕ ‘ರಾಯಲ್’ ಪದವನ್ನು ಕಿತ್ತುಹಾಕಿ ಕೇವಲ ‘ಭಾರತೀಯ ನೌಕಾಪಡೆ’ ಎಂಬ ಹೆಸರನ್ನು ಮಾತ್ರ ಉಳಿಸಿಕೊಳ್ಳಲಾಯಿತು.
ವಸಾಹತುಶಾಹಿ ವಿರುದ್ಧ ಮೋದಿ ದಿಟ್ಟ ಹೆಜ್ಜೆ, ನೌಕಾಪಡೆಯ ಸೇಂಟ್ ಜಾರ್ಜ್ ಕ್ರಾಸ್ ಕೈಬಿಟ್ಟ ಕೇಂದ್ರ!
ಹೊಸ ಧ್ವಜ ಏಕೆ?:
ಹಾಲಿ ಇರುವ ನೌಕಾಪಡೆ ಧ್ವಜವು ಬಿಳಿಯ ಬಣ್ಣದಲ್ಲಿದ್ದು, ಲಂಬ ಮತ್ತು ಅಡ್ಡವಾಗಿ ಕೆಂಪುಬಣ್ಣದ ಪಟ್ಟಿಗಳನ್ನು ಒಳಗೊಂಡಿದೆ. ಇದನ್ನೇ ಸೇಂಟ್ ಜಾಜ್ರ್ ಕ್ರಾಸ್ ಎನ್ನಲಾಗುತ್ತದೆ. ಈ ಕ್ರಾಸ್ ಸಂಧಿಸುವ ಜಾಗದಲ್ಲಿ ಅಶೋಕ ಚಕ್ರವುಳ್ಳ ಸಿಂಹದ ರಾಷ್ಟ್ರೀಯ ಲಾಂಛನವಿದೆ. ಜೊತೆಗೆ ಧ್ವಜದಲ್ಲಿನ 4 ಭಾಗಗಳ ಪೈಕಿ ಒಂದರಲ್ಲಿ ಭಾರತದ ರಾಷ್ಟ್ರಧ್ವಜವಿದೆ. ಆದರೆ ಸೇಂಟ್ ಜಾಜ್ರ್ ಕ್ರಾಸ್, ಈಗಲೂ ಭಾರತಕ್ಕೆ ತಾನು ವಸಾಹತುಶಾಹಿ ಆಡಳಿತಕ್ಕೆ ಒಳಪಟ್ಟಿದ್ದನ್ನು ನೆನಪಿಸುವ ಕೆಲಸ ಮಾಡುತ್ತಿದೆ. ಹೀಗಾಗಿ ಅದನ್ನು ಬದಲಾಯಿಸಬೇಕು ಎಂಬ ಬೇಡಿಕೆ ಇತ್ತು. ಆ ಬೇಡಿಕೆಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ, ಇದೀಗ ಸೇಂಟ್ ಜಾಜ್ರ್ ಕ್ರಾಸ್ ಕೈಬಿಟ್ಟು ಹೊಸ ಧ್ವಜ ರೂಪಿಸಿದೆ.
ಹಲವು ಕಾಮನ್ವೆಲ್ತ್ ದೇಶಗಳು ಈಗಾಗಲೇ ಸೇಂಟ್ ಜಾರ್ಜ್ ಕ್ರಾಸ್ ಅನ್ನು ಕೈಬಿಟ್ಟು, ತಮ್ಮದೇ ಆದ ರೀತಿಯ ಧ್ವಜ ರೂಪಿಸಿಕೊಂಡಿವೆ. ದಶಕಗಳ ಬಳಿಕ ಭಾರತ ಕೂಡಾ ಇತರೆ ಕಾಮನ್ವೆಲ್ತ್ ದೇಶಗಳ ಹಾದಿ ಹಿಡಿದಿದೆ.