ಬಿಜೆಪಿ ನಾಯಕರು ಈಗ ಪ್ರಧಾನಿ ಬರುತ್ತಿದ್ದಂತೆ ರೊಚ್ಚಿಗೆದ್ದಿದ್ದು, ಸ್ಥಳೀಯಾಡಳಿತದ ಮೂಲಕ ಕಿತ್ತು ಹೋಗಿರುವ ರಸ್ತೆಗಳಿಗೆ ತೇಪೆ ಹಾಕುವ ಕಾರ್ಯ ನಡೆಯುತ್ತಿದೆ. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಕಾರಣವಾಗಿದೆ. 

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸೆ. 2 ರಂದು ಕರಾವಳಿ ನಗರಿ ಮಂಗಳೂರಿಗೆ ಭೇಟಿ ನೀಡಲಿದ್ದಾರೆ ಈ ಹಿನ್ನೆಲೆಯಲ್ಲಿ ಭರದ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ. ಪ್ರಧಾನಿಯವರ ಸಾರ್ವಜನಿಕ ಸಮಾವೇಶ ನಡೆಯಲಿರುವ ಗೋಲ್ಡ್‌ ಫಿಂಚ್‌ ಸಿಟಿ ಮೈದಾನದಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸುತ್ತಿದೆ. ಈ ನಡುವೆ ಇತ್ತ ಸರಣಿ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಹತ್ಯೆ ಪ್ರಕರಣ ಹಾಗೂ ಕ್ಷೇತ್ರದ ಬಗ್ಗೆ ಸ್ಥಳೀಯ ಕೆಲ ಜನಪ್ರತಿನಿಧಿಗಳ ಅಸಡ್ಡೆಯಿಂದ ಕುದ್ದು ಹೋಗಿರುವ ಬಿಜೆಪಿ ತಳಮಟ್ಟದ ಕಾರ್ಯಕರ್ತರ ಮನಸ್ಸನ್ನು ಬದಲಿಸಲು ಮೋದಿ ಆಗಮನವನ್ನೇ ಬಳಸಿಕೊಳ್ಳಲು ಜಿಲ್ಲೆಯ ಬಿಜೆಪಿ ಸಂಸದರು, ಶಾಸಕರು, ಜನಪ್ರತಿನಿಧಿಗಳು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಉತ್ಸಾಹದಿಂದ ಓಡಾಡುತ್ತಿರುವ ಜನಪ್ರತಿನಿಧಿಗಳು ಕೆಲಸ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್‌ಗೆ ಕಾರಣವಾಗಿದೆ. ಸ್ವತಃ ಬಿಜೆಪಿ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು, ಮಂಗಳೂರಿನ ಜನಸಾಮಾನ್ಯರು, ಬಿಜೆಪಿ ಜನನಾಯಕರ ಟ್ರೋಲ್‌ನಲ್ಲಿ ತೊಡಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತ ಮಂಗಳೂರಿನಲ್ಲಿ ತೀವ್ರವಾದ ಮಳೆ ಹಾಗೂ ಕಳಪೆ ಕಾಮಗಾರಿಯಿಂದಾಗಿ ರಸ್ತೆಗಳೆಲ್ಲಾ ಕಿತ್ತು ಹೋಗಿದ್ದು, ಹೊಂಡದ ನಡುವೆ ರಸ್ತೆ ಹುಡುಕುವಂತಾಗಿದೆ. ನಮ್ಮದೇ ರಾಜ್ಯ ಸರ್ಕಾರ, ನಮ್ಮದೇ ಶಾಸಕರು ಸಂಸದರು, ನಮ್ಮದೇ ಕೇಂದ್ರ ಸರ್ಕಾರವಿದ್ದರೂ ನಮ್ಮೂರಿಗೆ ಸಂಚರಿಸಲು ಸಮರ್ಪಕವಾದ ರಸ್ತೆ ಇಲ್ಲ, ಇರುವ ರಸ್ತೆಗಳು ಸರಿ ಇಲ್ಲ, ಎಲ್ಲ ನಮ್ಮವರೇ ಇದ್ದರೂ ನಮ್ಮೂರಿನ ರಸ್ತೆಯನ್ನು ಸರಿ ಮಾಡಿಸಿಕೊಳ್ಳಲಾಗುತ್ತಿಲ್ಲ ಎಂಬುದು ಬಿಜೆಪಿ ಕಾರ್ಯಕರ್ತರಿಗೆ ನುಂಗಲಾರದ ತುತ್ತಾಗುತ್ತಿದೆ. ಬೇರೆಯವರ ಮುಂದೆ ತಮ್ಮ ಪಕ್ಷದ ನಾಯಕರ ಈ ಅಸಡೆಯಿಂದಾಗಿ ಅವರನ್ನು ಸಮರ್ಥಿಸಿಕೊಳ್ಳಲು ಆಗದೇ ಬಿಟ್ಟುಕೊಡಲು ಆಗದೇ ತೊಳಲಾಡುವಂತಹ ಸ್ಥಿತಿ ಸ್ಥಳೀಯ ಕಾರ್ಯಕರ್ತರದ್ದಾಗಿದೆ.

ಇಷ್ಟು ದಿನ ಸತ್ತಂತೆ ಇದ್ದ ಕೆಲ ಬಿಜೆಪಿ ನಾಯಕರು ಈಗ ಪ್ರಧಾನಿ ಬರುತ್ತಿದ್ದಂತೆ ರೊಚ್ಚಿಗೆದ್ದಿದ್ದು, ಸ್ಥಳೀಯಾಡಳಿತದ ಮೂಲಕ ಕಿತ್ತು ಹೋಗಿರುವ ರಸ್ತೆಗಳಿಗೆ ತೇಪೆ ಹಾಕುವ ಕಾರ್ಯ ನಡೆಯುತ್ತಿದೆ. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಕಾರಣವಾಗಿದೆ. ಜನ ಪ್ರಧಾನಿ ಮಂಗಳೂರಿನ ಪ್ರತಿ ರಸ್ತೆಯಲ್ಲೂ ಸಂಚರಿಸಬೇಕು ಎಂದು ಟ್ವಿಟ್ಟರ್‌ನಲ್ಲಿ ಮನವಿ ಮಾಡುತ್ತಿದ್ದಾರೆ. ಈ ಟ್ರೋಲ್‌ಗಳ ಕೆಲ ಸ್ಯಾಂಪಲ್‌ಗಳು ಇಲ್ಲಿವೆ ನೋಡಿ.

Scroll to load tweet…

ಪಂಚೆ ಉಟ್ಟುಕೊಂಡು ರಸ್ತೆಯಲ್ಲಿ ನಿಂತುಕೊಂಡು ಡಾಮರ್‌ ಹಾಕಿಸುತ್ತಿರುವಂತೆ ಸಂಸದ ನಳೀನ್‌ಕುಮಾರ್ ಕಟೀಲ್ ಅವರ ಫೋಟೋವನ್ನು ನೆಟ್ಟಿಗರು ಎಡಿಟ್ ಮಾಡಿ ಹಾಕುತ್ತಿದ್ದಾರೆ. 

ಹೀಗಾಗಿ ರೊಚ್ಚಿಗೆದ್ದ ಕಾರ್ಯಕರ್ತರ ಸಮಾಧಾನಪಡಿಸಲು ಹಾಗೂ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಭೇಟಿಯನ್ನು ಬಳಸಿಕೊಳ್ಳಲು ಮುಂದಾಗಿರುವ ಬಿಜೆಪಿ ಜನಪ್ರತಿನಿಧಿಗಳು ಪ್ರಧಾನಿ ಮೋದಿ ಅವರಿಗಿರುವ ಫೇಮ್‌ ಬಳಸಿಕೊಳ್ಳಲು ನಿರ್ಧರಿಸಿದ್ದು, ಮೋದಿ ಸಮಾವೇಶಕ್ಕೆ ಲಕ್ಷಕ್ಕೂ ಅಧಿಕ ಮಂದಿಯನ್ನು ಸೇರಿಸಲು ನಿರ್ಧರಿಸಿದೆ. ಈ ಕುರಿತಂತೆ ಜಿಲ್ಲೆ, ತಾಲೂಕು ಗ್ರಾಮ ಮಟ್ಟದಲ್ಲಿ ಸಭೆ ನಡೆಯುತ್ತಿದ್ದು, ದಕ್ಷಿಣ ಕನ್ನಡ ಮಾತ್ರವಲ್ಲದೇ ಸಮೀಪದ ಜಿಲ್ಲೆಗಳಾದ ಉಡುಪಿ ಕೊಡಗು ಕಾಸರಗೋಡು ಜಿಲ್ಲೆಗಳಿಂದಲೂ ಜನರನ್ನು ಕರೆಸಲು ಬಿಜೆಪಿ ಮುಂದಾಗಿದೆ.