ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಸೇನೆಗೆ ಫ್ರೀ ಹ್ಯಾಂಡ್ ನೀಡಿದ ಪ್ರಧಾನಿ ಮೋದಿ!

Synopsis
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ದಾಳಿಯ ಮಾಸ್ಟರ್ ಮೈಂಡ್ ಪಾಕಿಸ್ತಾನದ ಮಾಜಿ ಎಸ್ಎಸ್ಜಿ ಕಮಾಂಡರ್ ಹಾಶಿಂ ಮೂಸಾ ಎಂದು ಗುಪ್ತಚರ ಸಂಸ್ಥೆಗಳು ತಿಳಿಸಿವೆ.
ನವದೆಹಲಿ (ಏ.29): ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬೆನ್ನಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆದಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಸಭೆಯಲ್ಲಿ ಹಾಜರಿದ್ದರು. ಪ್ರಧಾನಿ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಅನಿಲ್ ಚೌಹಾಣ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಸಭೆ ಒಂದೂವರೆ ಗಂಟೆಗಳ ಕಾಲ ನಡೆಯಿತು.
ಈ ವೇಳೆ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಲು ಪ್ರಧಾನಿ ಮೋದಿ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ ಎಂದು ವರದಿಯಾಗಿದೆ. ಪಹಲ್ಗಾಮ್ ದಾಳಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕು, ಯಾವ ವಿಧಾನ, ಗುರಿ ಹಾಗೂ ಸಮಯವನ್ನು ಸೇನೆಯೇ ನಿರ್ಧರಿಸಬೇಕು ಎಂದು ತಿಳಿಸಿದ್ದಾರೆ. ಸೇನೆಯ ಸಾಮರ್ಥ್ಯದಲ್ಲಿ ನಮಗೆ ಸಂಪೂರ್ಣ ನಂಬಿಕೆ ಇದೆ. ಭಯೋತ್ಪಾದನೆಗೆ ಸೂಕ್ತ ಉತ್ತರ ನೀಡುವುದು ರಾಷ್ಟ್ರೀಯ ಸಂಕಲ್ಪವಾಗಿದೆ ಎಂದು ಹೇಳಿದ್ದಾರೆ.
ಸಭೆಯಲ್ಲಿ, ಭಯೋತ್ಪಾದನೆಗೆ ಬಲವಾದ ಪ್ರತಿಕ್ರಿಯೆ ನೀಡುವುದು ತಮ್ಮ ದೃಢ ರಾಷ್ಟ್ರೀಯ ಸಂಕಲ್ಪ ಎಂದು ಪ್ರಧಾನಿ ಮೋದಿ ರಕ್ಷಣಾ ಅಧಿಕಾರಿಗಳಿಗೆ ತಿಳಿಸಿದರು ಮತ್ತು ಭಾರತೀಯ ಸಶಸ್ತ್ರ ಪಡೆಗಳ ವೃತ್ತಿಪರ ಸಾಮರ್ಥ್ಯಗಳಲ್ಲಿ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.
ಇತ್ತೀಚಿನ "ಮನ್ ಕಿ ಬಾತ್" ಭಾಷಣದಲ್ಲಿ, ಪಹಲ್ಗಾಮ್ ದಾಳಿಯ "ದುಷ್ಕರ್ಮಿಗಳು ಮತ್ತು ಪಿತೂರಿ ಮಾಡಿದವರಿಗೆ" "ಅತ್ಯಂತ ಕಠಿಣ ಪ್ರತಿಕ್ರಿಯೆ ನೀಡಲಾಗುವುದು" ಎಂದು ಪ್ರಧಾನಿ ಪುನರುಚ್ಚರಿಸಿದರು. "ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟದಲ್ಲಿ ಇಡೀ ಜಗತ್ತು 140 ಕೋಟಿ ಭಾರತೀಯರೊಂದಿಗೆ ನಿಂತಿದೆ. ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಸಿಗುತ್ತದೆ ಮತ್ತು ನ್ಯಾಯ ಸಿಗಲಿದೆ ಎಂದು ನಾನು ಮತ್ತೊಮ್ಮೆ ಭರವಸೆ ನೀಡುತ್ತೇನೆ" ಎಂದು ಹೇಳಿದ್ದರು. "ಈ ದಾಳಿಯ ಅಪರಾಧಿಗಳು ಮತ್ತು ಸಂಚುಕೋರರಿಗೆ ಅತ್ಯಂತ ಕಠಿಣ ಪ್ರತಿಕ್ರಿಯೆ ನೀಡಲಾಗುವುದು" ಎಂದು ಅವರು ಹೇಳಿದ್ದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಮಂಗಳವಾರ ಗೃಹ ಸಚಿವಾಲಯದಲ್ಲಿ ಮಹತ್ವದ ಸಭೆ ನಡೆಯಿತು. ಈ ಉನ್ನತ ಮಟ್ಟದ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಜೊತೆಗೆ ರಾಷ್ಟ್ರೀಯ ಭದ್ರತಾ ಪಡೆ (NSG), ಗಡಿ ಭದ್ರತಾ ಪಡೆ (BSF), ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಮತ್ತು ಸಶಸ್ತ್ರ ಸೀಮಾ ಬಲ್ (SSB) ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕೇಂದ್ರ ಸರ್ಕಾರದ ಸಚಿವ ಸಂಪುಟ ಸಭೆ ಬುಧವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಅದಕ್ಕೂ ಮುನ್ನ ಭದ್ರತಾ ಸಂಪುಟ ಸಮಿತಿಯ ಸಭೆ ಕೂಡ ನರೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಪಹಲ್ಗಾಮ್ ದಾಳಿಯ ನಂತರ ಇದು ಮೊದಲ ಸಚಿವ ಸಂಪುಟ ಸಭೆಯಾಗಿದೆ.
ಪಹಲ್ಗಾಮ್ ದಾಳಿಯ ಬಗ್ಗೆ ಗುಪ್ತಚರ ಸಂಸ್ಥೆಗಳು ಇಂದು ಪ್ರಮುಖ ಮಾಹಿತಿಯನ್ನು ನೀಡಿವೆ. ದಾಳಿಯ ಮಾಸ್ಟರ್ ಮೈಂಡ್ ಪಾಕಿಸ್ತಾನದ ಮಾಜಿ ಎಸ್ಎಸ್ಜಿ ಕಮಾಂಡರ್ ಹಾಶಿಂ ಮೂಸಾ ಎಂದು ಗುಪ್ತಚರ ಸಂಸ್ಥೆಯ ಮೂಲಗಳು ತಿಳಿಸಿವೆ. ಮೂಸಾ ಪ್ರಸ್ತುತ ಲಷ್ಕರ್-ಎ-ತೈಬಾ ಪರ ಕೆಲಸ ಮಾಡುತ್ತಿದ್ದಾನೆ.
ಭದ್ರತಾ ಪಡೆಗಳು ಮತ್ತು ಕಾಶ್ಮೀರೇತರರ ಮೇಲೆ ದಾಳಿ ನಡೆಸಲು ಲಷ್ಕರ್ ಅವರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸಿತ್ತು. ಮೂಸಾ ಅಕ್ಟೋಬರ್ 2024 ರಲ್ಲಿ ಗಂಡರ್ಬಾಲ್ನ ಗಗಂಗಿರ್ನಲ್ಲಿ ದಾಳಿ ನಡೆಸಿದ್ದ. ಇದರಲ್ಲಿ ಹಲವಾರು ಕಾರ್ಮಿಕರು ಮತ್ತು ಸ್ಥಳೀಯ ವೈದ್ಯರು ಪ್ರಾಣ ಕಳೆದುಕೊಂಡರು.
ಪ್ರಧಾನಿ ಮೋದಿ ನೇತೃತ್ವದಲ್ಲಿ ಪ್ರಮುಖ ಭದ್ರತಾ ಸಭೆ, ರಕ್ಷಣಾ ಸಚಿವ, NSA, ಸೇನಾ ಮುಖ್ಯಸ್ಥರು ಭಾಗಿ!
ದಾಳಿಯ ತನಿಖೆ ನಡೆಸುತ್ತಿರುವ ಎನ್ಐಎ ನಿರಂತರವಾಗಿ ದೃಶ್ಯವನ್ನು ಮರುಸೃಷ್ಟಿಸುತ್ತಿದೆ. ಭಯೋತ್ಪಾದಕರಿಗೆ ಸಹಾಯ ಮಾಡಿದ ಸ್ಥಳೀಯ ನಾಗರಿಕರನ್ನು ಸಂಸ್ಥೆ ಹುಡುಕುತ್ತಿದೆ. ಏಪ್ರಿಲ್ 22 ರಂದು ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ನಡೆದ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದರು.
ಪ್ರಧಾನಿಗೆ ಸರ್ ತನ್ ಸೇ ಜುಧಾ ಎಂದಿತಾ ಕಾಂಗ್ರೆಸ್: ಕೈ ಟ್ವಿಟ್ಗೆ ಬಿಜೆಪಿ ತೀವ್ರ ಆಕ್ರೋಶ