ಕೋಟ್ಯಾಂತರ ಹಿಂದೂಗಳ ಹೋರಾಟ ಸಾರ್ಥಕವಾಗಿದೆ. ಬರೋಬ್ಬರಿ 500 ವರ್ಷಗಳ ಬಳಿಕ ಆಯೋಧ್ಯೆ ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ನೆರವೇರಿದೆ. ಪ್ರಧಾನಿ ನರೇಂದ್ರ ಮೋದಿ ಭಗವಾನ್ ಬಾಲರಾಮನ ಮೂರ್ತಿಗೆ ಪ್ರಾಣಪ್ರತಿಷ್ಠೆ ಮಾಡಿದ್ದಾರೆ. 

ಆಯೋಧ್ಯೆ(ಜ.21) ದೇಶದೆಲ್ಲೆಡೆ ಸಂಭ್ರಮ, ಇಡೀ ವಿಶ್ವವೇ ಕಾಯುತ್ತಿದ್ದ ಆಯೋಧ್ಯೆ ಭವ್ಯ ರಾಮ ಮಂದಿರದ ಪ್ರಾಣಪ್ರತಿಷ್ಠೆ ನೆರವೇರಿದೆ. ಪ್ರಧಾನಿ ನರೇಂದ್ರ ಮೋದಿ ಭವ್ಯ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನೆರವೇರಿಸಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿದ ಪ್ರಧಾನಿ ಮೋದಿ, ಬೆಳ್ಳಿ ಛಾತ್ರ ಹಾಗೂ ವಸ್ತ್ರವನ್ನು ರಾಮಲಲ್ಲಾಗೆ ಅರ್ಪಿಸಿ ಪೂಜಾ ವಿಧಿವಿಧಾನದಲ್ಲಿ ಪಾಲ್ಗೊಂಡರು. ಆಯೋಧ್ಯೆ ಪ್ರಧಾನ ಅರ್ಚಕರ ಮಾರ್ಗದರ್ಶನದಂತೆ ಪ್ರಧಾನಿ ಮೋದಿ ತಮ್ಮ ಅಮೃತ ಹಸ್ತದಿಂದ ರಾಮಲಲ್ಲಾ ಪ್ರಾಣಪ್ರತಿಷ್ಠೆ ನೆರವೇರಿಸಿದ್ದಾರೆ. 

Add Asianetnews Kannada as a Preferred SourcegooglePreferred

ಗರ್ಭಗುಡಿ ಪ್ರವೇಶಕ್ಕೂ ಮೊದಲು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು. ಬಳಿಕ ಗರ್ಭಗುಡಿ ಪ್ರವೇಶಿಸಿ, ಪ್ರಾಣಪ್ರತಿಷ್ಠೆ ಪೂಜಾವಿಧಿಗಳನ್ನು ನೇರವೇರಿಸಿದ್ದಾರೆ.ಗರ್ಭಗುಡಿಯಲ್ಲಿ ಪ್ರಾಣಪ್ರತಿಷ್ಠೆಯ ಮುಖ್ಯ ಯಜಮಾನನಾಗಿ ವಿಧಿವಿಧಾನಗಳನ್ನು ನೇರವೇರಿಸಿದ್ದರೆ. ರಾಮ ಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಮಾರ್ಗದರ್ಶನದೊಂದಿಗೆ ಪ್ರಾಣಪ್ರತಿಷ್ಠೆ ನೆರವೇರಿದೆ. ಈ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ , ರಾಜ್ಯಾಪಾಲೆ ಆನಂದಿ ಬೆನ್ ಪಟೇಲ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಟ್ರಸ್ಟ್‌ನ ಪ್ರಧಾನ ಸದಸ್ಯರು ಗರ್ಭಗುಡಿಯಲ್ಲಿ ಉಪತಸ್ಥಿತರಿದ್ದರು.

ಪ್ರಾಣಪ್ರತಿಷ್ಠೆ ಹಾಗೂ ಪೂಜಾ ವಿಧಿವಿಧಾನಗಳ ವೇಳೆ ಪ್ರಧಾನಿ ಮೋದಿ ಕೂಡ ಮಂತ್ರ ಪಠಿಸಿ ರಾಮನಾಮ ಜಪ ಮಾಡಿದ್ದಾರೆ. 12.30ರ ವೇಳೆ ಪ್ರಾಣಪ್ರತಿಷ್ಠೆ ನೆರವೇರಿದೆ. ಕಲಮ ಹೂವುಗಳನ್ನು ಅರ್ಪಿಸಿದ ಮೋದಿ, ಪ್ರಾರ್ಥನೆ ಮಾಡಿದರು. 

ಪ್ರಾಣಪ್ರತಿಷ್ಠೆ ನೆರವೇರಿಸಿರುವ ಪ್ರಧಾನಿ ಮೋದಿ, ಆಯೋಧ್ಯೆಯಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ದೇಶದ ಜನತೆಯನ್ನುದ್ದೇಶಿ ಭಾಷಣ ಮಾಡಲಿದ್ದಾರೆ. 

ಪ್ರಾಣಪ್ರತಿಷ್ಠೆ ದಿನವಾದ ಇಂದು ಸಾರ್ವಜನಿಕರಿಗೆ ರಾಮ ಮಂದಿರ ಪ್ರವೇಶಕ್ಕೆ ಅವಕಾಶವಿಲ್ಲ. ಜನವರಿ 23ರಿಂದ ರಾಮಮಂದಿರ ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಿದೆ. ಶ್ರೀರಾಮ ಮಂದಿರದಲ್ಲಿರುವ ಸಿಂಹದ್ವಾರದ ಮೂಲಕ ಭಕ್ತರು ಪೂರ್ವ ದಿಕ್ಕಿನಿಂದ ಮಂದಿರವನ್ನು ಪ್ರವೇಶಿಸಬೇಕು. ನಂತರ ಸುಮಾರು 320 ಅಡಿಗಳ ದೂರ ಮುಂದಕ್ಕೆ, ಸಾಗಿದ ಬಳಿಕ ಗರ್ಭಗುಡಿ ದ್ವಾರವನ್ನು ಪ್ರವೇಶವಿದೆ. ಇಲ್ಲಿ ಶ್ರೀರಾಮನ ವಿಗ್ರಹದಿಂದ 25 ಅಡಿ ದೂರದಲ್ಲಿ ನಿಂತು ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಮುಖ್ಯದ್ವಾರದ ಮೂಲಕ ಪ್ರವೇಶ ಪಡೆದು, ಭಗವಾನ್ ರಾಮಲಲ್ಲಾ ದರ್ಶನ ಮಾಡಲು ಸರಿಸುಮಾರು 1 ಗಂಟೆ ಸಮಯ ತೆಗೆದುಕೊಳ್ಳಲಿದೆ. ದೇವಸ್ಥಾನದ ಮೊದಲ ಮಂಟಪದಿಂದ ಗರ್ಭಗುಡಿ ತಲುಪಲು 45 ನಿಮಿಷಗಳ ಕಾಲ ಬೇಕಾಗುತ್ತದೆ.