* ಗತಿಶಕ್ತಿ ಯೋಜನೆಗೆ ಅ.13ಕ್ಕೆ ಮೋದಿ ಚಾಲನೆ* ಕೇಂದ್ರ ಸರ್ಕಾರದ 16 ಸಚಿವಾಲಯಗಳು ಒಂದೇ ವೇದಿಕೆ ವ್ಯಾಪ್ತಿಗೆ* ಇಲಾ​ಖೆ​ಗಳ ನಡು​ವಿನ ಸಮ​ನ್ವ​ಯಕ್ಕೆ ವೆಬ್‌ ಪೋರ್ಟಲ್‌ ಆರಂಭ* ಮಾಹಿತಿಯ ಮುಕ್ತ ಹಂಚಿಕೆ, ಸಮಗ್ರ ಅಭಿವೃದ್ಧಿಗೆ ಹೊಸ ಯೋಜನೆ 

ನವದೆಹಲಿ(ಅ.10): ಕಳೆದ ಸ್ವಾತಂತ್ರ್ಯ ದಿನಾಚರಣೆ(Independence Day) ಭಾಷಣದ ವೇಳೆ ಪ್ರಸ್ತಾಪಿಸಿದ್ದ ಗತಿ ಶಕ್ತಿ ಯೋಜನೆಗೆ(Gati Shakti Yojna) ಪ್ರಧಾನಿ ನರೇಂದ್ರ ಮೋದಿ(Narendra Modi) ಅ.13ರಂದು ಚಾಲನೆ ನೀಡಲಿದ್ದಾರೆ. ಕೇಂದ್ರ ಸರ್ಕಾರದ 16 ಸಚಿವಾಲಯವನ್ನು ಒಂದೇ ವೇದಿಕೆಯ ವ್ಯಾಪ್ತಿಗೆ ತಂದಿರುವ ಮತ್ತು ಎಲ್ಲಾ ರಾಜ್ಯ ಸರ್ಕಾರಗಳನ್ನೂ ಸೇರ್ಪಡೆ ಮಾಡುವ ಉದ್ದೇಶ ಹೊಂದಿರುವ ಈ ಯೋಜನೆ ದೇಶದ ಮೂಲಸೌಕರ್ಯ ವಲಯದಲ್ಲಿ ಪರಿವರ್ತನೆಯ ಹೊಸ ಶಕೆಗೆ ಕಾರಣವಾಗಲಿದೆ ಎಂದು ಸರ್ಕಾರ ಭರವಸೆ ಇಟ್ಟುಕೊಂಡಿದೆ.

Add Asianetnews Kannada as a Preferred SourcegooglePreferred

ಗತಿ ಶಕ್ತಿಯ ವೇದಿಕೆಯುGati Shakti Yojna), ಇಡೀ ದೇಶದ ಭೂಭಾಗವನ್ನು 3ಡಿ ಮ್ಯಾಪಿಂಗ್‌ಗೆ ಒಳಪಡಿಸಿದ ಭೌಗೋಳಿಕ ಮಾಹಿತಿಯ ಟೂಲ್‌ ಒಳಗೊಂಡಿದೆ. ಜೊತೆಗೆ ಕೇಂದ್ರ ಸರ್ಕಾರದ 16 ಸಚಿವಾಲಯಗಳು ಇದುವರೆಗೆ ಕೈಗೊಂಡ ಎಲ್ಲಾ ಯೋಜನೆಗಳ ಮಾಹಿತಿ ಮತ್ತು 2025ರವರೆಗೂ ಕೈಗೊಳ್ಳಲು ಉದ್ದೇಶಿಸಿರುವ ಯೋಜನೆಯ ಮಾಹಿತಿಯನ್ನೂ ಹೊಂದಿದೆ.

ಹೀಗೆ ಯೋಜನೆ ವ್ಯಾಪ್ತಿಗೆ ಬರುವ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳು, ತಮ್ಮ ತಮ್ಮ ಸಚಿವಾಲಯ ಅಥವಾ ರಾಜ್ಯದ ವ್ಯಾಪ್ತಿಯಲ್ಲಿ ಯಾವುದೇ ಹೊಸ ಯೋಜನೆ ಕೈಗೊಳ್ಳುವ ಮೊದಲು ಇತರೆ ಸಚಿವಾಲಯಗಳ ಅದೇ ಸ್ಥಳದಲ್ಲಿ ಕೈಗೊಳ್ಳುತ್ತಿರುವ ಯೋಜನೆಗಳ ಮಾಹಿತಿಯನ್ನು ಪಡೆದುಕೊಳ್ಳಬಹುದು. ಕಾರಣ, ಇಡೀ ವೇದಿಕೆಯ ಮಾಹಿತಿಯು ಎಲ್ಲರಿಗೂ ಮುಕ್ತವಾಗಿ ಲಭ್ಯವಿರುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಎಲ್ಲಾ ಮೂಲಸೌಕರ್ಯ ಯೋಜನೆಗಳನ್ನು ಯೋಜಿತ ರೀತಿಯಲ್ಲಿ, ವಿಶ್ವದರ್ಜೆಯಲ್ಲಿ ಜಾರಿಗೊಳಿಸಲು ಅನುವಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಸದ್ಯ ಈ ಯೋಜನೆಯಡಿ ರೈಲ್ವೆ, ಹೆದ್ದಾರಿ, ಟೆಲಿಕಾಂ, ಹಡಗು, ಇಂಧನ, ಪೆಟ್ರೋಲಿಯಂ, ವಿಮಾನಯಾನ ಮೊದಲಾದ ಸಚಿವಾಲಯಗಳು ಸೇರ್ಪಡೆಯಾಗಿವೆ.

ಉದ್ದೇಶ ಏನು?:

ಹೆಚ್ಚು ಯೋಜನಾಬದ್ಧವಾಗಿ ಕಾಮಗಾರಿ ಪೂರ್ಣ, ಮಾಹಿತಿಯ ಮುಕ್ತ ಹಂಚಿಕೆ, ದೇಶದ ಸಂಪನ್ಮೂಲಗಳ ಸದ್ಭಳಕೆ ಮೂಲಕ ವಿಶ್ವದರ್ಜೆಯ ಮೂಲಸೌಕರ್ಯ ಕಲ್ಪಿಸುವುದು ಮತ್ತು ಈ ಮೂಲಕ ಜನಸಾಮಾನ್ಯರಿಗೆ ಗರಿಷ್ಠ ಲಾಭ ತಲುಪಿಸುವುದು ಯೋಜನೆಯ ಮೂಲ ಉದ್ದೇಶವಾಗಿದೆ. ಹೀಗಾಗಿಯೇ ಅ.13ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಮನವಿ ಮಾಡಿದೆ. ಈ ಕಾರ್ಯಕ್ರಮದ ಬಳಿಕ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು, ರಾಜ್ಯದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸುವ ಮೂಲಕ ಇಡೀ ಯೋಜನೆಯ ಉದ್ದೇಶ, ಅದರ ಲಾಭಗಳ ಕುರಿತು ಮಾಹಿತಿ ನೀಡಲಿದ್ದಾರೆ. ಎರಡು ದಿನಗಳ ಕಾಲ ನಡೆಯಲಿರುವ ಈ ಸಮಾಲೋಚನಾ ಸಮ್ಮೇಳನದಲ್ಲಿ ಖಾಸಗಿ ಸಂಸ್ಥೆಗಳು, ವಿವಿಧ ವಿಷಯವಾರು ತಜ್ಞರೂ ಪಾಲ್ಗೊಳ್ಳಲಿದ್ದಾರೆ.

ಉತ್ತಮ ಮಾಹಿತಿಯು ಉತ್ತಮ ನಿರ್ಧಾರಕ್ಕೆ ಕಾರಣವಾಗಬಲ್ಲದು ಎಂಬ ನೀತಿಯಡಿ, ವೇದಿಕೆಯಡಿ ಬರುವ ಎಲ್ಲಾ 16 ಸಚಿವಾಲಯಗಳು ಮತ್ತು ರಾಜ್ಯಗಳು, ಇತರರು ಎಲ್ಲಿ, ಯಾವಾಗ, ಯಾವ ರೀತಿಯ ಯೋಜನೆ ಜಾರಿಗೊಳಿಸುತ್ತಿದ್ದಾರೆ ಎಂಬ ತಾಜಾ ಮಾಹಿತಿಯನ್ನು ಪಡೆಯುವ ಮೂಲಕ ಅದಕ್ಕೆ ಅನುಸಾರವಾಗಿ ತಮ್ಮ ಯೋಜನೆಗಳನ್ನು ಜಾರಿಗೊಳಿಸಬಹುದು ಅಥವಾ ಅದಕ್ಕೆ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸಬಹುದು.

ಹೊಸ ತಲೆಮಾರಿನ ಮೂಲಸೌಕರ್ಯ ಮತ್ತು ಅಮಿತ ಬಹುಸ್ತರದ ಸಂಪರ್ಕ ವ್ಯವಸ್ಥೆಯ ಮೂಲಕ ದೇಶವನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಅನುವು ಮಾಡಿಕೊಡುವುದು ಯೋಜನೆಯ ಮೂಲ ಚಿಂತನೆಯಾಗಿದೆ. ಜೊತೆಗೆ ಯೋಜನೆಯ ಯಶಸ್ವಿ ಜಾರಿಯು ಸ್ಥಳೀಯ ಉತ್ಪಾದಕರು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಅನುವು ಮಾಡಿಕೊಡಲಿದೆ ಮತ್ತು ಹೊಸ ಆರ್ಥಿಕ ವಲಯ ಸೃಷ್ಟಿಗೆ ಕಾರಣವಾಗಲಿದೆ. ಅಲ್ಲದೆ ಯೋಜನೆ ಸಚಿವಾಲಯಗಳ ನಡುವಿನ ಮುಕ್ತ ಮಾಹಿತಿ ಹಂಚಿಕೆಯ ಕೊರತೆಯನ್ನು ನೀಗಿಸಲಿದೆ. ಈ ಮೂಲಕ ಎಲ್ಲಾ ಸಚಿವಾಲಯಗಳು ಯೋಜಿತ ರೀತಿಯಲ್ಲಿ ಸಮಗ್ರ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಜಾರಿಗೆ ಅನುವು ಮಾಡಿಕೊಡಲಿದೆ ಎಂದು ಸರ್ಕಾರ ನಿರೀಕ್ಷೆ ಇಟ್ಟುಕೊಂಡಿದೆ.

ಏನಿದು ಯೋಜ​ನೆ?

ಕೇಂದ್ರ ಮಾಹಿತಿ ತಂತ್ರ​ಜ್ಞಾನ ಇಲಾಖೆ ಅಡಿಯ ನ್ಯಾಷ​ನಲ್‌ ಇನ್ಸ್‌​ಟಿ​ಟ್ಯೂಟ್‌ ಆಫ್‌ ಸ್ಪೇಸ್‌ ಅಪ್ಲಿ​ಕೇ​ಷ​ನ್ಸ್‌ , ಒಂದು ಭೌಗೋ​ಳಿಕ ಮಾಹಿ​ತಿಯ ವೆಬ್‌​ಸೈಟ್‌ ಆರಂಭಿ​ಸ​ಲಿದೆ. ಇದ​ರಲ್ಲಿ, ಪ್ರಗ​ತಿ​ಯ​ಲ್ಲಿ​ರು​ವ ದೇಶದ ಎಲ್ಲ ಮೂಲ​ಸೌ​ಕರ‍್ಯ ಯೋಜ​ನೆ​ಗಳ ಮಾಹಿತಿ ಇರು​ತ್ತ​ದೆ. ಎಲ್ಲ ರಾಜ್ಯ​ಗಳು ಹಾಗೂ ಕೇಂದ್ರದ ವಿವಿಧ ಇಲಾ​ಖೆ​ಗ​ಳಿಗೆ ಆ ಕ್ಷಣದ ಯೋಜ​ನೆಯ ಮಾಹಿತಿ ಇದ​ರಲ್ಲಿ ಲಭಿ​ಸು​ತ್ತದೆ. ಇದ​ರಿಂದ ರಾಜ್ಯ-ಕೇಂದ್ರದ ನಡುವೆ ಸಮ​ನ್ವ​ಯತೆ ಉತ್ತ​ಮ​ಗೊ​ಳ್ಳು​ತ್ತದೆ ಹಾಗೂ ಯೋಜ​ನೆ​ಗಳು ಬೇಗ ಮುಗಿ​ಯಲು ಸಹ​ಕಾ​ರಿ​ಯಾ​ಗು​ತ್ತ​ದೆ.