ಪ್ರಧಾನಿ ನರೇಂದ್ರ ಮೋದಿ ಜೂನ್ 4 ರಂದು ಪೂರ್ಣ ಮಂತ್ರಿಮಂಡಲ ಸಭೆ ಕರೆದಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜೂ.4ರಂದು (ಬುಧವಾರ) ಇಡೀ ಮಂತ್ರಿ ಪರಿಷತ್ ಸಭೆ ಆಯೋಜಿಸಿದ್ದಾರೆ. ಭಾರತವು ಆಪರೇಷನ್ ಸಿಂದೂರ ಅಡಿಯಲ್ಲಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿದ ನಂತರ ಇಂತಹ ಮೊದಲ ಸಭೆ ಇದಾಗಿದೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇತ್ತೀಚಿನ ದಶಕಗಳಲ್ಲಿ ಭಾರತದ ಅತಿದೊಡ್ಡ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಒಂದಾದ ಆಪರೇಷನ್ ಸಿಂದೂರ ಕುರಿತು ಸಭೆಯಲ್ಲಿ ವಿವರಣೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಇದೇ ವೇಳೆ, ಮೋದಿ-3 ಸರ್ಕಾರಕ್ಕೆ ಜೂ.9ರಂದು 1 ವರ್ಷವಾಗಲಿದ್ದು, ಈ ವೇಳೆ ವರ್ಷಾಚರಣೆ ಬಗ್ಗೆ ಕಾರ್ಯತಂತ್ರ ಹೆಣೆಯುವ ಬಗ್ಗೆಯೂ ಚರ್ಚೆ ನಡೆಯುವ ಸಂಭವವಿದೆ.
ಏ.22 ರಂದು ಕಾಶ್ಮೀರದ ಪಹಲ್ಗಾಂನಲ್ಲಿ 26 ಪ್ರವಾಸಿಗರನ್ನು ಉಗ್ರರು ಹತ್ಯೆ ಮಾಡಿದ್ದರು. ಈ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 9 ಉಗ್ರರ ನೆಲೆ ನಾಶ ಮಾಡಲು ಭಾರತ ಆಪರೇಷನ್ ಸಿಂದೂರ ನಡೆಸುತ್ತು. ನಂತರ ಅನೇಕ ಪಾಕ್ ವಾಯುರಕ್ಷಣಾ ವ್ಯವಸ್ಥೆ ಹಾಗೂ ವಾಯುನೆಲೆಗಳನ್ನೂ ಭಾರತ ನಾಶ ಮಾಡಿತ್ತು.
ದೇಶಭಕ್ತರಾಗಿರುವುದು ಅಷ್ಟೊಂದು ಕಷ್ಟವೇ?: ಸ್ವ ಪಕ್ಷೀಯರ ವಿರುದ್ಧವೇ ಕಾಂಗ್ರೆಸ್ಸಿಗ ಖುರ್ಷಿದ್ ಬೇಸರ
ನವದೆಹಲಿ: ಆಪರೇಷನ್ ಸಿಂದೂರದ ಬಳಿಕ ಜಾಗತಿಕವಾಗಿ ಉಗ್ರ ಪೋಷಕ ಪಾಕಿಸ್ತಾನದ ಬಣ್ಣ ಬಯಲು ಮಾಡಲು ಸರ್ವಪಕ್ಷ ನಿಯೋಗದ ಭಾಗವಾಗಿ ಮಲೇಷ್ಯಾಕ್ಕೆ ತೆರಳಿರುವ ಕಾಂಗ್ರೆಸ್ ಸಂಸದ ಸಲ್ಮಾನ್ ಖುರ್ಷಿದ್, ಸ್ವಂತ ಪಕ್ಷದ ನಡೆ ನುಡಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಹಾಗೂ ಒಗ್ಗಟ್ಟು ಕೇವಲ ವಿದೇಶದಲ್ಲಿದ್ದರೆ ಸಾಲದು ಎಂದು ಟಾಂಗ್ ನೀಡಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಉಗ್ರವಾದದ ವಿರುದ್ಧ ಭಾರತದ ಸಂದೇಶವನ್ನು ಜಗತ್ತಿಗೆ ರವಾನಿಸಲು ಈಗ ಅಭಿಯಾನ ನಡೆಯುತ್ತಿದೆ. ಆದರೆ ಮನೆಯಲ್ಲಿಯೇ (ಭಾರತದಲ್ಲಿ) ಇರುವ ಜನರು ರಾಜಕೀಯ ನಿಷ್ಠೆಯನ್ನು ಲೆಕ್ಕ ಹಾಕುತ್ತಿದ್ದಾರೆ. ದೇಶಭಕ್ತರಾಗಿರುವುದು ಅಷ್ಟೊಂದು ಕಷ್ಟವೇ? ಎಂದು ಬರೆದುಕೊಂಡಿದ್ದಾರೆ.
ಭಾನುವಾರ ಮಲೇಷ್ಯಾದ ರಾಜಧಾನಿ ಕೌಲಾಲಂಪುರದಲ್ಲಿ ಮಾತನಾಡಿದ್ದ ಅವರು, ‘ಭಾರತ ಏಕಧ್ವನಿಯಿಂದ ಉಗ್ರವಾದ ಇನ್ನಿಲ್ಲ ಎನ್ನುತ್ತಿದೆ. ಈ ಏಕತೆ ಕೇವಲ ವಿದೇಶದಲ್ಲಿದ್ದರೆ ಸಾಲದು, ಸ್ವದೇಶಕ್ಕೆ ಮರಳಿದ ಮೇಲೂ ಕಂಡುಬರಬೇಕು’ ಎಂದಿದ್ದರು. ಅಲ್ಲದೆ, ಇತ್ತೀಚೆಗೆ ಮೋದಿ ಸರ್ಕಾರವು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದನ್ನು ಶ್ಲಾಘಿಸಿದ್ದರು.
ಮತ್ತೆ 203 ಜನರಿಗೆ ಕೋವಿಡ್, 4 ಬಲಿ: ಒಟ್ಟು ಕೇಸ್ 3,961ಕ್ಕೆ ಏರಿಕೆ
ನವದೆಹಲಿ: ದೇಶದಲ್ಲಿ ಸೋಮವಾರ 203 ಜನರಲ್ಲಿ ಕೊರೋನಾ ಸೋಂಕು ಕಂಡುಬಂದಿದ್ದು, ಹೊಸ ಅಲೆಯಲ್ಲಿ ಸೋಂಕಿತರ ಸಂಖ್ಯೆ 3,961ಕ್ಕೇರಿದೆ. ದೆಹಲಿ, ತಮಿಳುನಾಡು, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ತಲಾ ಒಬ್ಬೊಬ್ಬರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಕೇರಳದಲ್ಲಿ ಅತಿ ಹೆಚ್ಚು ಸೋಂಕಿತರಿದ್ದು, ಸಂಖ್ಯೆ 1435ಕ್ಕೆ ತಲುಪಿದೆ. ಮಹಾರಾಷ್ಟ್ರದಲ್ಲಿ 506, ದೆಹಲಿಯಲ್ಲಿ 483, ಗುಜರಾತ್ನಲ್ಲಿ 338, ಪಶ್ಚಿಮ ಬಂಗಾಳದಲ್ಲಿ 331, ಕರ್ನಾಟಕದಲ್ಲಿ 253 ಹಾಗೂ ಉತ್ತರ ಪ್ರದೇಶದಲ್ಲಿ 157 ಕೋವಿಡ್ ಪ್ರಕರಣಗಳು ದಾಖಲಾಗಿವೆ.
