Asianet Suvarna News Asianet Suvarna News

ಅಟಲ್‌ ಟನಲ್, ಲೇಹ್ ಲಡಾಖ್‌ ಜನರಿಗೆ ಹೊಸ ಜೀವನ ಎಂದ ಮೋದಿ: ಶಿಕ್ಷಣ, ರಕ್ಷಣಾ ಇಲಾಖೆಗೆ 2 ಟಾಸ್ಕ್!

ಮಾಜಿ ಪ್ರಧಾನಿ ಅಟಲ್ ಕನಸು ಸಾಕಾರ|  ಸಮುದ್ರಮಟ್ಟದಿಂದ 10 ಸಾವಿರ ಅಡಿ ಎತ್ತರದಲ್ಲಿ ನಿರ್ಮಾಣವಾಗಿರುವ, ‘ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ’ ಮಾರ್ಗ ಉದ್ಘಾಟಿಸಿ ಮಾತನಾಡಿದ ಮೋದಿ|

PM Modi Speaks On Atal Tunnel Gives Two Tasks To Defence ANd Education Ministry pod
Author
Bangalore, First Published Oct 3, 2020, 11:40 AM IST

ಮನಾಲಿ(ಅ.03) ಸಮುದ್ರಮಟ್ಟದಿಂದ 10 ಸಾವಿರ ಅಡಿ ಎತ್ತರದಲ್ಲಿ ನಿರ್ಮಾಣವಾಗಿರುವ, ‘ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ’ ಎಂಬ ಹಿರಿಮೆಗೆ ಪಾತ್ರವಾಗಿರುವ 9.02 ಕಿ.ಮೀ ಉದ್ದದ ಮನಾಲಿ-ಲೇಹ್‌ ನಡುವಿನ ಸುರಂಗ ಮಾರ್ಗ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಕನಸಿನ ಯೋಜನೆಯಾಗಿದ್ದ 'ಅಟಲ್ ಟನಲ್' ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಈ ಸುರಂಗ ಮಾರ್ಗ ಉದ್ಘಾಟಿಸಿ ಮಾತನಾಡಿದ ಮೋದಿ ಈ ಸುರಂಗದಿಂದ ಹೊಸದಾಗಿ ರೂಪಿತಗೊಂಡ ಲೇಹ್ ಲಡಾಖ್‌ಗೂ ಹೊಸ ಜೀವನ ಸಿಗಲಿದೆ. ಎಂದಿದ್ದಾರೆ. ಇದೇ ವೇಳೆ ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಭಾಷಣದ ಪ್ರಮುಖ ಅಂಶಗಳು

* ಇಂದಿನ ದಿನ ಐತಿಹಾಸಿಕವಾಗಿದೆ. ಇಂದು ಕೇವಲ ಅಟಲ್‌ಜೀ ಮಾತ್ರವಲ್ಲ, ಇಂದು ಹಿಮಾಚಲದ ಕೋಟ್ಯಂತರ ಜನರ ದಶಕಗಳ ಕಾಯುವಿಕೆ ಮುಗಿದಿದೆ. ಇಂದು ಅಟಲ್‌ ಟನಲ್‌ ಲೋಕಾರ್ಪಣೆ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ.

* ನಾನು ಅಂದು ಸಂಘಟನೆಯ ಕಾರ್ಯ ನೋಡಿಕೊಳ್ಳುತ್ತಿದ್ದೆ. ಅಟಲ್‌ಜೀ ಮನಾಲಿಗೆ ಬಂದಾಗೆಲ್ಲಾ ಅವರನ್ನು ಭೇಟಿಯಾಗುತ್ತಿದ್ದೆ. ಒಂದು ದಿನ ನಾವು ಚಹಾ ಕುಡಿಯುತ್ತಿದ್ದಾಗ ಅಟಲ್‌ಜೀ ಈ ಬಗ್ಗೆ ಚರ್ಚಿಸಿದ್ದರು. ಅಂದಿನ ಸಂಕಲ್ಪ ಇಂದು ಸಿದ್ಧಿಯಾಗಿದೆ. ಇದಕ್ಕಿಂತ ಹೆಚ್ಚು ಖುಷಿ ಬೇರೆಯೊಂದಿಲ್ಲ

ಅಟಲ್ ಕನಸಿನ ಯೋಜನೆ, ವಿಶ್ವದ ಅತಿ ದೊಡ್ಡ ಸುರಂಗ ಮಾರ್ಗ ಉದ್ಘಾಟಿಸಿದ ಮೋದಿ!

* ಸಾಮಾಣ್ಯವಾಗಿ ಇಂತಹ ಯೋಜನೆ ಉದ್ಘಾಟನೆ ವೇಳೆ ಇದರ ನಿರ್ಮಾಣಕ್ಕೆ ಕಾರಣವಾದವರನ್ನು ಮರೆಯಲಾಗುತ್ತದೆ. ಆದರೆ ಇಲ್ಲಿ ಹೀಗಾಗಿಲ್ಲ. ಇದಕ್ಕಾಗಿ ಪರಿಶ್ರಮಿಸಿದ, ತಮ್ಮ ಪ್ರಾಣ ತ್ಯಾಗ ಮಾಡಿದ ಎಲ್ಲರನ್ನೂ ನೆನಪಿಸಲಾಗಿದೆ. ಇದಕ್ಕಾಗಿ ಶ್ರಮಿಸಿದವರೆಲ್ಲರಿಗೂ ನನ್ನ ನಮನ.

* ಈ ಸುರಂಗದಿಂದ ಹೊಸದಾಗಿ ರೂಪಿತಗೊಂಡ ಲೇಹ್ ಲಡಾಖ್‌ಗೂ ಹೊಸ ಜೀವನ ಸಿಗಲಿದೆ. ಇದರಿಂದ ಈ ಪ್ರದೇಶ ದೇಶದೊಂದಿಗೆ ಜೋಡಣೆಯಾಗಲಿದೆ

* ಸುರಂಗದಿಂದ ಸುಮಾರು ನಾಲ್ಕು ಗಂಟೆ ಪ್ರಯಾಣ ಕಡಿಮೆಯಾಗಲಿದೆ. ಇಲ್ಲಿನ ಜನರೇ ಈ ಸಮಯ ಕಡಿತವಾಗುವುದರ ಪ್ರಯೋಜನ ಅರಿಯಬಲ್ಲರು. ಅವರು ರಾಷ್ಟ್ರ ರಾಜಧಾನಿ ಸುಲಭವಾಗಿ ತಲುಪಬಹುದು. ಅಲ್ಲದೇ ಅಪಾಯವೂ ಕಡಿಮೆಯಾಗಲಿದೆ

ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ : ಮಾನಾಲಿ-ಲೇಹ್‌ ಪ್ರಯಾಣದಲ್ಲಿ 5 ತಾಸು ಇಳಿಕೆ !

* ಇದು ಇಡೀ ವಿಶ್ವಕ್ಕೇ ಹೊಸ ಬೆಳಕು ತೋರಿಸಲಿದೆ. ಹೀಗಾಗಿ ಹಿಮಾಚಲ, ಲೇಹ್, ಲಡಾಖ್‌ನ ಜನರಿಗೆ ಶುಭಾಶಯ.

* ಇದು ಗಡಿ ಭದ್ರತಾ ಪಡೆಗೂ ಬಲ ತುಂಬಲಿದೆ.

* 2002ರಲ್ಲಿ ಅಟಲ್‌ಜೀ ಈ ಯೋಜನೆಗೆ ಶಿಲಾನ್ಯಾಸ ಮಾಡಿದ್ದರು. ಆದರೆ ಇದಾದ ಬಳಿಕ ಈ ಯೋಜನೆಯನ್ನು ಮರೆಯಲಾಗಿತ್ತು. 2013ರವರೆಗೆ ಕೇವಲ ಒಂದೂವರೆ ಕಿ. ಮೀ ಕೆಲಸ ಮಾತ್ರವೇ ಆಗಿತ್ತು. ಒಂದು ವೇಳೆ ಅದೇ ವೇಗದಲ್ಲಿ ಕೆಲಸ ನಡೆದಿದ್ದರೆ ಈ ಸುರಂಗ 2040ರಲ್ಲಿ ಪೂರ್ಣಗೊಳ್ಳುತ್ತಿತ್ತು

* ದೇಶ ಅಬಿವೃದ್ಧಿ ಪಥದಲ್ಲಿ ಸಾಗಬೇಕೆಂದರೆ ವೇಗ ಹೆಚ್ಚಿಸಬೇಕಾಗುತ್ತದೆ. ಹೀಗಾಗೇ ಈ ಸುರಂಗ ಮಾರ್ಗ ಕಾರ್ಯದಲ್ಲಿ ವೇಗ ಹೆಚ್ಚಿಸಲಾಯ್ತು. ಹೀಗಾಗಿ ಕೇವಲ ಆರು ವರ್ಷದಲ್ಲಿ ಕೆಲಸ ಪೂರ್ಣವಾಯ್ತು.

* ನಿಧಾನಗತಿಯಿಂದ ದೇಶಕ್ಕೆ ಭಾರೀ ನಷ್ಟವಾಗುತ್ತದೆ. ಆರ್ಥಕವಾಗಿಯೂ ಹಿಂದೆ ಬೀಳುವಂತೆ ಮಾಡುತ್ತದೆ. ಜನರೂ ಸಂಕಷ್ಟ ಎದುರಿಸಬೇಕಾಗುತ್ತದೆ.

* ಒಂಭತ್ತೂವರೆ ಕೋಟಿಯಲ್ಲಿ ಈ ಕಾರ್ಯ ಮುಗಿಯುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಇದು ಈಗ ಮೂರು ಪಟ್ಟು ಹೆಚ್ಚಿನ ಖರ್ಚಿನಿಂದ ಪೂರ್ಣಗೊಂಡಿದೆ.

* ಸೌಲಭ್ಯ ಹಾಗೂ ಸಾಮಾಜಿಕ ದೃಷ್ಟಿಯಲ್ಲಿ ಅಗತ್ಯವಾಗಿದ್ದ ಯೋಜನೆಗಳನ್ನು ಕಡೆಗಣಿಸಲಾಗಿದೆ. ಇದಕ್ಕೆ ಡಜನ್‌ಗಟ್ಟಲೇ ಉದಾಹರಣೆ ನೀಡಬಹುದು.

* ಕಳೆದ ಆರು ವರ್ಷಗಳಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗಲು ಭಾರೀ ಪ್ರಯತ್ನ ಮಾಡಿದೆ. ವಿಶೇಷವಾಗಿ ಗಡಿ ಪ್ರದೇಶದೊಂದಿಗಿನ ಸಂಪರ್ಕ ಹೆಚ್ಚಿಸಲು ವಿಶೇಷವಾಗಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. 

* ಇದರಿಂದಾಗಿ ಜನಸಾಮಾನ್ಯರೊಂದಿಗೆ ಸೈನಿಕರಿಗೂ ಲಾಭವಾಗುತ್ತಿದೆ. ಚಳಿಗಾಲದಲ್ಲಿ ಅಗತ್ಯವಾಗಿ ಬೇಕಾದ ಎಲ್ಲಾ ಸೌಕರ್ಯಗಳನ್ನು ಲಭ್ಯವಾಗಿಸಲು ಇದು ಸಹಾಯಕವಾಗಿದೆ. 

* ದೇಶದ ಹಿತ ಕಾಪಾಡುವುದು ನಮ್ಮ ಪ್ರಾಥಮಿಕ ಕೆಲಸಗಳಲ್ಲಿ ಒಂದು.

* ನಾವು ತೆಗೆದುಕೊಂಡ ನಿರ್ಧಾರ ಜಾರಿಗೊಳಿಸುತ್ತೇವೆಂದು ನಾವು ಸಾಬೀತುಪಡಿಸಿದೆ. ದೇಶಕ್ಕಿಂತ ಪ್ರಮುಖವಾಗಿದ್ದು ಬೇರೆಯೊಂದಿಲ್ಲ ಎಂದು ತೋರಿಸಿದ್ದೇವೆ.

* ವರ್ಷಾನುಗಟ್ಟಲೇ ಅಧಿಕಾರದಲ್ಲಿದ್ದವರ ಹಿತದೃಷ್ಟಿ ನಮ್ಮ ಸೇನೆಗೆ ಮಾರಕವಾಗಿದೆ.

* ಇಂದು ದೇಶದಲ್ಲೇ ಆಧುನಿಕ ಶಸ್ತ್ರಾಸ್ತ್ರ ನಿರ್ಮಾಣ ನಿಟ್ಟಿನಲ್ಲಿ ಯೋಜನೆ ಜಾರಿಗೊಳಿಸಲಾಗಿದೆ. ಮೇಕ್‌ ಇನ್‌ ಇಂಡಿಯಾಗೆ ಒತ್ತು ನೀಡಲಾಗಿದೆ. ಅನೇ್ಕ ವಸ್ತುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ

* ಭಾರತ ವಿಶ್ವಮಟ್ಟದಲ್ಲಿ ಹೇಗೆ ಬದಲಾಗುತ್ತಿದೆಯೋ ಅದೇ ವೇಗದಲ್ಲಿ ನಾವು ಮುಂದುವರೆಯಬೇಕಾಗಿದೆ.

ರಕ್ಷಣಾ ಹಾಗೂ ಶಿಕ್ಷಣ ಸಚಿವಾಲಯಕ್ಕೆ ಮೋದಿ ಟಾಸ್ಕ್

ಈ ಸುರಂಗ ಕಾರ್ಯ ಇಂಜಿನಿಯರಿಂಗ್, ವರ್ಕ್ ಕಲ್ಚರ್ ವಿಚಾರದಲ್ಲಿ ವಿಭಿನ್ನವಾಗಿದೆ. ಈ ಕಾರ್ಯ ಆರಂಭವಾದಾಗಿನಿಂದ ಇದರಲ್ಲಿ ಕಾರ್ಯ ನಿರ್ವಹಿಸಿದವರೆಲ್ಲರೂ ಕನಿಷ್ಟ ಹದಿನೈದು ಸಾವಿರ ಮಂದಿ ಈ ಬಗ್ಗೆ ಬರೆಯಬೇಕಾಗಿದೆ. ಇದಕ್ಕೆ ಹ್ಯೂಮನ್ ಟಚ್ ನೀಡಿ. ಊಟವಿಲ್ಲದೇ ಪರದಾಡಿದ ದಿನಗಳಿರಬಹುದು, ಇಲ್ಲಿನ ಸ್ಥಳಿಯರು ಮಾಡಿದ ಸಹಾಯ ಹೀಗೆ ಎಲ್ಲವೂ ಇದರಲ್ಲಿರಲಿ. ಇದರಿಂದ ಸುರಂಗ ನಿರ್ಮಾಣದ ವೇಳೆ ಎದುರಾದ ಸವಾಲುಗಳೇನು ಎಂಬುವುದು ಜನರಿಗೆ ತಿಳಿಯುತ್ತದೆ. ಪ್ರತಿಯೊಬ್ಬರೂ ಆರು ಪುಟದಷ್ಟು ಬರೆದರೆ ಸಾಕು. ಇದನ್ನು ಡಾಕ್ಯಮೆಂಟ್ ಮಾಡಿಡಿ.

ಯೂನಿವರ್ಸಿಟಿಯ ಇಂಜಿನಿಯರಿಂಗ್ ಮಕ್ಕಳಿಗೆ ಕೇರ್ ಸ್ಟಡಿ ಕೆಲಸ ನೀಡಿ. ಪ್ರತಿ ವರ್ಷ ಎಂಟು ಮಕ್ಕಳ ತಂಡ ಇಲ್ಲಿಗೆ ಬಂದು ಕೇರ್ ಸ್ಟಡಿ ಮಾಡಲಿ. ಈ ಸುರಂಗದ ಇಂಜಿನಿಯರಿಂಗ್ ಜ್ಞಾನ ಮಕ್ಕಳಿಗೆ ಸಿಗಲೇ ಬೇಕು. ವಿಶ್ವಮಟ್ಟದ ವಿಶ್ವ ವಿದ್ಯಾನಿಲಯದ ಮಕ್ಕಳೂ ಇಲ್ಲಿಗೆ ಬರಲಿ. ಇದರಿಂದ ದೇಶದ ಶಕ್ತಿ ವಿಶ್ವಮಟ್ಟಕ್ಕೆ ಪರಿಚಯವಾಗಲಿ. ಇದೆಲ್ಲವನ್ನೂ ಪ್ರಿಂಟ್ ಮಾಡಬೇಕೆಂದಿಲ್ಲ. ಡಿಜಿಟಲ್ ರೂಪ ನೀಡಿ ಸಾಕು ಎಂದಿದ್ದಾರೆ.

ಅಟಲ್ ಟನಲ್ ವಿಶೇಷತೆಗಳು

- ಕುದುರೆ ಲಾಳಾಕೃತಿಯ ದ್ವಿಪಥ ಮಾರ್ಗವನ್ನು ಸುರಂಗ ಹೊಂದಿದೆ

- 8 ಮೀ. ಅಗಲದ ರಸ್ತೆ. 5.525 ಮೀ. ಎತ್ತರದ ವಾಹನ ಚಲಿಸಬಹುದು

- ನಿತ್ಯ 3000 ಕಾರು, 1500 ಲಾರಿಗಳ ಸಂಚಾರಕ್ಕೆ ಅವಕಾಶ

- ಗರಿಷ್ಠ 80 ಕಿ.ಮೀ. ವೇಗದಲ್ಲಿ ಹೋಗಬಹುದು

- ಸರ್ವಋುತು ಸುರಂಗ. ಹಿಮಪಾತ ವೇಳೆಯೂ ವಾಹನ ಸಂಚಾರ

- 150 ಮೀಟರ್‌ಗಳಿಗೊಂದು ಟೆಲಿಫೋನ್‌ ವ್ಯವಸ್ಥೆ

- ಪ್ರತೀ 1 ಕಿ.ಮೀ.ಗೊಂದು ಗಾಳಿಯ ಶುದ್ಧತೆಯ ಪರೀಕ್ಷಾ ವ್ಯವಸ್ಥೆ

- ಪ್ರತೀ 250 ಮೀಟರ್‌ಗೊಂದು ಬ್ರಾಡ್‌ಕಾಸ್ಟ್‌ ವ್ಯವಸ್ಥೆ, ಸಿಸಿ ಕ್ಯಾಮೆರಾ, ಸ್ವಯಂಚಾಲಿತ ಅನಾಹುತ ಘಟನೆ ಪತ್ತೆ ವ್ಯವಸ್ಥೆ

Follow Us:
Download App:
  • android
  • ios