ಅರುಣ್ ಜೇಟ್ಲಿ ಜನ್ಮ ಜಯಂತಿ: ಮೋದಿ, ಅಮಿತ್ ಶಾ ಸೇರಿ ಬಿಜೆಪಿ ನಾಯಕರಿಂದ ಶ್ರದ್ಧಾಂಜಲಿ!
ಅರುಣ್ ಜೇಟ್ಲಿ ಜನ್ಮ ಜಯಂತಿ| ದಿಗ್ಗಜ ನಾಯಕನ ನೆನಪಿಸಿಕೊಂಡ ಬಿಜೆಪಿ ನಾಯಕರು| ಜೇಟ್ಲಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪಿಎಂ ಮೋದಿ
ನವದೆಹಲಿ(ಡಿ.28): ಅಗಲಿದ ಬಿಜೆಪಿ ನಾಐಕ ಅರುಣ್ ಜೇಟ್ಲಿ ಜನ್ಮ ಜಯಂತಿ ಪ್ರಯುಕ್ತ ಟ್ವೀಟ್ ಮಾಡಿರುವ ಪಿಎಂ ಮೋದಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಅವರ ವ್ಯಕ್ತಿತ್ವ, ತಿಳುವಳಿಕೆ, ಕಾನೂನು ತಿಳುವಳಿಕೆ, ತ್ವರಿತ ಬುದ್ಧಿವಂತಿಕೆಯನ್ನು ಎಲ್ಲರೂ ನೆನಪಿಸಿಕೊಳ್ಳುತ್ತಾರೆ ಎನ್ನುವ ಮೂಲಕ ಪಿಎಂ ಮೋದಿ ನೆನಪಿಸಿಕೊಂಡಿದ್ದರೆ, ಇತರ ಬಿಜೆಪಿ ನಾಯಕರೂ ಜೇಟ್ಲಿಗೆ ನಮನ ಸಲ್ಲಿಸಿದ್ದಾರೆ.
ಅರುಣ್ ಜೇಟ್ಲಿ ಹಲವಾರು ವರ್ಷಗಳವರೆಗೆ ಪಕ್ಷದ ಪರ ಧ್ವನಿ ಎತ್ತುವ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು. ಜೊತೆಗೆ ಅವರೊಬ್ಬ ರಾಜಕೀಯದ ಬಗ್ಗೆ ಸೂಕ್ಷ್ಮ ತಿಳುವಳಿಕೆಯುಳ್ಳ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. 1952 ರಲ್ಲಿ ಜನಿಸಿದ್ದ ಅರುಣ್ ಜೇಟ್ಲಿ ಕಳೆದ ವರ್ಷ(2019)ರ ಆಗಸ್ಟ್ನಲ್ಲಿ ಕೊನೆಯುಸಿರೆಳೆದಿದ್ದರು.
ಇನ್ನು ಅರುಣ್ ಜೇಟ್ಲಿ ನೆನಪಿಸಿಕೊಂಡು ಟ್ವೀಟ್ ಮಾಡಿರುವ ಪಿಎಂ ಮೋದಿ 'ನಾನು ನನ್ನ ಮಿತ್ರ ಅರುಣ್ ಜೇಟ್ಲಿಯವರನ್ನು ಅವರ ಜನ್ಮ ಜಯಂತಿಯಂದು ನೆನಪಿಸಿಕೊಳ್ಳುತ್ತಿದ್ದೇನೆ. ಅವರ ಅದ್ಭುತ ವ್ಯಕ್ತಿತ್ವ, ತಿಳುವಳಿಕೆ, ಕಾನೂನಿನ ಕುರಿತಾದ ಜ್ಞಾನ ಹಾಗೂ ತ್ವರಿತ ಬುದ್ಧಿವಂತಿಕೆಯನ್ನು ಅವರೊಂದಿಗೆ ಆಪ್ತರಾಗಿದ್ದವರು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಅವರು ಭಾರತದ ಪ್ರಗತಿಗಾಗಿ ಬಹಳಷ್ಟು ಶ್ರಮ ಪಟ್ಟಿದ್ದಾರೆ' ಎಂದಿದ್ದಾರೆ.
ಗೃಹ ಸಚಿವ ಅಮಿತ್ ಶಾ ಕೂಡಾ ಟ್ವೀಟ್ ಮಾಡುತ್ತಾ 'ಜೇಟ್ಲಿ ಓರ್ವ ಅಸಾಧಾರಣ ಸಂಸದರಾಗಿದ್ದರು. ಅವರಂತಹ ಜ್ಞಾನ ಹಾಗೂ ಒಳನೋಟ ಇರುವವರು ಬಹಳ ಕಡಿಮೆ. ಅವರು ದೇಶದ ರಾಜಕೀಯ ಕ್ಷೇತ್ರಕ್ಕೆ ಯಾವತ್ತೂ ಉಳಿಯುವಂತಹ ಕೊಡುಗೆ ನೀಡಿದ್ದಾರೆ ಹಾಗೂ ಸಂಪೂರ್ಣ ಉತ್ಸಾಹ ಹಾಗೂ ಸಮರ್ಪಣಾ ಭಾವದಿಂದ ದೇಶದ ಸೇವೆ ಮಾಡಿದ್ದಾರೆ' ಎಂದಿದ್ದಾರೆ.
ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ಇನ್ನೂ ಹಲವಾರು ಗಣ್ಯರು ಜೇಟದ್ಲಿಯವರನ್ನು ನೆನಪಿಸಿಕೊಂಡಿದ್ದಾರೆ.