ಆಫ್ಘನ್ ಪರಿಸ್ಥಿತಿ ನಿಗಾಕ್ಕೆ ಉನ್ನತ ಹಂತದ ತಂಡ ರಚಿಸಿದ ಮೋದಿ!
* ಎಸ್. ಜೈಶಂಕರ್, ದೋವಲ್ ಸೇರಿ ಹಿರಿಯ ಅಧಿಕಾರಿಗಳಿರುವ ತಂಡ
* ಭಾರತೀಯರು, ಆಫ್ಘನ್ ಸಂತ್ರಸ್ತರ ರಕ್ಷಣೆಯೇ ಈ ತಂಡದ ಜವಾಬ್ದಾರಿ
* ಆಫ್ಘನ್ ಪರಿಸ್ಥಿತಿ ನಿಗಾಕ್ಕೆ ಉನ್ನತ ಹಂತದ ತಂಡ ರಚಿಸಿದ ಮೋದಿ
ನವದೆಹಲಿ(ಸೆ.01): ತಾಲಿಬಾನ್ ಕಪಿಮುಷ್ಟಿಗೆ ಸಿಲುಕಿದ ಅಷ್ಘಾನಿಸ್ತಾನದಲ್ಲಿ ಭಾರತದ ತಕ್ಷಣದ ಆದ್ಯತೆಗಳ ಮೇಲೆ ನಿಗಾ ವಹಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಹಂತದ ತಂಡವೊಂದನ್ನು ರಚನೆ ಮಾಡಿದ್ದಾರೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಹಿರಿಯ ಅಧಿಕಾರಿಗಳನ್ನು ಒಳಗೊಂಡಿರುವ ಈ ತಂಡವು, ಅಷ್ಘಾನಿಸ್ತಾನದಲ್ಲಿ ಸಿಲುಕಿದ ಭಾರತೀಯರ ರಕ್ಷಣೆ ಸೇರಿದಂತೆ ಆಫ್ಘನ್ನಲ್ಲಿ ನಡೆಯುವ ಪ್ರತೀ ಬೆಳವಣಿಗೆಯನ್ನು ಮೋದಿ ಅವರಿಗೆ ಸಲ್ಲಿಸಲಿದೆ. ಆಫ್ಘನ್ನಲ್ಲಿ ಸಿಲುಕಿದ ಭಾರತೀಯರು ಹಾಗೂ ಭಾರತಕ್ಕೆ ಬರಲಿಚ್ಚಿಸುವ ಆ ದೇಶದ ಅಲ್ಪಸಂಖ್ಯಾತರು ಹಾಗೂ ಆಫ್ಘನ್ ನೆಲವನ್ನು ಭಾರತದ ವಿರೋಧಿ ಚಟುವಟಿಕೆಗಳಿಗೆ ಬಳಸದ ಬಗ್ಗೆ ಎಚ್ಚರಿಕೆ ವಹಿಸುವುದು ಈ ತಂಡದ ಜವಾಬ್ದಾರಿಯಾಗಿದೆ.
ಆಷ್ಘಾನ್ನಲ್ಲಿದ್ದ ತನ್ನ ಪೂರ್ತಿ ಸೇನೆಯನ್ನು ಅಮೆರಿಕ ತಾಯ್ನಾಡಿಗೆ ಕರೆಸಿಕೊಂಡ ಬಳಿಕ ಇಡೀ ದೇಶದ ಮೇಲೆ ತಾಲಿಬಾನ್ ಹಿಡಿತ ಸಾಧಿಸಿದ್ದು, ಆ ಬಳಿಕದ ಪರಿಸ್ಥಿತಿಗಳ ಬಗ್ಗೆ ಭಾರತ ತೀವ್ರ ಕಣ್ಗಾವಲು ವಹಿಸಿದೆ.