ಮೋದಿ ನಕಲಿ ಧೈರ್ಯಶಾಲಿ; ಪ್ರಧಾನಿ ಮೇಲೆ ಹೊಸ ಆರೋಪ ಮಾಡಿದ ರಾಹುಲ್ ಗಾಂಧಿ!
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸರಣಿ ಆರೋಪ ಮಾಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ. ಚೀನಾ ಗಡಿ ಸಂಘರ್ಷವನ್ನಿಟ್ಟುಕೊಂಡು ರಾಹುಲ್ ಗಾಂಧಿ ಮೋದಿ ಅಸಲಿಯತ್ತು ಬಯಲಾಗಿದೆ ಎಂದಿದ್ದಾರೆ. ರಾಹುಲ್ ಗಾಂಧಿ ಮಾಡಿದ ಹೊಸ ಆರೋಪವೇನು? ಇಲ್ಲಿದೆ.
ನವದೆಹಲಿ(ಜು.20): ಭಾರತ ಹಾಗೂ ಚೀನಾ ಗಡಿ ಸಂಘರ್ಷದ ಬಳಿಕ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರಧಾನಿ ಮೋದಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದರು. ಇಷ್ಟೇ ಅಲ್ಲ ಹಲವು ಆರೋಪಗಳನ್ನು ಮಾಡಿದ್ದರು. ಇದೀಗ ಮತ್ತೆ ಹೊಸ ಕಿಡಿ ಹೊತ್ತಿಸಿದ್ದಾರೆ. ಪ್ರಧಾನಿ ಮೋದಿ ನಕಲಿ ಧೈರ್ಯಶಾಲಿ. ಭಾರತದಲ್ಲಿ ಮೋದಿ ತಾನೋರ್ವ ಧೈರ್ಯಶಾಲಿ ಎಂದು ಬಿಂಬಿಸಿದ್ದಾರೆ. ಆದರೆ ಚೀನಾ ಗಡಿ ಸಂಘರ್ಷದಲ್ಲಿ ಮೋದಿ ಅಸಲಿಯತ್ತು ಬಯಲಾಗಿದೆ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.
ಮೋದಿಯನ್ನು ಟೀಕಿಸುವ ಭರದಲ್ಲಿ ಸೇನಾ ಸಾಮರ್ಥ್ಯವನ್ನು ಅವಮಾನಿಸಿದ್ರಾ ರಾಹುಲ್ ಗಾಂಧಿ?
ಮೋದಿ ತಾನೋರ್ವ ಧೈರ್ಯಶಾಲಿ ಎಂದು ಜನರಿಗೆ ನಂಬಿಸಿ 2014ರಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಸುಳ್ಳು ವ್ಯಕ್ತಿತ್ವ ಸೃಷ್ಟಿಸುವುದು ಮೋದಿಯ ಅತೀ ದೊಡ್ಡ ಶಕ್ತಿಯಾಗಿದ್ದರೆ, ಇದು ಭಾರತದ ಅತೀ ದೊಡ್ಡ ವೀಕ್ನೆಸ್ ಆಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಚೀನಾ ಸೇನೆ ಭಾರತದ ಗಡಿಯೊಳಕ್ಕೆ ನುಗ್ಗಿ ಭಾರತೀಯ ಸೈನಿಕರ ಮೇಲೆ ದಾಳಿ ಮಾಡಿದೆ. ಭಾರತದ ಭೂಭಾಗವನ್ನು ಆಕ್ರಮಿಸಿಕೊಂಡಿದೆ. ಇದನ್ನು ಧೈರ್ಯವಾಗಿ ಹೇಳಿ ಚೀನಾವನ್ನು ಹಿಮ್ಮೆಟ್ಟಿಸುವ ಧೈರ್ಯ ಮೋದಿಗಿಲ್ಲ. ಬದಲಾಗಿ ಚೀನಾ ಸೇನೆ ಭಾರತದ ಭೂಭಾಗ ಆಕ್ರಮಣ ಮಾಡಿಲ್ಲ ಎಂದು ತಪ್ಪನ್ನು ಮುಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಮೋದಿ ಈ ರೀತಿಯ ನಾಟಕ ಕೇವ ಗಡಿ ವಿಚಾರದಲ್ಲಿ ಮಾತ್ರವಲ್ಲ. ಆಡಳಿತದಲ್ಲೂ ಎದ್ದು ಕಾಣುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಭಾರತದಲ್ಲಿ ಜನರ ಮುಗ್ದೆತೆ ಬಳಸಿಕೊಂಡ ಪ್ರಧಾನಿ ನರೇಂದ್ರ ಮೋದಿ ನಕಲಿ ವ್ಯಕ್ತಿತ್ವ ರೂಪಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ತಮ್ಮ ಇಮೇಜ್ ಹೆಚ್ಚಿಸಿಕೊಂಡಿದ್ದಾರೆ ಹೊರತು, ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ.