Asianet Suvarna News Asianet Suvarna News

ಜಿ20 ಯಶಸ್ಸಿಗೆ ಶ್ರಮಿಸಿದ 450 ಪೊಲೀಸರೊಂದಿಗೆ ಪ್ರಧಾನಿ ಮೋದಿ ಭೋಜನ ಕೂಟ

ಭಾರತದ ಜಿ20 ಅಧ್ಯಕ್ಷತೆಯ ಶೃಂಗಸಭೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 450 ಪೊಲೀಸರೊಂದಿಗೆ ಶನಿವಾರ ಔತಣಕೂಟವನ್ನು ಆಯೋಜಿಸಿದ್ದಾರೆ.

PM Modi dinner with 450 policemen who worked hard for G20 success akb
Author
First Published Sep 14, 2023, 8:07 AM IST

ನವದೆಹಲಿ: ಭಾರತದ ಜಿ20 ಅಧ್ಯಕ್ಷತೆಯ ಶೃಂಗಸಭೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 450 ಪೊಲೀಸರೊಂದಿಗೆ ಶನಿವಾರ ಔತಣಕೂಟವನ್ನು ಆಯೋಜಿಸಿದ್ದಾರೆ. ಜಿ20 ಸಭೆಯ ಪೂರ್ವಭಾವಿಯ ತಯಾರಿ ಹಾಗೂ ಜಿ20 ಸಮಯದಲ್ಲಿ ಯಾವುದೇ ಭದ್ರತಾ ಲೋಪ ಬಾರದಂತೆ ವಿಶೇಷ ಭದ್ರತಾ ಪಡೆ ಹಾಗೂ ದೆಹಲಿ ಪೊಲೀಸರು ಸೂಕ್ಷ್ಮವಾಗಿ ಕರ್ತವ್ಯ ನಿರ್ವಹಿಸಿದ್ದರು. ಹಾಗಾಗಿ ಅವರ ಕರ್ತವ್ಯಕ್ಕೆ ಗೌರವಾರ್ಥವಾಗಿ ಪ್ರಧಾನಿ ಮೋದಿ ಅವರು ಔತಣಕೂಟವನ್ನು ಆಯೋಜಿಸಿದ್ದಾರೆ.

ಜಿ20 ಶೃಂಗಸಭೆ ಯಶಸ್ವಿ: ಬಿಜೆಪಿ ಕಚೇರೀಲಿ ಮೋದಿಗೆ ಭವ್ಯ ಸ್ವಾಗತ

ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಬುಧವಾರ ಭವ್ಯ ಸ್ವಾಗತ ಕೋರಲಾಯಿತು. ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಸಭೆಯಲ್ಲಿ ಭಾಗಿಯಾಗಲು ಮೋದಿ ಬಿಜೆಪಿ ಕಚೇರಿಗೆ ಆಗಮಿಸಿದರು. ಮೋದಿ ಅವರು ಆಗಮಿಸಿದ ವೇಳೆ ಚುನಾವಣಾ ಸಮಿತಿಯ ಸದಸ್ಯರು, ಕೇಂದ್ರ ಸಚಿವರಾದ ರಾಜನಾಥ ಸಿಂಗ್‌ (Rajnath Singh) ಮತ್ತು ಅಮಿತ್‌ ಶಾ (Amit Shah)ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಹಾಜರಿದ್ದರು. ಪ್ರಧಾನಿ ಮೋದಿ ಅವರ ಮೇಲೆ ಪುಷ್ಪವೃಷ್ಟಿ ಸುರಿಸುವ ಮೂಲಕ ಸ್ವಾಗತಿಸಲಾಯಿತು. ಈ ವೇಳೆ ಕಚೇರಿಯ ಬಳಿ ನೆರೆದಿದ್ದ ಅಪಾರ ಜನಸ್ತೋಮ ಜಯಘೋಷಗಳನ್ನು ಕೂಗಿದರು. ಜಿ20 ಸಭೆ ಮುಗಿದ ಬಳಿಕ ಇದೇ ಮೊದಲ ಬಾರಿಗೆ ಪಕ್ಷದ ಕಚೇರಿಗೆ ಮೋದಿ ಭೇಟಿ ನೀಡಿದರು.

'ಮೋದಿ ಸರಿಯಾದ ಕೆಲಸ ಮಾಡ್ತಿದ್ದಾರೆ..' ಮೇಕ್‌ ಇನ್‌ ಇಂಡಿಯಾ ಯೋಜನೆ ಮನಸಾರೆ ಹೊಗಳಿದ ವ್ಲಾಡಿಮಿರ್‌ ಪುಟಿನ್‌!

ಇದೇ ವೇಳೆ ಜಿ20 ಶೃಂಗ ಸಭೆಯನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರಿಗೆ ಅಭಿನಂದನೆ ಸಲ್ಲಿಸುವ ನಿರ್ಣಯವನ್ನು ಕೇಂದ್ರ ಸಚಿವ ಸಂಪುಟವು (Union Cabinet) ಬುಧವಾರ ಅಂಗೀಕರಿಸಿದೆ.

ಸಂಸತ್‌ ವಿಶೇಷ ಅಧಿವೇಶನ: ಸೆ.17ರಂದು ಸರ್ವಪಕ್ಷ ಸಭೆ

ನವದೆಹಲಿ:  ಸಂಸತ್‌ ವಿಶೇಷ ಅಧಿವೇಶನದ (special session of Parliament) ಹಿನ್ನೆಲೆಯಲ್ಲಿ ಸೆ.17ರಂದು (ಭಾನುವಾರ) ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ (all-party meeting) ಕರೆದಿದೆ. ಸರ್ಕಾರವು ಈ ಅಧಿವೇಶನದ ಅಜೆಂಡಾ ಏನು ಎಂಬುದನ್ನೇ ಹೇಳಿಲ್ಲ. ಹೀಗಾಗಿ ಅದು ಕರೆದಿರುವ ಸರ್ವಪಕ್ಷ ಸಭೆ ಕುತೂಹಲ ಕೆರಳಿಸಿದೆ. ಸೆ.18ರಿಂದ 22ರವರೆಗೆ 5 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಈ ಸಂದರ್ಭದಲ್ಲಿ ಹಳೆಯ ಸಂಸತ್‌ನಿಂದ ಹೊಸ ಸಂಸತ್ತಿಗೆ ಕಲಾಪಗಳು ಸ್ಥಳಾಂತರಗೊಳ್ಳಲಿವೆ. ಆದರೆ ಚರ್ಚಾ ವಿಷಯಗಳು ಏನು ಎಂಬುದನ್ನೇ ಸರ್ಕಾರ ಹೇಳಿಲ್ಲ.

ಏಕರೂಪ ನಾಗರಿಕ ಸಂಹಿತೆ, ಒಂದು ದೇಶ ಒಂದು ಚುನಾವಣೆ, ಇಂಡಿಯಾ ಹೆಸರನ್ನು ಭಾರತ ಎಂದು ಬದಲಿಸುವುದು, ಅವಧಿಪೂರ್ವ ಚುನಾವಣೆ ಘೋಷಿಸಿ ಸಂಸತ್ತನ್ನು ವಿಸರ್ಜಿಸುವುದು.. ಇತ್ಯಾದಿ ಮಹತ್ವದ ವಿಚಾರಗಳು ಸರ್ಕಾರದ ಅಜೆಂಡಾದಲ್ಲಿ ಇವೆ ಎನ್ನಲಾಗಿದ್ದರೂ ಯಾವುದೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಸೂಕ್ತ ಸಂದರ್ಭದಲ್ಲಿ ಅಜೆಂಡಾ ಬಹಿರಂಗಪಡಿಸಲಾಗುವುದು" ಎಂದಷ್ಟೇ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದರು.

ಕಾಂಗ್ರೆಸ್‌ ಟೀಕೆ

ಸರ್ಕಾರದ ನಡೆಯನ್ನು ಟೀಕಿಸಿರುವ ವಿಪಕ್ಷ ಕಾಂಗ್ರೆಸ್‌, ಅಧಿವೇಶನ ಆರಂಭಕ್ಕೆ ಇನ್ನು ಕೇವಲ 5 ದಿನ ಬಾಕಿ ಇದೆ. ಆದರೂ ಅಜೆಂಡಾ ಏನು ಎಂಬ ಘೋಷಣೆ ಆಗಿಲ್ಲ. "ಕೇವಲ ಇಬ್ಬರಿಗೆ" ಮಾತ್ರ ಅಜೆಂಡಾ ಗೊತ್ತು. ಈ ಹಿಂದೆ ಯಾವತ್ತೂ ಈ ರೀತಿ ಆಗಿರಲಿಲ್ಲ" ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ (Jai Ram Ramesh) ಕಿಡಿಕಾರಿದ್ದಾರೆ.

ಖಲಿಸ್ತಾನಿಗಳ ಪರ ನಿಂತ ಕೆನಡಾ ಪ್ರಧಾನಿಗೆ ಮಂಗಳಾರತಿ, ದ್ವಿಪಕ್ಷೀಯ ಸಭೆಯಲ್ಲಿ ಮೋದಿ ವಾರ್ನಿಂಗ್!

ಸೀಟು ಹಂಚಿಕೆಯ ಬಗ್ಗೆ ಶೀಘ್ರದಲ್ಲೇ ನಿರ್ಧಾರ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವನ್ನು (NDA Alliance) ಸೋಲಿಸಲು ವಿಪಕ್ಷಗಳು ರಚಿಸಿಕೊಂಡಿರುವ ಇಂಡಿಯಾ ಕೂಟ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಜಂಟಿ ಸಮಾವೇಶ ನಡೆಸಲು ನಿರ್ಧರಿಸಿವೆ. ಚುನಾವಣೆಯ ಹೊಸ್ತಿಲಲ್ಲಿರುವ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಈ ಸಮಾವೇಶ ನಡೆಸಲು ಬುಧವಾರ ವಿಪಕ್ಷಗಳ ಸಮನ್ವಯ ಸಮಿತಿಯ ಮೊದಲ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಇದರ ಜೊತೆಗೆ ಶೀಘ್ರದಲ್ಲೇ ಸೀಟು ಹಂಚಿಕೆಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಕಾಂಗ್ರೆಸ್‌ ನಾಯಕ ವೇಣುಗೋಪಾಲ್‌ ಅವರು ತಿಳಿಸಿದ್ದಾರೆ.  ಸಮನ್ವಯ ಸಮಿತಿಯ ಸಭೆಯ ಬಳಿಕ ಮಾತನಾಡಿದ ಅವರು, 14 ಸದಸ್ಯರ ಪೈಕಿ 12 ಸದಸ್ಯರು ಸಭೆಗೆ ಹಾಜರಾಗಿದ್ದರು. ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಎಲ್ಲಾ ಪಕ್ಷಗಳ ನಾಯಕರು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ. ಇದಕ್ಕೂ ಮೊದಲು ಅಕ್ಟೋಬರ್‌ ಮೊದಲ ವಾರದಲ್ಲಿ ಭೋಪಾಲ್‌ನಲ್ಲಿ ಜಂಟಿ ಸಮಾವೇಶ ನಡೆಸಲಾಗುವುದು ಎಂದು ಅವರು ಹೇಳಿದರು.

Follow Us:
Download App:
  • android
  • ios