ರಷ್ಯಾದಲ್ಲಿ ಯೆವ್ಗೆನಿ ಪ್ರಿಗೋಜಿನ್ ಮತ್ತು ಆತನ ವ್ಯಾಗ್ನರ್ ಗುಂಪು ನಡೆಸಿದ ದಂಗೆಯನ್ನು ಹತ್ತಿಕ್ಕಲು ತೆಗೆದುಕೊಂಡ ಕ್ರಮಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದರು. ಈ ವೇಳೆ ರಷ್ಯಾದ ಕ್ರಮಕ್ಕೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು’ ಎಂದು ರಷ್ಯಾ ಆಡಳಿತ ಹೇಳಿದೆ.
ಮಾಸ್ಕೋ (ಜುಲೈ 1, 2023): ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶುಕ್ರವಾರ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ‘ರಷ್ಯಾದಲ್ಲಿ ಉಂಟಾಗಿದ್ದ ದಂಗೆಯನ್ನು ಹತ್ತಿಕ್ಕಿದ ಪುಟಿನ್ ಕ್ರಮಕ್ಕೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ರಷ್ಯಾ ಹೇಳಿದೆ. ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಶೃಂಗಸಭೆಗೆ ಕೆಲವು ದಿನಗಳ ಮೊದಲೇ ಉಭಯ ನಾಯಕರು ದ್ವಿಪಕೀಯ ಸಂಬಂಧ, ಉಕ್ರೇನ್ ಯುದ್ಧದ ಪರಿಸ್ಥಿತಿ, ರಷ್ಯಾದಲ್ಲಿ ನಡೆದ ದಂಗೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ರಷ್ಯಾ, ‘ಉಭಯ ನಾಯಕರ ನಡುವೆ ಸಂಭಾಷಣೆ ಅರ್ಥಪೂರ್ಣ ಮತ್ತು ರಚನಾತ್ಮಕವಾಗಿತ್ತು. ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಬಲಗೊಳ್ಳುವ ನಿಟ್ಟಿನಲ್ಲಿ ಉಭಯ ನಾಯಕರು ಮಾತುಕತೆ ನಡೆಸಿದರು. ಈ ವೇಳೆ ಉಕ್ರೇನ್ ಯುದ್ಧ ಪರಿಸ್ಥಿತಿಯ ಕುರಿತಾಗಿಯೂ ಚರ್ಚೆ ನಡೆಸಲಾಯಿತು. ಉಕ್ರೇನ್ ರಾಜತಾಂತ್ರಿಕ ಮಾರ್ಗಕ್ಕೆ ಒಪ್ಪಿಕೊಳ್ಳದಿರುವುದನ್ನೂ ಮೋದಿ ಅವರಿಗೆ ತಿಳಿಸಲಾಯಿತು’ ಎಂದು ಹೇಳಿದೆ.
ಇದನ್ನು ಓದಿ: ತನ್ನ ವಿರುದ್ಧವೇ ದಂಗೆಯೆದ್ದ ಖಾಸಗಿ ಸೇನೆಗೆ ಪುಟಿನ್ ಕ್ಷಮೆ: ‘ದೇಶದ್ರೋಹಿಗಳ’ ಎದುರು ಮಂಡಿಯೂರಿದ ರಷ್ಯಾ?
ಅಲ್ಲದೆ, ‘ರಷ್ಯಾದಲ್ಲಿ ಯೆವ್ಗೆನಿ ಪ್ರಿಗೋಜಿನ್ ಮತ್ತು ಆತನ ವ್ಯಾಗ್ನರ್ ಗುಂಪು ನಡೆಸಿದ ದಂಗೆಯನ್ನು ಹತ್ತಿಕ್ಕಲು ತೆಗೆದುಕೊಂಡ ಕ್ರಮಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದರು. ಈ ವೇಳೆ ರಷ್ಯಾದ ಕ್ರಮಕ್ಕೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು’ ಎಂದು ರಷ್ಯಾ ಆಡಳಿತ ಹೇಳಿದೆ.
ಉಕ್ರೇನ್ ಮೇಲೆ ಯುದ್ಧ ಆರಂಭಿಸಿ ಒಂದೂವರೆ ವರ್ಷ ಕಳೆದರೂ ಯಶಸ್ಸು ಸಿಗದೆ ಬಸವಳಿದಿದ್ದ ರಷ್ಯಾಗೆ ಇದೀಗ ಮತ್ತೊಂದು ದೊಡ್ಡ ಸಮಸ್ಯೆ ಎದುರಾಗಿತ್ತು. ರಷ್ಯಾ ಸೇನೆ ತನ್ನನ್ನು ಕಡೆಗಣಿಸಿದೆ ಎಂದು ಆರೋಪಿಸಿರುವ ‘ವ್ಯಾಗ್ನರ್’ ಎಂಬ ಈ ಹಿಂದಿನ ರಷ್ಯಾ ಬೆಂಬಲಿತ ಖಾಸಗಿ ಸೇನಾ ಪಡೆ, ಇದೀಗ ನೇರವಾಗಿ ರಷ್ಯಾದ ಮೇಲೆ ಸಶಸ್ತ್ರ ಬಂಡಾಯ ಘೋಷಿಸಿದೆ. ರಷ್ಯಾ ಅಧ್ಯಕ್ಷರು, ರಕ್ಷಣಾ ಸಚಿವರು ಹಾಗೂ ಸೇನಾ ಮುಖ್ಯಸ್ಥರ ಪದಚ್ಯುತಿಯ ಪಣ ತೊಟ್ಟಿರುವ ವ್ಯಾಗ್ನರ್ ಸೇನೆ, ರಷ್ಯಾದ ರೋಸ್ತೋವ್ ನಗರ ಕೈವಶ ಮಾಡಿಕೊಂಡಿದೆ. ಈ ನಡುವೆ, ಶನಿವಾರ ಸಂಜೆಯವರೆಗೆ ಮಾಸ್ಕೋದತ್ತ ಮುನ್ನುಗ್ಗುತ್ತಿರುವುದಾಗಿ ಹೇಳಿದ್ದ ವ್ಯಾಗ್ನರ್ ಪಡೆ ಮುಖ್ಯಸ್ಥ ಯೆವ್ಗೆನಿ ಪ್ರಿಗೋಝಿನ್ ತಣ್ಣಗಾದಂತೆ ಕಂಡುಬಂದಿದ್ದರು.
ಇದನ್ನೂ ಓದಿ: ರಷ್ಯಾದಲ್ಲಿ ಪುಟಿನ್ ಆಪ್ತನ ಖಾಸಗಿ ಸೇನೆ ದಿಢೀರ್ ಸೈಲೆಂಟ್: ಮಾಸ್ಕೋಗೆ ಲಗ್ಗೆ ನಿರ್ಧಾರದಿಂದ ಹಿಂದೆ ಸರಿದ ವ್ಯಾಗ್ನರ್!
ದಿಢೀರ್ ಬಂಡಾಯ:
ರಷ್ಯಾ ಪರವಾಗಿ ಉಕ್ರೇನ್ನಲ್ಲಿ ಯುದ್ಧ ಮಾಡುತ್ತಿದ್ದ ವ್ಯಾಗ್ನರ್ ಸೇನೆ ಶನಿವಾರ ಬೆಳಗ್ಗೆ ಮರಳಿ ರಷ್ಯಾ ಪ್ರವೇಶ ಮಾಡಿದ್ದು ರಷ್ಯಾದಲ್ಲಿ ಸಶಸ್ತ್ರ ಬಂಡಾಯ ಘೋಷಿಸಿತು. ರಷ್ಯಾ ಸೇನೆ ತಮಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ರಷ್ಯಾ ಸರ್ಕಾರದ ವಿರುದ್ಧ ಕ್ಷಿಪ್ರಕ್ರಾಂತಿ ಮಾಡುವುದಾಗಿ ಹೇಳಿತು.
ಕಳೆದೊಂದು ವರ್ಷದಿಂದ ಉಕ್ರೇನ್ ಮೇಲಿನ ದಾಳಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ರಷ್ಯಾದ ಗಡಿ ಭಾಗದ ರೊಸ್ತೋವ್ ಆನ್ ಡಾನ್ ನಗರದಲ್ಲಿ ಮಿಲಿಟರಿ ಕೇಂದ್ರ ಕಚೇರಿ ಮತ್ತು ಇಡೀ ನಗರವನ್ನು ನಾವು ಈಗಾಗಲೇ ನಮ್ಮ ವಶಕ್ಕೆ ತೆಗೆದುಕೊಂಡಿದ್ದೇವೆ. ತಮ್ಮ ಬಳಿ 50 ಸಾವಿರ ಯೋಧರ ಬೃಹತ್ ಪಡೆ ಇದೆ. ಗುರಿ ಮುಟ್ಟುವವರೆಗೂ ನಾವು ವಿರಮಿಸುವುದಿಲ್ಲ. ಈ ಹಂತದಲ್ಲಿ ಯಾರೂ ನಮಗೆ ಅಡ್ಡಿ ಮಾಡಿಲ್ಲ. ಒಂದು ವೇಳೆ ಯಾರಾದರೂ ನಮಗೆ ಅಡ್ಡಿ ಮಾಡಿದರೆ ನಾವು ಯಾರನ್ನೂ ಬಿಡುವುದಿಲ್ಲ. ರಷ್ಯಾ ಸೇನೆ ಕೂಡಾ ನಮಗೆ ಅಡ್ಡಿ ಮಾಡಬಾರದು. ಇದು ಸೇನಾ ದಂಗೆಯಲ್ಲ, ಬದಲಾಗಿ ನ್ಯಾಯದ ಕಡೆಗಿನ ನಡಿಗೆ’ ಎಂದಿತು.
ಇದನ್ನೂ ಓದಿ: ರಷ್ಯಾದಿಂದ ರಫ್ತಾಗ್ತಿರೋ ಶೇ.80 ರಷ್ಟು ತೈಲ ಭಾರತ, ಚೀನಾದಿಂದ್ಲೇ ಖರೀದಿ!
ಈ ನಡುವೆ, ‘ನಾವು ಸೇನೆಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಉಕ್ರೇನ್ನಲ್ಲಿನ ನಮ್ಮ ಕ್ಯಾಂಪ್ಗಳ ಮೇಲೆ ರಷ್ಯಾ ಸೇನೆ, ರಾಕೆಟ್ ಮೂಲಕ ದಾಳಿ ನಡೆಸಿದೆ. ಹೆಲಿಕಾಪ್ಟರ್ ಗನ್ಶಿಫ್ಸ್ ಮತ್ತು ಫಿರಂಗಿಗಳ ಮೂಲಕವೂ ದಾಳಿ ನಡೆಸಲಾಗಿದೆ. ಈ ವೇಳೆ ನಾವು ಕೂಡಾ ರಷ್ಯಾದ 4 ಕಾಪ್ಟರ್ ಹೊಡೆದುರುಳಿಸಿದ್ದೇವೆ’ ಎಂದು ಪ್ರಿಗೋಝಿನ್ ಹೇಳಿದರು.
ಇದನ್ನೂ ಓದಿ: ಉಕ್ರೇನ್ ವಿರುದ್ಧ ಯುದ್ಧದ ಪಾಪ: ಪುಟಿನ್ ದೃಷ್ಟಿಮಂದ, ನಾಲಿಗೆ ಸ್ತಬ್ಧ, ಸಂವೇದನೆಯೂ ಇಲ್ಲ; ವೈದ್ಯರ ಕಳವಳ
