ಇಲ್ಲೇ ಮದ್ವೆಯಾಗಿ ವಿದೇಶಕ್ಕೆ ಹೋಗ್ಬೇಡಿ: ದೇಶದ ಶ್ರೀಮಂತರಿಗೆ ಮೋದಿ ಮನವಿ
ಶ್ರೀಮಂತ ಉದ್ಯಮಿಗಳು ಹಾಗೂ ಸೆಲೆಬ್ರಿಟಿಗಳು ವಿದೇಶದಲ್ಲಿ ವಿವಾಹ ಮಾಡಿಕೊಳ್ಳುವ ಪರಿಪಾಠ ಹೊಂದಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
![PM Modi Asks rich people of India to Plan their wedding in country not in Abroad akb PM Modi Asks rich people of India to Plan their wedding in country not in Abroad akb](https://static-ai.asianetnews.com/images/01hg5p80s3twye8b1rakj6rtjc/modi-about-marriage-abroad_363x203xt.jpg)
ನವದೆಹಲಿ: ಶ್ರೀಮಂತ ಉದ್ಯಮಿಗಳು ಹಾಗೂ ಸೆಲೆಬ್ರಿಟಿಗಳು ವಿದೇಶದಲ್ಲಿ ವಿವಾಹ ಮಾಡಿಕೊಳ್ಳುವ ಪರಿಪಾಠ ಹೊಂದಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂತಹ ಆಚರಣೆಗಳನ್ನು ವಿದೇಶದಲ್ಲಿ ಮಾಡಿಕೊಳ್ಳುವ ಅಗತ್ಯ ಏನಿದೆ? ದೇಶದಲ್ಲೇ ವಿವಾಹ ಮಾಡಿಕೊಂಡರೆ, ಭಾರತದ ಹಣ ಇಲ್ಲಿಂದ ಹೊರಗೆ ಹೋಗುವುದಿಲ್ಲ ಎಂದು ಅವರು ಸಲಹೆ ಮಾಡಿದ್ದಾರೆ.
ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ನಲ್ಲಿ ಭಾನುವಾರ ಮಾತನಾಡಿದ ಪ್ರಧಾನಿ, ‘ವಿವಾಹದ ಋತು ಆರಂಭವಾಗಿದೆ. ಕೆಲವು ವ್ಯಾಪಾರ ಸಂಘಟನೆಗಳ ಅಂದಾಜಿನ ಪ್ರಕಾರ, ವಿವಾಹದ ಸೀಸನ್ನಲ್ಲಿ 5 ಲಕ್ಷ ಕೋಟಿ ರು. ವಹಿವಾಟು ನಡೆಯುತ್ತದೆ. ವಿವಾಹ ಎಂದಾಕ್ಷಣ ನನಗೆ ಒಂದು ವಿಷಯವಂತೂ ಉಪಟಳ ನೀಡುತ್ತಿದೆ. ಅದೇನೆಂದರೆ, ವಿದೇಶಕ್ಕೆ ಹೋಗಿ ವಿವಾಹ ಮಾಡಿಕೊಳ್ಳುವ ವಾತಾವರಣವನ್ನು ಕೆಲವು ಕುಟುಂಬಗಳು ನಿರ್ಮಾಣ ಮಾಡಿವೆ. ಅದು ಅಗತ್ಯವೇ?’ ಎಂದು ಪ್ರಶ್ನಿಸಿದರು.
ಭಾರತದ ಅತೀ ಶ್ರೀಮಂತರ ಮದುವೆಯ ನೆಚ್ಚಿನ ತಾಣ ಅಂಬಾನಿ ಜಿಯೋ ವರ್ಲ್ಡ್ ಸೆಂಟರ್; ದಿನದ ಬಾಡಿಗೆಯೆಷ್ಟು?
‘ಅದರ ಬದಲಾಗಿ ವಿವಾಹ ಎಂಬ ಆಚರಣೆಯನ್ನು ಭಾರತೀಯ ನೆಲದಲ್ಲೇ, ಭಾರತೀಯರ ನಡುವೆಯೇ ಮಾಡಿಕೊಂಡರೆ ದೇಶದ ಹಣ ದೇಶದಲ್ಲೇ ಉಳಿಯುತ್ತದೆ. ದೇಶವಾಸಿಗಳಿಗೂ ಕೆಲವೊಂದು ಸೇವೆ ಸಲ್ಲಿಸುವ ಅವಕಾಶ ಸಿಗುತ್ತದೆ. ಬಡವರು ಕೂಡ ನಿಮ್ಮ ವಿವಾಹ ಸಮಾರಂಭದ ಬಗ್ಗೆ ಅವರ ಮಕ್ಕಳಿಗೂ ಹೇಳುತ್ತಾರೆ. ‘ವೋಕಲ್ ಫಾರ್ ಲೋಕಲ್’ ಅಭಿಯಾನವನ್ನು ಇದಕ್ಕೂ ವಿಸ್ತರಣೆ ಮಾಡಬಹುದಲ್ಲವೇ? ನಮ್ಮ ದೇಶದಲ್ಲೇ ಏಕೆ ವಿವಾಹ ಮಾಡಿಕೊಳ್ಳಬಾರದು?’ ಎಂದು ಕೇಳಿದರು.
‘ಶ್ರೀಮಂತರು ವಿವಾಹಕ್ಕೆ ಬಯಸುವ ವಾತಾವರಣ ದೇಶದಲ್ಲಿ ಸದ್ಯ ಇಲ್ಲದೇ ಇರಬಹುದು. ಆದರೆ, ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ದೇಶದಲ್ಲೇ ಆಯೋಜನೆ ಮಾಡಿದರೆ ಅಂತಹ ವಾತಾವರಣ ದೇಶದಲ್ಲೂ ಸೃಷ್ಟಿಯಾಗುತ್ತದೆ. ನಾನು ಪ್ರಸ್ತಾಪಿಸಿರುವ ಈ ವಿಷಯ ಅತಿ ಶ್ರೀಮಂತ ಕುಟುಂಬಗಳಿಗೆ ಸಂಬಂಧಿಸಿದ್ದು. ಆ ಕುಟುಂಬಗಳಿಗೆ ಈ ನನ್ನ ನೋವು ತಲುಪುತ್ತದೆ ಎಂದು ಭಾವಿಸಿದ್ದೇನೆ’ ಎಂದರು.
Monsoon Wedding: ಬೆಸ್ಟ್ ಡೆಸ್ಟಿನೇಷನ್ ತಾಣಗಳಿವು, ಪ್ಲ್ಯಾನ್ ಮಾಡ್ಕೊಳ್ಳಿ!
‘ವಿವಾಹಕ್ಕೆ ಖರೀದಿಯನ್ನು ಮಾಡುವಾಗ ದೇಶೀಯವಾಗಿ ತಯಾರಾದ ಉತ್ಪನ್ನಗಳಿಗೇ ಜನರು ಮಹತ್ವ ನೀಡಬೇಕು’ ಎಂದೂ ಸಲಹೆ ಮಾಡಿದರು. ಕಳೆದ ತಿಂಗಳು ಮನ್ ಕೀ ಬಾತ್ನಲ್ಲಿ ಸ್ಥಳೀಯ ಉತ್ಪನ್ನ ಖರೀದಿಸುವ ಕುರಿತು ಮಾತನಾಡಿದ್ದೆ. ಅದಾದ ಕೆಲವೇ ದಿನಗಳಲ್ಲಿ ದೀಪಾವಳಿ, ಭಾಯಿ ದೂಜ್ ಹಾಗೂ ಛಠ್ ಪೂಜಾ ಸಂದರ್ಭದಲ್ಲಿ 4 ಲಕ್ಷ ಕೋಟಿ ರು. ಮೌಲ್ಯದಷ್ಟು ದೇಶೀಯ ಉತ್ಪನ್ನಗಳ ವಹಿವಾಟು ಆಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.