ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ| ವಂದನಾ ನಿರ್ಣಯದ ಮೇಲೆ ಪ್ರಧಾನಿ ಮೋದಿ ಭಾಷಣ| ವಿಪಕ್ಷಗಳಿಗೆ ಪ್ರಧಾನಿ ಮೋದಿ ಟ್ರೇಲರ್ ಇದ್ದಂತೆ ಎಂದ ಪ್ರಧಾನಿ ಮೋದಿ| ಮಹಾತ್ಮಾ ಗಾಂಧಿಜೀ ನಮ್ಮ ಜೀವನದ ಅವಿಭಾಜ್ಯ ಅಂಗ ಎಂದ ಪ್ರಧಾನಿ| ‘ಕಾಂಗ್ರೆಸ್ ಅಧಿಕಾರದಲ್ಲಿ ಇರದಿರುವುದರಿಂದಲೇ ಅಯೋಧ್ಯೆ ವಿವಾದ ಇತ್ಯರ್ಥ’| ಟ್ಯೂಬ್’ಲೈಟ್ ಎಂದು ಕರೆದು ಪರೋಕ್ಷವಾಗಿ ರಾಹುಲ್ ಗಾಂಧಿ ಅವರನ್ನು ಕಿಚಾಯಿಸಿದ ಪ್ರಧಾನಿ ಮೋದಿ|
ನವದೆಹಲಿ(ಫೆ.06): ಮಹಾತ್ಮಾ ಗಾಂಧಿಜೀ ವಿಪಕ್ಷಗಳಿಗೆ ಚಿತ್ರವೊಂದರ ಟ್ರೇಲರ್ ರೀತಿ ಇದ್ದಂತೆ. ಸಮಯ ಬಂದಾಗ ಮಾತ್ರ ವಿಪಕ್ಷಗಳಿಗೆ ಮಹಾತ್ಮಾ ಗಾಂಧಿಜೀ ನೆನಪಾಗುತ್ತಾರೆ. ಆದರೆ ನಮಗೆ ಮಾತ್ರ ಮಹಾತ್ಮಾ ಗಾಂಧಿಜೀ ನಮ್ಮ ಜೀವನದ ಅವಿಭಾಜ್ಯ ಅಂಗ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ, ಮಹಾತ್ಮಾ ಗಾಂಧಿಜೀ ಸದಾ ನಮ್ಮ ಸ್ಪೂರ್ತಿಯ ಚಿಲುಮೆಯಾಗಿರಲಿದ್ದಾರೆ ಎಂದು ಹೇಳಿದರು.
ಪ್ರಧಾನಿ ಮೋದಿ ಭಾಷಣಕ್ಕೆ ಎದ್ದು ನಿಲ್ಲುತ್ತಿದ್ದಂತೇ ವಿಪಕ್ಷಗಳ ನಾಯಕರು ಮಹಾತ್ಮಾ ಗಾಂಧಿಜೀ ಕೀ ಜೈ ಎಂದು ಘೋಷಣೆ ಕೂಗಿದರು. ಮಹಾತ್ಮಾ ಗಾಂಧಿಜೀ ಕುರಿತು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗ್ಡೆ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ವಿಪಕ್ಷಗಳು ಮೋದಿ ಅವರನ್ನು ಅಣುಕಿಸಲು ಯತ್ನಿಸಿದವು.
ರಾಮ ಮಂದಿರಕ್ಕೆ ಸಮಿತಿ: ಸದನದಲ್ಲೇ ಪ್ರಧಾನಿ ಮೋದಿ ಘೋಷಣೆ!
ಇದಕ್ಕೆ ಸೂಕ್ತ ತಿರುಗೇಟು ನೀಡಿದ ಪ್ರಧಾನಿ, ಸಮಯ ಬಂದಾಗ ಮಹಾತ್ಮಾ ಗಾಂಧಿಜೀ ಅವರನ್ನು ನೆನೆಯುವ ವಿಪಕ್ಷಗಳಿಗೆ ಗಾಂಧಿಜೀ ಕೇವಲ ಚಿತ್ರವೊಂದರ ಟ್ರೇಲರ್ ಇದ್ದಂತೆ ಎಂದು ವ್ಯಂಗ್ಯವಾಡಿದರು.
ತಮ್ಮ ಭಾಷಣದಲ್ಲಿ ಕಾಂಗ್ರೆಸ್’ನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪ್ರಧಾನಿ ಮೋದಿ, ಒಂದು ವೇಳೆ ಕಾಂಗ್ರೆಸ್ ಇನ್ನೂ ಅಧಿಕಾರದಲ್ಲಿ ಇದ್ದಿದ್ದರೆ ಅಯೋಧ್ಯೆಯ ರಾಮ ಜನ್ಮಭೂಮಿ ಭೂ ವಿವಾದ ಇಂದಿಗೂ ಇತ್ಯರ್ಥವಾಗುತ್ತಿರಲಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಅಧಿಕಾರಲ್ಲಿ ಇರದಿರುವುದರಿಂದಲೇ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದಾಗಲು ಸಾಧ್ಯವಾಗಿದೆ. ಮುಸ್ಲಿಂ ಸಹೋದರಿಯರ ಜೀವನವನ್ನೇ ನರಕ ಮಾಡುತ್ತಿದ್ದ ತ್ರಿವಳಿ ತಲಾಖ್ ರದ್ದಾಗಲು ಕಾಂಗ್ರೆಸ್ ಅಧಿಕಾರದಲ್ಲಿ ಇರದಿರುವುದೇ ಕಾರಣ. ಇದಕ್ಕಾಗಿ ನಾನು ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಮೋದಿ ವ್ಯಂಗ್ಯವಾಡಿದರು.
ಇನ್ನು ರಾಹುಲ್ ಗಾಂಧಿ ಅವರ ಹೆಸರನ್ನು ಉಲ್ಲೇಖಿಸದೇ ಕೆಲವು ಟ್ಯೂಬ್’ಲೈಟ್’ಗಳು ತಡವಾಗಿ ಹತ್ತುತ್ತವೆ ಎಂದು ಕಿಚಾಯಿಸಿದ ಮೋದಿ, ಇನ್ನಾರು ತಿಂಗಳಲ್ಲಿ ದೇಶದ ಯುವಕರು ಮೋದಿ ಅವರನ್ನು ರಸ್ತೆಯಲ್ಲಿ ಬಡಿಗೆಗಳಿಂದ ಬಡಿಯುವುದಾಗಿ ಹೇಳಿದ್ದರಿಂದ ನಾನು ಸೂರ್ಯ ನಮಸ್ಕಾರ ಮಾಡಿ ದೈಹಿಕವಾಗಿ ಶಿಕ್ಷೆಗೆ ಸಿದ್ಧಗೊಂಡಿದ್ದೇನೆ ಎಂದು ಮೋದಿ ವ್ಯಂಗ್ಯವಾಡಿದರು.
