ಅಹ್ಮದಾಬಾದ್‌ ಏರ್‌ಪೋರ್ಟ್ ಸಮೀಪವೇ ನಡೆದ ವಿಮಾನ ದುರಂತ ಕ್ಷಣದಲ್ಲೇ ಎಲ್ಲವನ್ನು ಸ್ಮಶಾನವಾಗಿಸಿದೆ. ಈ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದು ಹೀಗೆ…

ಅಹಮದಾಬಾದ್‌: ಅಹ್ಮದಾಬಾದ್‌ ಏರ್‌ಪೋರ್ಟ್ ಸಮೀಪವೇ ನಡೆದ ವಿಮಾನ ದುರಂತ ಕ್ಷಣದಲ್ಲೇ ಎಲ್ಲವನ್ನು ಸ್ಮಶಾನವಾಗಿಸಿದೆ. ಈ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದು ಹೀಗೆ, ನಾನು ಮನೆಯಲ್ಲಿದ್ದಾಗ ದೊಡ್ಡ ಸದ್ದು ಕೇಳಿತು. ಏನಾಯಿತೆಂದು ನೋಡಲು ಹೊರಬಂದಾಗ ಆಕಾಶದಲ್ಲಿ ಆವರಿಸಿದ್ದ ಕಪ್ಪು ಹೊಗೆ ಕಾಣಿಸಿತು. ಹತ್ತಿರ ಬಂದಾಗ ಎಲ್ಲೆಲ್ಲೂ ಶವಗಳು ಮತ್ತು ವಿಮಾನದ ಅವಶೇಷಗಳೇ ಕಾಣುತ್ತಿದ್ದವು. ಇವು, ವಿಮಾನ ದುರಂತಕ್ಕೆ ಸಾಕ್ಷಿಯಾದ ಪ್ರತ್ಯಕ್ಷದರ್ಶಿಯೊಬ್ಬರ ಮಾತುಗಳು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆ ಬಗ್ಗೆ ಮಾತನಾಡಿದ ಪ್ರತ್ಯಕ್ಷದರ್ಶಿ ಹರೇಶ್‌ ಶಾ, ವಿಮಾನ ಅಪಘಾತಕ್ಕೆ ತುತ್ತಾಗುವ ಮುನ್ನ ಕಡಿಮೆ ಎತ್ತರದಲ್ಲಿ ಹಾರುತ್ತಿತ್ತು. ಅದು ಕಟ್ಟಡಕ್ಕೆ ಅಪ್ಪಳಿಸುತ್ತಿದ್ದಂತೆ ವಿಮಾನ ಮತ್ತು ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತು. ಅದರ ಬೆನ್ನಲ್ಲೇ ದಟ್ಟ ಹೊಗೆ ಎದ್ದಿತು. ಘಟನೆ ನಡೆದಲ್ಲಿಗೆ ಹೋದಾಗ ಎಲ್ಲಿ ನೋಡಿದರೂ ಸುಟ್ಟು ಕರಕಲಾದ ಮೃತದೇಹಗಳು ಮತ್ತು ಛಿದ್ರವಾದ ವಿಮಾನದ ಭಾಗಗಳು ಕಾಣಿಸುತ್ತಿದ್ದವು ಎಂದು ಹೇಳಿದ್ದಾರೆ. ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ವಿಮಾನದತ್ತ ಧಾವಿಸಿದ್ದು, ವಿಮಾನ ಮತ್ತು ಕಟ್ಟಡದಲ್ಲಿದ್ದವರನ್ನು ರಕ್ಷಿಸಲು ಹರಸಾಹಸಪಡುತ್ತಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.

ಏರ್ಪೋರ್ಟ್‌ಗೆ 10 ನಿಮಿಷ ತಡವಾಗಿದ್ದಕ್ಕೆ ಜೀವ ಉಳಿಸಿಕೊಂಡ ಮಹಿಳೆ

ಅಹಮದಾಬಾದ್‌: ಅದೃಷ್ಟವಿದ್ದರೆ ದೊಡ್ಡ ಅನಾಹುತದಿಂದಲೂ ಪಾರಾಗಬಹುದು ಎನ್ನುವುದಕ್ಕೆ ವಿಮಾನ ಅಪಘಾತದಲ್ಲಿ ಕೂದಲೆಳೆ ಅಂತರದಲ್ಲಿ ಬದುಕುಳಿದ ಭೂಮಿ ಚೌಹಾಣ್ ಮತ್ತು ರೋಹನ್ ಬಗಾಡೆಯೇ ನಿದರ್ಶನ. ಏರಿಂಡಿಯಾದಲ್ಲಿ ತೆರಳಬೇಕಿದ್ದ ಭೂಮಿ ಏರ್ಪೋರ್ಟ್‌ಗೆ ತಲುಪುವುದು 10 ನಿಮಿಷ ತಡವಾಗಿದ್ದಕ್ಕೆ ಜೀವ ಉಳಿಸಿಕೊಂಡಿದ್ದಾರೆ. ಮತ್ತೊಂದೆಡೆ ಹಾಸ್ಟೆಲ್‌ ಮೆಸ್‌ನಿಂದ 15 ನಿಮಿಷ ಮುಂಚೆ ತೆರಳಿದ್ದಕ್ಕೆ ರೋಹನ್ ಬದುಕುಳಿದಿದ್ದಾರೆ.

ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳಬೇಕಿದ್ದ ಭೂಮಿ ಟ್ರಾಫಿಕ್ ಕಾರಣದಿಂದ ವಿಮಾನ ನಿಲ್ದಾಣಕ್ಕೆ 10 ನಿಮಿಷ ತಡವಾಗಿ ತೆರಳಿದ್ದರು. ಹೀಗಾಗಿ ವಿಮಾನ ಹತ್ತುವುದಕ್ಕೆ ಸಾಧ್ಯವಾಗಿರಲಿಲ್ಲ. ಇದು ಅವರ ಜೀವ ಉಳಿಯಲು ಕಾರಣವಾಯಿತು. ಈ ಬಗ್ಗೆ ಭೂಮಿ ಪ್ರತಿಕ್ರಿಯಿಸಿದ್ದು, ಆ ಹತ್ತು ನಿಮಿಷ ತಡವಾಗಿದ್ದ ಕಾರಣಕ್ಕೆ ವಿಮಾನ ಹತ್ತಲು ಆಗಲಿಲ್ಲ. ಇದನ್ನು ಹೇಗೆ ವಿವರಿಸಬೇಕೆಂದು ತಿಳಿಯುತ್ತಿಲ್ಲ. ನನ್ನ ದೇಹ ಅಕ್ಷರಶಃ ನಡು ಗುತ್ತಿದೆ. ದೇವರಿಗೆ ಕೃತಜ್ಞತೆ ಸಲ್ಲಿಸುವೆ ಎಂದು ಘಟನೆ ಬಗ್ಗೆ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.

ಮತ್ತೊಂದು ಘಟನೆಯಲ್ಲಿ ಬಿ.ಜೆ ಆಸ್ಪತ್ರೆಯ ಇಂಟರ್ನಿ ರೋಹನ್ ಬಗಾಡೆ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ರೋಹನ್ ದುರಂತ ನಡೆದ ಹಾಸ್ಟೆಲ್‌ನಲ್ಲಿದ್ದರು. ದುರಂತಕ್ಕೂ ಕೇವಲ 15 ನಿಮಿಷದ ಮುನ್ನ ಊಟ ಮಾಡಿ ಮೆಸ್‌ನಿಂದ ತೆರಳಿ ಜೀವ ಉಳಿಸಿಕೊಂಡಿದ್ದಾರೆ. ಈ ಬಗ್ಗೆ ರೋಹನ್ ಪ್ರತಿಕ್ರಿಯಿಸಿದ್ದು, ನಾನು ಇನ್ನು 15 ನಿಮಿಷಗಳ ಕಾಲ ಆ ಸ್ಥಳದಲ್ಲೇ ಇದ್ದಿದ್ದರೆ ಗಾಯಗೊಂಡ ಅನೇಕರಲ್ಲಿ ನಾನೂ ಒಬ್ಬನಾಗುತ್ತಿದೆ. ಆಗಷ್ಟೇ ಮೆಸ್‌ನಲ್ಲಿ ಊಟ ಮುಗಿಸಿ ಹಾಸ್ಟೆಲ್‌ಗೆ ತೆರಳಿದ್ದೆ. ಆಗದೊಡ್ಡ ಶಬ್ದ ಕೇಳಿಸಿತು ಹೊರ ಬಂದು ನೋಡಿದಾಗ ಆಕಾಶ ಕಪ್ಪು ಹೊಗೆಯಿಂದ ತುಂಬಿ ಹೋಗಿತ್ತು ಎಂದಿದ್ದಾರೆ.