: ರಾಜಸ್ಥಾನದಲ್ಲಿ ಕಾಂಗ್ರೆಸ್‌ ವಿರುದ್ಧ ಬಂಡೆದ್ದು ಸಂಧಾನದ ಬಳಿಕ ತಣ್ಣಗಾಗಿರುವ ಪೈಲಟ್| ಕಾಂಗ್ರೆಸ್ಸಿಗೆ ಮರಳಿದ್ದೇನೆ ಎನ್ನಲು ನಾನು ಪಕ್ಷ ತೊರೆದೇ ಇಲ್ಲ: ಪೈಲಟ್‌

ಜೈಪುರ(ಆ.12): ರಾಜಸ್ಥಾನದಲ್ಲಿ ಕಾಂಗ್ರೆಸ್‌ ವಿರುದ್ಧ ಬಂಡೆದ್ದು ಸಂಧಾನದ ಬಳಿಕ ತಣ್ಣಗಾಗಿರುವ ಪದಚ್ಯುತ ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌, ‘ನಾನು ಪಕ್ಷಕ್ಕೆ ಮರಳಿದ್ದೇನೆ ಎಂದು ಹೇಳಲು ಆಗದು. ಏಕೆಂದರೆ ನಾನು ಕಾಂಗ್ರೆಸ್‌ ತೊರೆದೇ ಇಲ್ಲ’ ಎಂದಿದ್ದಾರೆ. ಅಲ್ಲದೆ, ತಮ್ಮನ್ನು ಇತ್ತೀಚೆಗೆ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ‘ನಿಕಮ್ಮಾ’ (ಅಸಮರ್ಥ) ಎಂದಿರುವುದು ತಮಗೆ ನೋವು ತರಿಸಿದೆ ಎಂದೂ ಹೇಳಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ರಾಜಸ್ಥಾನದ ಬಂಡಾಯ ನಾಯಕ ಪೈಲಟ್‌ ದಾರಿ ಬದಲಿಸಿದ್ದೇಕೆ?

ಜೈಪುರಕ್ಕೆ ಮಂಗಳವಾರ ಮರಳಿ ಮಾತನಾಡಿದ ಅವರು, ‘ನಾನು ಯಾವತ್ತೂ ಕಾಂಗ್ರೆಸ್‌ನಲ್ಲೇ ಇದ್ದೇನೆ. ರಾಜಸ್ಥಾನಲ್ಲಿನ ಆಡಳಿತ ಶೈಲಿಯ ಬಗ್ಗೆ ಕೆಲವು ತಕರಾರುಗಳಿದ್ದವು. ಅವುಗಳನ್ನು ಪ್ರಸ್ತಾಪಿಸಬೇಕು ಎಂಬುದಷ್ಟೇ ನಮ್ಮ ಉದ್ದೇಶವಾಗಿತ್ತು. ಪಕ್ಷದ ವೇದಿಕೆಯಲ್ಲಿ ಹೇಳುವುದನ್ನು ಬಂಡಾಯ ಎನ್ನಲಾಗದು. ಇನ್ನು ಮುಂದೆಯೂ ನಾನು ಏನು ಹೇಳಬೇಕೋ ಅದನ್ನು ನೇರವಾಗಿ ಹೇಳೇ ಹೇಳುತ್ತೇನೆ’ ಎಂದರು.

ಸಚಿನ್‌ ಪೈಲಟ್‌ ಅವರು ಕಾಂಗ್ರೆಸ್ಸಿಗೆ ಮರಳಿರುವುದರಿಂದ ರಾಜಸ್ಥಾನ ಬಿಜೆಪಿ ಸರ್ಕಾರ ಪತನಗೊಳಿಸುವ ಬಿಜೆಪಿ ಪ್ರಯತ್ನಕ್ಕೆ ತೀವ್ರ ಹಿನ್ನಡೆಯಾಗಿದೆ.

ಪ್ರಿಯಾಂಕಾ ತಂತ್ರಗಾರಿಕೆ: ಪೈಲಟ್‌ ಮತ್ತೆ ‘ಕೈ’ವಶ!

‘ನಿಮ್ಮನ್ನು ಗೆಹ್ಲೋಟ್‌ ‘ನಿಕಮ್ಮಾ’ ಎಂದಿದ್ದಾರಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದ ಪೈಲಟ್‌, ‘ಅವರು ಹಿರಿಯರು. ನನಗೆ ಆ ರೀತಿ ಕರೆದಿದ್ದಕ್ಕೆ ನೋವಾಗಿದೆ. ಆದರೆ ನಾನು ಅಂಥ ಹೇಳಿಕೆಯನ್ನು ಯಾವತ್ತೂ ನೀಡಲಿಲ್ಲ. ನಾನು ರಾಜಸ್ಥಾನಕ್ಕೆ ಏನು ಕೆಲಸ ಮಾಡಿಕೊಟ್ಟಿದ್ದೇನೆ ಎಂದು ಜನರು, ಶಾಸಕರು ಎಲ್ಲರೂ ನೋಡಬಹುದು’ ಎಂದು ಪರೋಕ್ಷ ತಿರುಗೇಟು ನೀಡಿದರು.