ಪ್ರಧಾನಿ ನರೇಂದ್ರ ಮೋದಿ ಇಂಧನ ಪೂರೈಕೆ ಕೊರತೆ ಕುರಿತು ಸೂಚನೆ ನೀಡಿದ ಬೆನ್ನಲ್ಲೇ ಹಲವೆಡೆ ಪೆಟ್ರೋಲ್ ಬಂಕ್ ಕ್ಲೋಸ್ ಆಗುತ್ತಿದೆ. ಈ ಆತಂಕದ ಬೆನ್ನಲ್ಲೇ ಪೆಟ್ರೋಲಿಯಂ ಸಚಿವಾಲಯ ಸುದ್ದಿಗೋಷ್ಠಿ ಕರೆದಿದೆ. 

ನವದೆಹಲಿ (ಮೇ.11) ಯುದ್ಧದ ಹಿನ್ನಲೆಯಲ್ಲಿ ಇಂಧನ ಹಾಗೂ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಜೊತೆಗೆ ವಿದೇಶಿ ವಿನಿಮಮಯ ಸಮಸ್ಯೆ, ಆರ್ಥಿಕ ಹಿನ್ನಡೆ, ಹಣ ದುಬ್ಬ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ದೇಶದ ಜನತೆಗೆ ಸೂಚನೆ ನೀಡಿದ್ದಾರೆ. ಇಂಧನ ಉಳಿತಾಯ ಸೇರಿದಂತೆ ಹಲವು ಕ್ರಮಗಳ ಕೈಗೊಳ್ಳಲು ಮೋದಿ ಕೆಲ ಸೂತ್ರ ಅನುಸರಿಸಲು ಸೂಚಿಸಿದ್ದಾರೆ. ಇತ್ತ ದೇಶದ ಕೆಲವೆಡೆ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಕೊರತೆ ಎದುರಾಗಿದೆ. ಇಂಧನ ಆತಂಕ ಹೆಚ್ಚಾಗುತ್ತಿದ್ದಂತೆ ಇಂದು ಮಧ್ಯಾಹ್ನ ಮೂರು ಗಂಟೆಗೆ ಪೆಟ್ರೋಲಿಯಂ ಸಚಿವಾಲಯ ಮಹತ್ವದ ಸುದ್ದಿಗೋಷ್ಠಿ ನಡೆಸುತ್ತಿದೆ. ಈ ವೇಳೆ ಕೆಲ ಆದೇಶಗಳು ಹೊರಬೀಳುವ ಸಾಧ್ಯತೆ ಇದೆ.

Add Asianetnews Kannada as a Preferred SourcegooglePreferred

ಕಚ್ಚಾ ತೈಲ ಬೆಲೆ ಏರಿಕೆಯಿಂದ ಭಾರತ ಸೇರಿದಂತೆ ಹಲವು ದೇಶಗಳ ಆರ್ಥಿಕತೆಗೆ ತೀವ್ರ ಹೊಡೆತ ಬೀಳುತ್ತಿದೆ. ಮೋದಿ ಮನವಿ ಮಾಡಿದ ಬೆನ್ನಲ್ಲೇ ದೇಶಾದ್ಯಂತ ಭಾರಿ ಚರ್ಚೆಗಳು ಶುರುವಾಗಿದೆ. ಪರ್ಯಾಯ ಮಾರ್ಗ ಬಳಕೆ ಕುರಿತು ಮಾತುಕತೆ ನಡೆಯುತ್ತಿದೆ. ಇದೀಗ ಇಂದಿನ ಸುದ್ದಿಗೋಷ್ಠಿಯಲ್ಲಿ ಪೆಟ್ರೋಲ್, ಡೀಸೆಲ್ ಸಂಗ್ರಹ ಹಾಗೂ ಪೂರೈಕೆ, ಅನಿಲ ಪೂರೈಕೆ, ದರ ಸೇರಿದಂತೆ ಹಲವು ನಿರ್ಧಾರಗಳು ಹೊರಬೀಳುವ ಸಾಧ್ಯತೆ ಇದೆ.

ಸಬ್ಸಿಡಿ ವಿಸ್ತರಣೆ ಅಥವಾ ಬೆಲೆ ಇಳಿಕೆ?

ಎಲ್‌ಪಿಜಿ ಅಡುಗೆ ಅನಿಲದ ದರದ ಕುರಿತು ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ ಸಬ್ಸಿಡಿ ಸೇರಿದಂತೆ ಹಲವು ದರಗಳ ಕುರಿತು ಕೆಲ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಉಜ್ವಲ ಸಿಲಿಂಡರ್ ಸಬ್ಸಿಡಿ ವಿಸ್ತರಿಸುವ ಅಥವಾ ಸಿಲಿಂಡರ್ ಬೆಲೆ ತಗ್ಗಿಸುವ ನಿರ್ಧಾರಗಳು ಹೊರಬಿದ್ದರೂ ಅಚ್ಚರಿಯಿಲ್ಲ.

ಇಂಧನ ದಾಸ್ತಾನು ಎಷ್ಟಿದೆ? ಸರ್ಕಾರದ ಮುನ್ನಚ್ಚರಿಕೆ, ಪೂರೈಕೆಗೆ ಕೈಗೊಂಡಿರುವ ಮಾರ್ಗಗಳ ಕುರಿತು ಸಚಿವಾಲಯ ಸ್ಪಷ್ಟನೆ ನೀಡಲಿದೆ. ಇದೇ ವೇಳೆ ವಿಮಾನದ ಇಂಧನ ದರ ಕುರಿತು ನಿರ್ಧಾರ ಹೊರಬೀಳು ಸಾಧ್ಯತೆ ಇದೆ. ಇದೇ ವೇಳೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆ ಕುರಿತು ನಿರ್ಧಾರ ಪ್ರಕಟಗೊಳ್ಳಲಿದೆ ಎಂಬ ನಿರೀಕ್ಷೆಗಳಿವೆ. ಮೂಲಗಳ ಪ್ರಕಾರ 2 ರಿಂದ 3 ರೂಪಾಯಿ ಇಳಿಕೆಯಾಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಇದೇ ವೇಳೆ ಎಥೆನಾಲ್ ಇಂಧನ ಬಳಕೆ, ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ, ಪರಿಸರ ಸ್ನೇಹಿ ಇಂಧನ ಬಳಕೆ ಸೇರಿದಂತೆ ಹಲವು ಪರ್ಯಾಯ ಮಾರ್ಗಗಳ ಕುರಿತ ಯೋಜನೆಗಳು ಘೋಷಣೆಯಾಗುವ ಸಾಧ್ಯತೆ ಇದೆ.