ಶಾಂತಿಯುತ ಪ್ರತಿಭಟನೆ ದೇಶದ್ರೋಹ ಅಲ್ಲ: ಕೋರ್ಟ್
ಅಹಿಂಸಾ ಸತ್ಯಾಗ್ರಹದಿಂದಲೇ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ರಾಷ್ಟ್ರ ನಮ್ಮದು| ಶಾಂತಿಯುತ ಪ್ರತಿಭಟನೆ ದೇಶದ್ರೋಹ ಅಲ್ಲ: ಕೋರ್ಟ್|
ಮುಂಬೈ/ನವದೆಹಲಿ[ಫೆ.16]: ಸರ್ಕಾರ ಜಾರಿಗೆ ತಂದ ಯಾವುದೇ ಕಾನೂನಿನ ವಿರುದ್ಧ ಶಾಂತಿಯುತವಾಗಿ ಹೋರಾಟ ನಡೆಸುವವರನ್ನು ದೇಶದ್ರೋಹಿಗಳು ಎಂದು ಪರಿಗಣಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ನ ಔರಂಗಾಬಾದ್ ಪೀಠ ಹೇಳಿದೆ.
ಅಹಿಂಸಾ ಸತ್ಯಾಗ್ರಹದಿಂದಲೇ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ರಾಷ್ಟ್ರ ನಮ್ಮದು. ಇನ್ನೂ ಅಹಿಂಸಾ ಸತ್ಯಾಗ್ರಹದ ಮೇಲೆ ಭರವಸೆ ಹೊಂದಿರುವ ನಾಗರಿಕರಿಗೆ, ತಮಗೆ ಸರಿ ಎನಿಸದ ವಿಚಾರಗಳ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸುವ ಹಕ್ಕಿದೆ ಎಂದು ಹೇಳಿದೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಸಿಎಎ ವಿರುದ್ಧ ಪ್ರತಿಭಟನೆಗೆ ಅವಕಾಶ ಕೋರಿದ್ದ ಇಫ್ತಿಖರ್ ಶೇಖ್ ಎಂಬುವರ ಅರ್ಜಿಯನ್ನು ಪೊಲೀಸರು ಮತ್ತು ಜಿಲ್ಲಾ ಮ್ಯಾಜಿಸ್ಪ್ರೇಟ್ ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಶೇಖ್ ಹೈಕೋರ್ಟ್ ಮೊರೆ ಹೋಗಿದ್ದರು.
ಇದೀಗ ಅರ್ಜಿದಾರರು ಸಹ ಸಿಎಎ ವಿರುದ್ಧ ಶಾಂತಿಯುತ ಪ್ರತಿಭಟನೆಗೆ ಅವಕಾಶ ಕೋರಿದ್ದಾರೆ. ಯಾವುದೇ ಕಾನೂನಿನ ವಿರುದ್ಧ ಶಾಂತಿಯುತ ಪ್ರತಿಭಟನೆ ದೇಶದ್ರೋಹವೂ ಅಲ್ಲ ಎಂದು ನ್ಯಾಯಾಲಯ ಪ್ರತಿಪಾದಿಸಿದೆ.