ಕೆಮ್ಮಿನ ಔಷಧ ಎಂದು ಲೈಸೆನ್ಸ್‌ ಪಡೆದಿದ್ದ ಬಾಬಾ ರಾಮದೇವ್‌!| ಕೊರೋನಾ ಔಷಧ ಎಂದು ಉತ್ತರಾಖಂಡಕ್ಕೆ ಹೇಳೇ ಇರಲಿಲ್ಲ| ನೋಟಿಸ್‌ ಜಾರಿ ಮಾಡಲು ಆಯುರ್ವೇದ ಇಲಾಖೆ ನಿರ್ಧಾರ

ಡೆಹ್ರಾಡೂನ್(ಜೂ.25)‌: ಯೋಗಗುರು ಬಾಬಾ ರಾಮದೇವ್‌ ಅವರ ಪತಂಜಲಿ ಸಂಸ್ಥೆಯ ಕೊರೋನಿಲ್‌ ಕಿಟ್‌ಗೆ ಕೇಂದ್ರ ಆಯುಷ್‌ ಸಚಿವಾಲಯ ಬ್ರೇಕ್‌ ಹಾಕಿದ ಬೆನ್ನಲ್ಲೇ, ಔಷಧ ಮಾರಾಟಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ವೇಳೆ ಪತಂಜಲಿ ಕಂಪನಿಯು ಇದು ಕೊರೋನಾ ಔಷಧ ಎಂಬ ಅಂಶವನ್ನೇ ಪ್ರಸ್ತಾಪಿಸಿರಲಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಕುರಿತು ಹೇಳಿಕೆ ನೀಡಿರುವ ಉತ್ತರಾಖಂಡದ ಆಯುರ್ವೇದ ಇಲಾಖೆಯ ಔಷಧ ಲೈಸೆನ್ಸ್‌ ವಿತರಣಾ ಅಧಿಕಾರಿಯೊಬ್ಬರು, ‘ಕೆಮ್ಮು ಮತ್ತು ಜ್ವರ ಬರದಂತೆ ತಡೆಯಲು ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧದ ಹೆಸರಲ್ಲಿ ಪತಂಜಲಿ ಸಂಸ್ಥೆ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಿತ್ತು. ಅದರಂತೆ ನಾವು ಕಂಪನಿಗೆ ಔಷಧ ಮಾರಾಟಕ್ಕೆ ಅನುಮತಿ ನೀಡಿದ್ದೆವು. ಆದರೆ ಅವರು ಅದನ್ನು ಕೋವಿಡ್‌ 19ಗೆ ಔಷಧ ಕಿಟ್‌ ಎಂದು ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ನಾವು ಅವರಿಗೆ ನೋಟಿಸ್‌ ಜಾರಿ ಮಾಡಲಿದ್ದೇವೆ’ ಎಂದು ಹೇಳಿದ್ದಾರೆ.

ಕೊರೋನಾಕ್ಕೆ ಔಷಧಿ ಕಂಡುಹಿಡಿದೆವು ಎಂದು ಬೀಗುತ್ತಿದ್ದ ಪತಂಜಲಿಗೆ ಆಯುಷ್ ಶಾಕ್!

ಮಂಗಳವಾರವಷ್ಟೇ ಪತಂಜಲಿ ಸಂಸ್ಥೆ ‘ಕೊರೊನಿಲ್‌, ಶ್ವಾಸಾರಿ ಮತ್ತು ಅನುತೈಲ’ ಎಂಬ 3 ಔಷಧಗಳನ್ನು ಒಳಗೊಂಡ ಔಷಧ ಕಿಟ್‌ ಬಿಡುಗಡೆ ಮಾಡಿತ್ತು. 545 ರು.ನ ಈ ಕಿಟ್‌ ಬಳಸಿದರೆ ಕೇವಲ 7 ದಿನದಲ್ಲಿ ಕೊರೋನಾದಿಂದ ಗುಣುಮಖರಾಗಬಹುದು ಎಂದು ಹೇಳಿತ್ತು. ಆದರೆ ಔಷಧ ಬಿಡುಗಡೆಯಾದ ಕೆಲ ಹೊತ್ತಿನಲ್ಲೇ ಔಷಧದ ಕುರಿತು ತನಗೇನೂ ಮಾಹಿತಿ ಇಲ್ಲ ಎಂದಿದ್ದ ಆಯುಷ್‌ ಸಚಿವಾಲಯ, ಔಷಧದಲ್ಲಿ ಏನೇನು ಅಂಶಗಳಿವೆ, ಅದರ ಪ್ರಯೋಗ ಎಲ್ಲಿ ನಡೆಯಿತು? ಪರೀಕ್ಷಾ ಸ್ಯಾಂಪಲ್‌, ಸ್ಥಳ, ಆಸ್ಪತ್ರೆ, ರೋಗಿಗಳ ಅಂಕಿ- ಅಂಶ ಸೇರಿದಂತೆ ಎಲ್ಲಾ ವಿವರಗಳನ್ನು ತನಗೆ ಸಲ್ಲಿಸಬೇಕು ಎಂದು ಕಂಪನಿಗೆ ಸೂಚಿಸಿತ್ತು. ಅಲ್ಲದೆ ಔಷಧ ಕಿಟ್‌ ಕುರಿತು ಪ್ರಚಾರ ಮಾಡದಂತೆಯೂ ಸೂಚಿಸಿತ್ತು.