4ನೇ ದಿನವೂ ಸಂಸತ್ ಕಲಾಪಕ್ಕೆ ವಿಪಕ್ಷಗಳ ಅಡ್ಡಿ: ಬೆಲೆ ಏರಿಕೆ, ಜಿಎಸ್ಟಿ ಕುರಿತು ಪ್ರತಿಭಟನೆ
ಮುಂಗಾರು ಅಧಿವೇಶನ ನಾಲ್ಕನೇ ದಿನವಾದ ಗುರುವಾರವೂ ವಿಪಕ್ಷಗಳು ನಾನಾ ವಿಷಯ ಮುಂದಿಟ್ಟುಕೊಂಡು ಸಂಸತ್ತಿನ ಉಭಯ ಸದನಗಳಲ್ಲಿ ಭಾರೀ ಗದ್ದಲ ಎಬ್ಬಿಸಿದ ಕಾರಣ, ಕಲಾಪಗಳನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು.
ನವದೆಹಲಿ (ಜು.22): ಮುಂಗಾರು ಅಧಿವೇಶನ ನಾಲ್ಕನೇ ದಿನವಾದ ಗುರುವಾರವೂ ವಿಪಕ್ಷಗಳು ನಾನಾ ವಿಷಯ ಮುಂದಿಟ್ಟುಕೊಂಡು ಸಂಸತ್ತಿನ ಉಭಯ ಸದನಗಳಲ್ಲಿ ಭಾರೀ ಗದ್ದಲ ಎಬ್ಬಿಸಿದ ಕಾರಣ, ಕಲಾಪಗಳನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು. ಲೋಕಸಭೆಯಲ್ಲಿ ಮಸೂದೆ ಮಂಡನೆಗಾಗಿ ವಿಪಕ್ಷಗಳನ್ನು ಹಾಜರಿರುವಂತೆ ಸರ್ಕಾರ ಕೋರಿದರೂ ಸಹ ವಿಪಕ್ಷಗಳು ಹೊರನಡೆದ್ದರಿಂದ ಊಟದ ವಿರಾಮದವರೆಗೆ ಅಧಿವೇಶನವನ್ನು ಮುಂದೂಡಲಾಯಿತು.
ಮಧ್ಯಾಹ್ನದ ನಂತರವೂ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಬೆಲೆ ಏರಿಕೆ ವಿರೋಧಿಸಿ ಸದನದ ಹೊರಗೆ ಪ್ರತಿಭಟನೆ ನಡೆಸುತ್ತಾ ಸದನಕ್ಕೆ ಹಾಜರಾಗದ ಕಾರಣ ಅಧಿವೇಶನವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು. ಇನ್ನು ರಾಜ್ಯಸಭೆಯಲ್ಲಿ ವಿಪಕ್ಷಗಳ ನಾಯಕರು ಬೆಲೆ ಏರಿಕೆ, ಹೊಸ ವಸ್ತುಗಳಿಗೆ ಜಿಎಸ್ಟಿ ಮತ್ತು ಅಗ್ನಿಪಥ ಯೋಜನೆಗಳನ್ನು ವಿರೋಧಿಸಿ, ಭಿತ್ತಿಪತ್ರಗಳನ್ನು ಪ್ರದರ್ಶಿಸುತ್ತಾ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಕಾರಣ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು.
ಲೋಕಸಭೆ-ರಾಜ್ಯಸಭೆಯಲ್ಲಿ ಮುಂದುವರಿದ ಹೈಡ್ರಾಮಾ, ಕಲಾಪ ಮುಂದೂಡಿಕೆ!
ಒಂದು ದಿನ ವಿಪಕ್ಷ ಬಯಸಿದ ವಿಷಯ ಚರ್ಚೆಗೆ ಅವಕಾಶಕ್ಕೆ ಮನವಿ: ಮುಂಗಾರು ಅಧಿವೇಶನ ಆರಂಭವಾದಾಗಿನಿಂದಲೂ ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿರುವುದರಿಂದ, ವಾರದಲ್ಲಿ ಒಂದು ದಿನವನ್ನು ವಿಪಕ್ಷಗಳು ಬಯಸುವ ವಿಷಯಗಳನ್ನು ಚರ್ಚಿಸಲು ಮೀಸಲಿಡಬೇಕು ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಸಲಹೆ ನೀಡಿದ್ದಾರೆ. ವಿಪಕ್ಷಗಳು ಬಯಸುವ ವಿಷಯ ಚರ್ಚೆ ನಡೆಸುವ ನಿಯಮಕ್ಕೆ ತಿದ್ದುಪಡಿ ತನ್ನಿ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ದ್ವಂದ್ವ ನೀತಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ಸದನದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವುದನ್ನು ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ. ಬುಧವಾರ ಬೆಲೆ ಏರಿಕೆಯ ಕುರಿತಾಗಿ ಚರ್ಚೆಗೆ ಆಹ್ವಾನಿಸಿದ್ದ ವಿಪಕ್ಷಗಳು ಗುರುವಾರ ಆ ವಿಷಯ ಕೈಬಿಟ್ಟು ಪ್ರತಿಭಟನೆ ಆರಂಭಿಸಿವೆ. ಜನ ಸಾಮಾನ್ಯರ ಪರವಾಗಿ ಮಾತನಾಡುವುದನ್ನು ಮರೆತು ಧರಣಿ ನಡೆಸುತ್ತಿದ್ದಾರೆ. ನಾವು ಬೆಲೆ ಏರಿಕೆ ಕುರಿತಾದ ಚರ್ಚೆಗೆ ಸಿದ್ಧರಿದ್ದೇವೆ. ಆದರೆ ಅದನ್ನು ಬಿಟ್ಟು ಸೋನಿಯಾ ಅವರ ಪರವಾಗಿ ಪ್ರತಿಭಟನೆ ಮಾಡುತ್ತಿದ್ದೀರಾ. ಅವರು ಕಾನೂನಿಗಿಂತಾ ದೊಡ್ಡವರಾ ಎಂದು ಕಾಂಗ್ರೆಸ್ ನಾಯಕರ ನಡೆಗೆ ತಿರುಗೇಟು ನೀಡಿದ್ದಾರೆ.
ಕಲಾಪ ಅಡ್ಡಿಪಡಿಸುವುದು, ನಂತರ ಸುಳ್ಳು ಹೇಳುವುದು: ಸಂಸತ್ ನಲ್ಲಿ ಚರ್ಚೆ ನಡೆಯದಂತೆ ಅಡ್ಡಿಪಡಿಸುವುದು ನಂತರ ಹೊರಗೆ ಬಂದು ಸುಳ್ಳು ಹೇಳುವುದೇ ಕಾಂಗ್ರೆಸ್ ನ ಸಿಂಗಲ್ ಪಾಯಿಂಟ್ ಅಜೆಂಡಾ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಪ್ರತಿಪಕ್ಷದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಸಾರಾನಾಥದ ಸಿಂಹ vs ಸಂಸತ್ ಭವನದ ಸಿಂಹ: ವ್ಯತ್ಯಾಸಗಳನ್ನು ತಿಳಿಸಿದ ಕೇಂದ್ರ ಸಚಿವ!
ಜೋಶಿ ತಿರುಗೇಟು: ರಾಜ್ಯಸಭೆ ಕಲಾಪದಲ್ಲಿ ಚರ್ಚೆಗೆ ಅವಕಾಶ ಕೊಟ್ಟಿಲ್ಲ ಎಂದು ಟ್ವೀಟ್ ಮಾಡಿದ ಕಾಂಗ್ರೆಸ್ ಪಕ್ಷದ ರಾಜ್ಯಸಭೆ ಸದಸ್ಯ, ಕೇಂದ್ರದ ಮಾಜಿ ಸಚಿವ ಜೈರಾಂ ರಮೇಶ್, ಆಹಾರ ಪದಾರ್ಥಗಳ ಮೇಲಿನ ಜಿಎಸ್ ಟಿ ದರ ಹೆಚ್ಚಳ ಒಮ್ಮತದ ನಿರ್ಧಾರವಲ್ಲ ಅಂತ ಟ್ವಿಟರ್ ನಲ್ಲಿ ಟೀಕಿಸಿದ್ದಾರೆ. ಈ ಬಗ್ಗೆ ಸುಧೀರ್ಘ ಟ್ವೀಟ್ ಮಾಡಿರುವ ಜೈರಾಂ ರಮೇಶ್, ಜಿಎಸ್.ಟಿ ಕೌನ್ಸಿಲ್ನಲ್ಲಿ ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ಇದು ಸರ್ವಸಮ್ಮತದ ನಿರ್ಧಾರವಲ್ಲ. ಕೇಂದ್ರ ಹಣಕಾಸು ಸಚಿವರು ರಾಜ್ಯಗಳ ಹಣಕಾಸು ಸಚಿವರ ಜೊತೆ ಚರ್ಚೆ ನಡೆಸಿಲ್ಲ ಎಂದು ಆಪಾದಿಸಿದ್ದಾರೆ.